ಉಭಯ ರಾಜ್ಯಗಳ ಸಂಘರ್ಷದಲ್ಲಿ ಕೇಂದ್ರದ ಮಧ್ಯಪ್ರವೇಶ
ಡ್ಯಾಂಗೆ ಇನ್ನು ಸಿಆರ್ಪಿಎಫ್ ಕಣ್ಗಾವಲು
ಒಪ್ಪಂದದಂತೆ ನೀರು ಹಂಚಿಕೆಗೆ ಕೇಂದ್ರೀಯ ಪಡೆ ನಿಗಾಹೈದರಾಬಾದ್: ಆಂಧ್ರಪ್ರದೇಶ ಪೊಲೀಸರು ತೆಲಂಗಾಣದ ನಾಗಾರ್ಜುನ ಸಾಗರ ಅಣೆಕಟ್ಟೆಗೆ ನುಗ್ಗಿ ಆಂಧ್ರಕ್ಕೆ ಕಾಲುವೆ ಮೂಲಕ ನೀರು ಬಿಡುಗಡೆ ಮಾಡಿಕೊಂಡ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಇದರಿಂದ ಉದ್ವಿಗ್ನತೆ ತಣ್ಣಗಾಗಿದ್ದು, ಎರಡೂ ರಾಜ್ಯಗಳು ಜಲಕದನಕ್ಕೆ ವಿರಾಮ ಘೋಷಿಸಲು ನಿರ್ಧರಿಸಿವೆ.ಆಂಧ್ರದ ಸುಮಾರು 500 ಶಸ್ತ್ರಸಜ್ಜಿತ ಪೊಲೀಸರು ಶುಕ್ರವಾರ ತೆಲಂಗಾಣ ವ್ಯಾಪ್ತಿಯ ನಾಗಾರ್ಜುನ ಸಾಗರ ಅಣೆಕಟ್ಟೆಗೆ ನುಗ್ಗಿ, ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಕೆನಾಲ್ ಗೇಟ್ ತೆರೆದು ಆಂಧ್ರದತ್ತ 5 ಸಾವಿರ ಕ್ಯುಸೆಕ್ ನೀರು ಬಿಡಿಸಿದ್ದರು. ತೆಲಂಗಾಣವು ‘ಇದು ಅಕ್ರಮ’ ಎಂದು ಆರೋಪಿಸಿತ್ತು. ಆದರೆ ‘ನಮಗೆ ನ್ಯಾಯಯುತವಾಗಿ ಹಂಚಿಕೆಯಾದ ನೀರು ಬಿಟ್ಟುಕೊಂಡಿದ್ದೇವೆ. ಇದರಲ್ಲಿ ತಪ್ಪಿಲ್ಲ’ ಎಂದು ಆಂಧ್ರ ಸರ್ಕಾರ ವಾದಿಸಿತ್ತು.ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಕೇಂದ್ರವು ವಿವಾದದಲ್ಲಿ ಶನಿವಾರ ಮಧ್ಯಪ್ರವೇಶಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಆಂಧ್ರ-ತೆಲಂಗಾಣ ಜತೆ ವೀಡಿಯೊ ಕಾನ್ಫರೆನ್ಸ್ ನಡೆಸಿ, ಎರಡೂ ರಾಜ್ಯಗಳು ಅಣೆಕಟ್ಟೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಇದಕ್ಕೆ ಉಭಯ ರಾಜ್ಯಗಳು ಒಪ್ಪಿಕೊಂಡಿವೆ.ಸಂಧಾನ ಸೂತ್ರದ ಪ್ರಕಾರ ಇನ್ನು ಈ ಥರದ ಸಂಘರ್ಷ ತಡೆಗಟ್ಟಲು, ಅಣೆಕಟ್ಟನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲ್ವಿಚಾರಣೆ ಮಾಡಲಿದೆ. ಒಪ್ಪಂದದ ಅನುಸಾರ ಎರಡೂ ಕಡೆಯ ಸಮಾನ ನೀರು ಹಂಚಿಕೆಯನ್ನು ನೋಡಿಕೊಳ್ಳಲಿದೆ.