ಗಟ್ಟಿ ಕಲ್ಲು, ಮಣ್ಣಿನಿಂದ ಕೂಡಿದ ಬೆಂಗಳೂರಲ್ಲಿ ಮೆಟ್ರೋ ಸುರಂಗ ಕೊರೆಯುವ ಕೆಲಸ ದೆಹಲಿಗಿಂತ 10 ಪಟ್ಟು ಕಠಿಣ

KannadaprabhaNewsNetwork | Updated : Feb 18 2025, 04:51 AM IST

ಗಟ್ಟಿ ಕಲ್ಲು, ಮಣ್ಣಿನಿಂದ ಕೂಡಿದ್ದ ರಚನೆಯಿರುವ ಬೆಂಗಳೂರಲ್ಲಿ ಮೆಟ್ರೋ ಸುರಂಗ ಕೊರೆಯುವುದು ದೆಹಲಿ ಮೆಟ್ರೋಗಿಂತ ಹತ್ತು ಪಟ್ಟು ಸವಾಲಿನ ಕೆಲಸವಾಗಿತ್ತು.

 ಬೆಂಗಳೂರು :  ಗಟ್ಟಿ ಕಲ್ಲು, ಮಣ್ಣಿನಿಂದ ಕೂಡಿದ್ದ ರಚನೆಯಿರುವ ಬೆಂಗಳೂರಲ್ಲಿ ಮೆಟ್ರೋ ಸುರಂಗ ಕೊರೆಯುವುದು ದೆಹಲಿ ಮೆಟ್ರೋಗಿಂತ ಹತ್ತು ಪಟ್ಟು ಸವಾಲಿನ ಕೆಲಸವಾಗಿತ್ತು.

ಇದು ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಗಾರಿ ನೇತೃತ್ವ ವಹಿಸಿದ್ದ ಮುಖ್ಯ ಎಂಜಿನಿಯರ್‌ ಸುಬ್ರಹ್ಮಣ್ಯ ಗುಡಿಗೆ ಹೇಳಿದ ಮಾತು.

ಮೆಟ್ರೋ ಮೊದಲ ಹಂತದಲ್ಲಿ 10ಕಿ.ಮೀ ಸುರಂಗ, 7 ನಿಲ್ದಾಣ ಮಾಡಲಾಗಿತ್ತು. ಆಗ 6 ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) ಕೆಲಸ ಮಾಡಿದ್ದವು. 2ನೇ ಹಂತದ ಗುಲಾಬಿ ಮಾರ್ಗದಲ್ಲಿ 13.75ಕಿಮೀ (ಹೋಗಿ ಬರುವ ಜೋಡಿ ಮಾರ್ಗ ಸೇರಿ 21ಕಿಮೀ) ಸುರಂಗ ಕೊರೆಯಲಾಗಿದೆ. 5.8 ಡಯಾಮೀಟರ್‌ ಒಳವ್ಯಾಸದ (ಹೊರವ್ಯಾಸ 6.8ಮೀ) ಸುರಂಗ ಇದಾಗಿದ್ದು, ಸುರಂಗ ಮಾರ್ಗಕ್ಕೆ ಸುಮಾರು ₹6000 ಕೋಟಿ ವೆಚ್ಚವಾಗಿದೆ.

