ಕೋಲಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸುದ್ದಿಗೋಷ್ಠಿ । ಜಿಲ್ಲಾ ರಕ್ಷಣಾಧಿಕಾರಿ ಎಂ. ನಾರಾಯಣ್ ಮನವಿ
ಕನ್ನಡಪ್ರಭ ವಾರ್ತೆ ಕೋಲಾರಯಾವುದೇ ಸಮಾಜ ಘಾತುಕ ಕೃತ್ಯಗಳು, ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವುದು ನಾಗರೀಕರ ಜವಾಬ್ದಾರಿಯಾಗಿದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಎಂ. ನಾರಾಯಣ ಮನವಿ ಮಾಡಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಮಟ್ಟದ ಪೊಲೀಸ್ ಪರೇಡ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು , ಇಲಾಖೆಯಲ್ಲಿ ಒಂದು ಸಾವಿರ ಜನ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದಾರೆ, ಜನಸಂಖ್ಯೆಗೆ ಅಗತ್ಯವಾದಷ್ಟು ಸಿಬ್ಬಂದಿಗಳ ಕೊರತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರೀಕರ ಸಹಕಾರ ಕೋರಲಾಗಿದೆ ಎಂದರು.ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ೩೭ ಹತ್ಯೆಗಳಾಗಿದೆ, ಈ ಪೈಕಿ ೩೬ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ, ವೈಯಕ್ತಿಕ ದ್ವೇಷ ಮತ್ತು ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ೯ ಪ್ರಕರಣ, ಪತಿ, ಪತ್ನಿಯರಲ್ಲಿ ಕಲಹದ ೨ ಪ್ರಕರಣ, ಹಣಕಾಸು ಮತ್ತು ಭೂ ವ್ಯವಹಾರಗಳಲ್ಲಿ ೩ ಪ್ರಕರಣ, ಕಾನೂನು ಬಾಹಿರ, ಪ್ರೀತಿ, ಪ್ರೇಮ ಸಂಬಂಧಿತ ೭ ಪ್ರಕರಣಗಳು, ಅತ್ಯಾಚಾರ ಕೊಲೆ ೨ ಪ್ರಕರಣ, ಪೂರ್ವ ಯೋಜಿತ ೪ ಪ್ರಕರಣ, ತಂದೆ, ತಾಯಿಯೇ ತಮ್ಮ ಮಕ್ಕಳನ್ನು ಹತ್ಯೆ ಮಾಡಿರುವ ೭ ಪ್ರಕರಣಗಳು, ನ್ಯಾಯಾಲಯದ ೧ ಪ್ರಕರಣ, ತಪ್ಪು ಮಾಹಿತಿಯ ಪತ್ತೆ ೧ ಪ್ರಕರಣ, ಪತ್ತೆಯಾಗದ ೧ ಪ್ರಕರಣ ಸೇರಿದಂತೆ ಒಟ್ಟು ೩೭ ಪ್ರಕರಣಗಳಿದ್ದವು ಎಂದು ತಿಳಿಸಿದರು.
ಈ ಪ್ರಕರಣಗಳಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ೧೭ ಪೊಲೀಸರನ್ನು ಅಮಾನತುಗೊಳಿಸಲಾಗಿದೆ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ೯೬ ಮೆಡಿಕಲ್ ಶಾಪ್ ಮೇಲೆ ದಾಳಿ ಮಾಡಿದ್ದು, ೨ ಮೆಡಿಕಲ್ ಶಾಪ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಪ್ರಕರಣ ದಾಖಲಿಸಿ ಪರವಾನಗಿ ರದ್ದುಪಡಿಸಲು ಡ್ರಗ್ಸ್ ನಿಯಂತ್ರಣಾ ಇಲಾಖೆಗೆ ಶಿಫಾರಸು ಮಾಡಲಾಗಿದೆ.ಪೊಲೀಸ್ ಇಲಾಖೆಯಿಂದ ೧೯೫ ನಾಗರೀಕರಿಗೆ ಕರೆ ಮಾಡಿ ವಿಚಾರಣೆ ನಡೆಸಲಾಗಿದೆ, ಹಲವಾರು ಪ್ರಕರಣಗಳಲ್ಲಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿರುವ ಕಾರ್ಯಕ್ಕೆ ೬೯೬೭ ಜನರು ಲೋಕ ಸ್ಪಂದನೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ, ೧೦೪೪ ಮಂದಿ ಶ್ಲಾಘಿಸಿದ್ದು, ಇಲಾಖೆಯಿಂದ ಹಾಗೂ ಮುಖ್ಯಮಂತ್ರಿಗಳಿಂದ ಶ್ಲಾಘನೆಗೆ ನಮ್ಮ ಜಿಲ್ಲಾ ಪೊಲೀಸ್ ಪಾತ್ರವಾಗಿದೆ ಎಂದು ತಿಳಿಸಿದರು.
