ಕನ್ನಡಪ್ರಭ ವಾರ್ತೆ ಬೆಂಗಳೂರು
ಫೆಂಗಲ್ ಚಂಡಮಾರುತದ ಪರಿಣಾಮ ನಗರದ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ. ಪರಿಣಾಮ, ಈರುಳ್ಳಿ ದರ ಶತಕ ಸಮೀಪಿಸಿದ್ದರೆ, ಟೊಮೆಟೋ ಸೇರಿ ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.ಗುರುವಾರ ಉತ್ತಮ ಗುಣಮಟ್ಟದ ಪ್ರಥಮ ದರ್ಜೆ ಈರುಳ್ಳಿ ದರ ₹80 - ₹90 ತಲುಪಿದ್ದರೆ, ಟೊಮೆಟೋ ₹60 ವರೆಗೂ ಮಾರಾಟವಾಗಿದೆ. ಹಾಪ್ಕಾಮ್ಸ್ನಲ್ಲಿ ಈರುಳ್ಳಿ ಕೇಜಿ ₹100ಕ್ಕೆ ಮಾರಾಟವಾಗಿದ್ದರೆ, ಬೆಳ್ಳುಳ್ಳಿ ಕೇಜಿಗೆ ₹547 ಆಗಿ ದಾಖಲೆ ಬರೆದಿದೆ. ಸಾಮಾನ್ಯ ಮಾರುಕಟ್ಟೆಯಲ್ಲೂ ಬೆಳ್ಳುಳ್ಳಿ ಗರಿಷ್ಠ ₹400 - ₹500 ಬೆಲೆಯಿತ್ತು. ನಿತ್ಯ ಅಗತ್ಯವಾದ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಕ್ರಮವಾಗಿ ಕೇಜಿಗೆ ₹98- ₹155 ಮತ್ತು ₹135ರಷ್ಟಿತ್ತು.
ಜತೆಗೆ, ಸೀಸನ್ ಆರಂಭದಿಂದ ಯಶವಂತಪುರ, ದಾಸನಪುರ ಎಪಿಎಂಸಿಗೆ ಮಾರುಕಟ್ಟೆಗೆ ಕರ್ನಾಟಕದ ಈರುಳ್ಳಿ ಕಡಿಮೆಯೇ ಬರುತ್ತಿದೆ. ಈ ವಾರದ ಮಳೆಯ ಪರಿಣಾಮ ಈರುಳ್ಳಿಯ ಗುಣಮಟ್ಟ ಹಾಳಾಗಿದೆ. ಈರುಳ್ಳಿಯ ಸಗಟು ಬೆಲೆಯೇ ₹65 - ₹70 ಆಗಿದೆ ಎಂದು ವರ್ತಕರು ತಿಳಿಸಿದ್ದಾರೆ. ಜತೆಗೆ ನಗರದ ಅಲ್ಲಲ್ಲಿ ಎನ್ಸಿಸಿಎಫ್ನಿಂದ ಕಡಿಮೆ ಬೆಲೆಗೆ ಮಾರಲಾಗುತ್ತಿರುವ ಚಿಕ್ಕ ಗಾತ್ರದ ಈರುಳ್ಳಿಗೆ ಬೇಡಿಕೆ ಬಂದಿದೆ.