ಸೋಮವಾರ ಸುರಂಗ ಕಾಮಗಾರಿ ಕುರಿತು ಮಾಹಿತಿ ನೀಡಿದ ಮುಖ್ಯ ಎಂಜಿನಿಯರ್‌ ಸುಬ್ರಹ್ಮಣ್ಯ ಗುಡಿಗೆ ಅವರು, 2020ರ ಆಗಸ್ಟ್‌ 20ರಂದು ಆರಂಭವಾಗಿದ್ದ ಸುರಂಗ ಕೊರೆವ ಕಾರ್ಯ 2024ರ ಅಕ್ಟೋಬರ್‌ 30ಕ್ಕೆ ಮುಗಿದಿದೆ. ಬೆಂಗಳೂರಿನ ಭೂಗರ್ಭ ಅತ್ಯಂತ ಸಂಕಿರ್ಣವಾಗಿದ್ದರಿಂದ ಈ ಮಧ್ಯೆ ಸಾಕಷ್ಟು ಸವಾಲನ್ನು ಎದುರಿಸಿದ್ದೇವೆ. 4 ಹಂತದಲ್ಲಿ ವರದ, ಊರ್ಜಾ, ವಿಂದ್ಯಾ, ಲವಿ, ವಾಮಿಕ, ರುದ್ರ, ತುಂಗಾ, ಭದ್ರಾ ಸೇರಿ 9 ಟಿಬಿಎಂಗಳು ಸುರಂಗ ಕೊರೆದಿವೆ. ಒಂದೊಂದು ಟಿಬಿಎಂಗಳು 400 ಟನ್‌ ತೂಕ ಹೊಂದಿದ್ದವು. 24ಗಂಟೆ ಕೆಲಸ ಮಾಡುತ್ತಿದ್ದ ಇವು ಪ್ರತಿ ನಿಮಿಷಕ್ಕೆ 10-12 ಮಿಲಿ ಮೀ. ಚಲಿಸುತ್ತಿದ್ದವು. ಗಟ್ಟಿ ಕಲ್ಲುಗಳು ಎದುರಾದರೆ 1-2 ಮಿಲಿ ಮೀ. ಮಾತ್ರ ಮುಂದಕ್ಕೆ ಹೋಗುತ್ತಿದ್ದವು ಎಂದು ವಿವರಿಸಿದರು.

ಟಿಬಿಎಂಗಳು ರಸ್ತೆ ಮಟ್ಟದಿಂದ ಸುಮಾರು 60 ಅಡಿವರೆಗೆ ಸುರಂಗ ಕೊರೆದಿವೆ. ಹೀಗೆ ಸಾಗುವಾಗ ಟಿಬಿಎಂಗಳ ಕಟ್ಟರ್‌ ಹೆಡ್‌ (ಕೊರೆಯುವ ಚಕ್ರಗಳು) ಸಿಲುಕಿದ್ದು, ಕಲ್ಲುಗಳಿಗೆ ಸಿಲುಕಿ ಹರಿತ ಕಳೆದುಕೊಳ್ಳುವುದು ಸಾಮಾನ್ಯವಾಗಿತ್ತು. ಕೆಲವೆಡೆ 100-150 ಮೀ ಅಂತರದಲ್ಲಿ ಕಟ್ಟರ್‌ ಹೆಡ್‌ ಹಾನಿಗೀಡಾಗುತ್ತಿತ್ತು. ಇವನ್ನು ಬದಲಿಸಿಕೊಂಡು ಮುನ್ನಗ್ಗಬೇಕಾಗಿತ್ತು ಎಂದು ತಿಳಿಸಿದರು.

ಟಿಬಿಎಂಗಳು ಮುಂದಕ್ಕೆ ಹೋಗುತ್ತಿದ್ದಂತೆ ಸಿಮೆಂಟ್‌ ಸ್ಲ್ಯಾಬ್‌ಗಳನ್ನು ಸುರಂಗದಲ್ಲಿ ಅಳವಡಿಸಿಕೊಳ್ಳುತ್ತ ಸಾಗಲಾಗಿದೆ. ಸುರಂಗದೊಳಕ್ಕೆ ನೀರು ಸೋರಿಕೆ ಆಗದಂತೆ 2 ಸ್ಲ್ಯಾಬ್‌ಗಳ ನಡುವೆ ಹೈಡ್ರೋಫೋಬಿಕ್‌ ಹಾಳೆಗಳನ್ನು ಅಳವಡಿಸಲಾಗಿದ್ದು, ಇವು ನೀರನ್ನು ಹೀರಿಕೊಳ್ಳುತ್ತವೆ. ಹೆಚ್ಚು ನೀರು ಬಂದರೆ ನಿರ್ವಹಣಾ ಯಂತ್ರಗಳು ತೆಗೆಯುತ್ತವೆ ಎಂದರು.