ಶ್ರೀನಿವಾಸಪುರದಲ್ಲಿ ೧೧೦ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಾಥ್ ನೀಡಿ ಸರ್ಕಾರಕ್ಕೆ ಸುಮಾರು ೪ ಸಾವಿರ ಎಕರೆ ಜಮೀನು ವಶಪಡಿಸಿಕೊಳ್ಳಲು ಸಹಕಾರಿಯಾಗಿದೆ, ಇದಕ್ಕೆ ಸಂಬಂಧಿಸಿದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ೧೫ ಮಂದಿ ಬಲಾಡ್ಯರ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ, ಈ ಪ್ರಕರಣದಲ್ಲಿ ಪ್ರಭಾವಿತರಾದ ಲೋಕಸಭಾ ಸದಸ್ಯರ ವಿರುದ್ದವೂ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗಿದೆ, ಚೆನ್ನೈ-ಬೆಂಗಳೂರು ಕಾರಿಡಾರ್ ಪ್ರಕರಣದಲ್ಲಿ ರೈತರನ್ನು ಜಮೀನು ನೀಡಲು ಮಧ್ಯಸ್ಥಿಕೆ ವಹಿಸಿ ೯೯ ಜನ ರೈತರಿಗೆ ಸುಮಾರು ೫೦೦ ಕೋಟಿ ಪರಿಹಾರ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ೧೯ ಜನ ರೌಡಿಗಳನ್ನು ಗಡಿಪಾರು ಮಾಡಿದೆ, ೪೯೮ ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ೫೮ ಮಂದಿಯನ್ನು ರೌಡಿಶೀಟ್ನಿಂದ ತೆಗೆದು ೧೧೦ ಜನ ರೌಡಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
ಈ ಹಿಂದೆ ೯ ಸಾವಿರ ಪ್ರಕರಣಗಳು ತನಿಖೆ ಹಂತದಲ್ಲಿ ಇದ್ದು, ನಾನು ಅಧಿಕಾರ ವಹಿಸಿಕೊಂಡ ನಂತರ ೭ ಸಾವಿರ ಪ್ರಕರಣಗಳು ತನಿಖೆ ಪೂರೈಸಿವೆ. ೨ ಸಾವಿರ ಪ್ರಕರಣಗಳು ಬಾಕಿ ಇವೆ ಎಂದರು.ಕಾರ್ತಿಕ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ೨೮ ದಿನಗಳ ಕಾಲ ಬಾಲಾ ಅಪರಾಧಿ ಜೈಲಿನಲ್ಲಿ ಇದ್ದನು. ಆರೋಪಿಯು ಅಪ್ರಾಪ್ತನೆಂಬ ಕಾರಣಕ್ಕೆ ಶಿಕ್ಷೆಯ ಪ್ರಮಾಣದಲ್ಲಿ ಕಡಿಮೆ ಮಾಡದಂತೆ ನಾವು ನ್ಯಾಯಾಲಯಕ್ಕೆ ಪ್ರಕರಣ ದಾಖಲಾತಿಗೆ ಶಿಫಾರಸ್ಸು ಮಾಡಿದ್ದರೂ ಆರೋಪಿಗೆ ಜಾಮೀನು ಮಂಜೂರು ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ೮೧ ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, 800 ಮೊಬೈಲ್ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ, ಗಾಂಜಾ ಪ್ರಕರಣಗಳಿಗೆ ಸಂಂಬಂಧಿಸಿದಂತೆ ೨೦೨೩ರಲ್ಲಿ ೪೭ ಪ್ರಕರಣಗಳು ದಾಖಲಾಗಿವೆ, ಪ್ರಸಕ್ತ ಸಾಲಿನಲ್ಲಿ ಒಟ್ಟು ೪೮೫ ಕೆ.ಜಿ.ಗಾಂಜಾ ಆರೋಪಿಗಳಿಂದ ವಶಕ್ಕೆ ಪಡೆದಿದ್ದು, ಇದರ ಮೌಲ್ಯ ೨,೦೩ ಕೋಟಿ ರು. ಗಳಾಗಿದೆ, ೧೪೭ ಪ್ರಕರಣಗಳಲ್ಲಿ ೨೯ ಜನ ಬಂಧನಕ್ಕೆ ಒಳಗಾಗಿದ್ದಾರೆ, ಕಳುವಾಗಿರುವ ೫೦೦ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ೪೭ ಅಪ್ರಾಪ್ತ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ, ೪ ಚೈನ್ ಅಪಹರಣ, ೫೩ ಕಳ್ಳತನ ಪ್ರಕರಣಗಳು ನಡೆದಿದ್ದು, ಇದರ ಮೌಲ್ಯ ಸುಮಾರು ೨ ಕೋಟಿ ರು.ಗಳಾಗಿದೆ. ಈ ಪೈಕಿ ೧.೫ ಕೋಟಿ ರು. ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.ಅಪರ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಡಿ.ವೈ.ಎಸ್.ಪಿ ಮಲ್ಲೇಶ್, ನಂದಕುಮಾರ್, ಡಿ.ಆರ್. ವಿಭಾಗದ ರಘು ಇದ್ದರು.
---೧೭ಕೆಎಲ್ಆರ್-೮ಕೋಲಾರದ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಮಟ್ಟದ ಪೊಲೀಸ್ ಪೆರೇಡ್ ನಂತರ ಸುದ್ಧಿಗಾರರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ ಮಾತನಾಡಿದರು.