ಬೆಳ್ಳುಳ್ಳಿಯನ್ನು ಕೇಜಿಗೆ ₹480 - ₹500 ನಂತೆ ಮಾರುತ್ತಿದ್ದೇವೆ ಎಂದು ವಿಜಯನಗರದ ತರಕಾರಿ ವ್ಯಾಪಾರಿ ಹೇಳಿದರು. ಗುಜರಾತ್ ಬೆಳ್ಳುಳ್ಳಿ ದರ ಇದಾಗಿದೆ. ಉಳಿದಂತೆ ಮಧ್ಯಪ್ರದೇಶ, ಗುಜರಾತ್ನಿಂದ ಬೆಳ್ಳುಳ್ಳಿ ಬರುತ್ತಿದೆ. ಹೀಗಾಗಿ ಬೆಲೆ ಹೆಚ್ಚಳಗೊಂಡಿದೆ. ಚೀನಾ ಬೆಳ್ಳುಳ್ಳಿಯಿಂದ ಕಾಯಿಲೆ ಎಂಬ ಸುದ್ದಿಯಿಂದಾಗಿಯೂ ಬೆಲೆ ಹೆಚ್ಚಳಗೊಂಡಿದೆ ಎಂದು ತಿಳಿಸಿದರು.ಇನ್ನು ಚಳಿಗಾಲದ ನೆಚ್ಚಿನ ಸೊಗಡವರೆ ಬೆಳೆ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಕಡಿಮೆ ಪ್ರಮಾಣದಲ್ಲಿ ಬಂದಿದ್ದರೂ ಸೊಗಡು ಇರದ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಇಷ್ಟಪಡುತ್ತಿಲ್ಲ. ಈ ಕಾರಣದಿಂದ ಬೆಲೆ ಹೆಚ್ಚಳಗೊಂಡಿದ್ದು, ಸದ್ಯದ ದರ ಪ್ರತಿ ಕೇಜಿಗೆ ₹95-₹110 ಗಳಾಗಿವೆ. ಡಿಸೆಂಬರ್ ಅಂತ್ಯ, ಸಂಕ್ರಾಂತಿ ವೇಳೆಗೆ ಹುಣಸೂರಿನ ಅವರೆ ಬರಲಿದ್ದು, ಆಗಿನ ಬೆಲೆ ಕಾದುನೋಡಬೇಕು ಎಂಬುದು ವ್ಯಾಪಾರಿಗಳು ಹೇಳುತ್ತಾರೆ.
ಇನ್ನು, ನುಗ್ಗಿಕಾಯಿ ಕೂಡಾ ಮಾರುಕಟ್ಟೆಯಲ್ಲಿ ವಿರಳವಾಗಿದ್ದು, ಒಂದಕ್ಕೆ ₹12- ₹13 ನಂತೆ ಮಾರಲಾಗುತ್ತಿದೆ.ತರಕಾರಿ ಬೆಲೆ
ಈರುಳ್ಳಿ - ₹80- ₹90ಬೆಳ್ಳುಳ್ಳಿ - ₹500
ಟೊಮೆಟೋ ₹60 -₹70ಬದನೆಕಾಯಿ - ₹40-₹56
ಡಬಲ್ ಬೀನ್ಸ್ - ₹120ಸೌತೆಕಾಯಿ - ₹28
ಮೂಲಂಗಿ - ₹50 - ₹70ಕ್ಯಾರೆಟ್ ₹80
ಬೀಟ್ರೂಟ್ - ₹70ಹಾಗಲಕಾಯಿ - ₹40
ಬೆಂಡೆಕಾಯಿ - ₹60ಆಲೂಗಡ್ಡೆ - ₹50- ₹60
ಹೂಕೋಸು - ₹40ಮಳೆಯಿಂದ ತರಕಾರಿ ಹೆಚ್ಚು ಡ್ಯಾಮೇಜ್ ಬರುತ್ತಿದ್ದು, ಸಗಟು ಮಾರುಕಟ್ಟೆಯಲ್ಲೇ ಈರುಳ್ಳಿ, ಟೊಮೆಟೋ ದರ ವಿಪರೀತವಾಗಿದೆ. ಹೀಗಾಗಿ ಚಿಲ್ಲರೆ ವ್ಯಾಪಾರಸ್ಥರೂ ದರ ಹೆಚ್ಚಿಸಬೇಕಾದುದು ಅನಿವಾರ್ಯ.
-ನಂಜಪ್ಪ, ವಿಜಯನಗರ ತರಕಾರಿ ವ್ಯಾಪಾರಸ್ಥ.ಮಳೆ ಪರಿಣಾಮ ಸಗಟು ಮಾರುಕಟ್ಟೆಗೆ ತರಕಾರಿ ಕಡಿಮೆ ಬಂದಿದೆ. ಹತ್ತು ದಿನ ಬೆಲೆಯೇರಿಕೆ ಕಾಣಬಹುದು. ಬಳಿಕ ಯಥಾಸ್ಥಿತಿಗೆ ಬರಲಿದೆ.
-ರಾಜಣ್ಣ, ಕಲಾಸಿಪಾಳ್ಯ ತರಕಾರಿ ಎಪಿಎಂಸಿ ಅಧಿಕಾರಿ.