ಸದ್ಯ ಸುರಂಗದಲ್ಲಿ ಟ್ರ್ಯಾಕ್‌ , ಎಲೆಕ್ಟ್ರಿಫಿಕೇಶನ್‌, ಸಿಗ್ನಲಿಂಗ್‌ ಕಾಮಗಾರಿ ನಡೆಯುತ್ತಿವೆ. ಸುರಂಗದ ಒಳಗೆ 12 ನಿಲ್ದಾಣ ನಿರ್ಮಾಣ ಕಾಮಗಾರಿ ಶೇ.90 - ಶೇ.95ರಷ್ಟು ಮುಗಿದಿದೆ. ಸರಿಸುಮಾರು 18ಮೀ ಆಳದವರೆಗೆ ನಿಲ್ದಾಣ ನಿರ್ಮಾಣವಾಗಿದೆ. ಕಂಟ್ರೋಲ್‌ ಬ್ಲಾಸ್ಟಿಂಗ್‌ ಮಾಡಿಕೊಳ್ಳುತ್ತ ಭೂಮಿ ಕೊರೆಯಲಾಗಿತ್ತು ಎಂದು ಸುಬ್ರಹ್ಮಣ್ಯ ತಿಳಿಸಿದರು.

2026ರ ಡಿಸೆಂಬರ್‌ಗೆ ಗುಲಾಬಿ ಮಾರ್ಗ ಶುರು:

ಸುಮಾರು ₹11,500 ಕೋಟಿ ವೆಚ್ಚದ ‘ನಮ್ಮ ಮೆಟ್ರೋ’ದ 2ನೇ ಹಂತದ ಗುಲಾಬಿ ಮಾರ್ಗ 2026ರ ಡಿಸೆಂಬರ್‌ಗೆ ಆರಂಭವಾಗಲಿದೆ. ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗ ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ನಾಗವಾರದವರೆಗೆ (21.26 ಕಿ.ಮೀ) ಸಂಪರ್ಕಿಸುತ್ತಿದೆ. ಇದರಲ್ಲಿ ನಾಗವಾರದಿಂದ ಡೇರಿ ಸರ್ಕಲ್‌ವರೆಗೆ ಸುರಂಗ ಮಾರ್ಗವಿದೆ. ಎಂ.ಜಿ.ರಸ್ತೆ, ಜಯದೇವ, ಡೇರಿ ಸರ್ಕಲ್ ಹಾಗೂ ಜೆ.ಪಿ.ನಗರ 4ನೇ ಹಂತದಲ್ಲಿ ಇಂಟರ್‌ ಚೇಂಜ್‌ ಹೊಂದಿದೆ.

ಸುರಂಗ ಹಾಗೂ ನಿಲ್ದಾಣಕ್ಕೆ ಭೂಮಿ ಕೊರೆಯುವ ಮುನ್ನ ಮೇಲಿನ ಕಟ್ಟಡಗಳ ಧಾರಣ ಸಾಮರ್ಥ್ಯದ ಬಗ್ಗೆ ಸರ್ವೆ ನಡೆಸಿಕೊಳ್ಳಲಾಗಿತ್ತು. ಹೀಗಾಗಿ ಸುರಂಗದಿಂದ ಯಾವುದೇ ಅಪಾಯವಿಲ್ಲ.

- ಸುಬ್ರಹ್ಮಣ್ಯ ಗುಡಿಗೆ, ಮೆಟ್ರೋ ಸುರಂಗ ಮಾರ್ಗದ ಮುಖ್ಯ ಎಂಜಿನಿಯರ್‌