ಪತಿ-ಪತ್ನಿ ನಡುವಿನ ಜಗಳ ಕ್ರೌರ್ಯವಾಗುವುದಿಲ್ಲ - ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ, ಅತ್ತೆ ಖುಲಾಸೆ

Published : Jul 18, 2024, 11:35 AM IST
Karnataka High Court

ಸಾರಾಂಶ

ಪತಿ-ಪತ್ನಿ ನಡುವಿನ ಜಗಳವು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 498 ಅಡಿ ಕ್ರೌರ್ಯ ಮತ್ತು ಕಿರುಕುಳದ ಅಪರಾಧ ಕೃತ್ಯವಾಗುವುದಿಲ್ಲ

 ವೆಂಕಟೇಶ್‌ ಕಲಿಪಿ  

ಬೆಂಗಳೂರು :  ಪತಿ-ಪತ್ನಿ ನಡುವಿನ ಜಗಳವು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 498 ಅಡಿ ಕ್ರೌರ್ಯ ಮತ್ತು ಕಿರುಕುಳದ ಅಪರಾಧ ಕೃತ್ಯವಾಗುವುದಿಲ್ಲ. ಕ್ರೌರ್ಯ ಎಂದರೆ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆಗೆ ಶರಣಾಗಲು ಅಥವಾ ಜೀವಕ್ಕೆ ಅಪಾಯ ತಂದುಕೊಳ್ಳಲು ವಿವಾಹಿತ ಮಹಿಳೆಯನ್ನು ಪ್ರಚೋದಿಸಿರಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ. ಪತ್ನಿಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕ್ರೌರ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ತಮ್ಮನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮಡಿಕೇರಿ ತಾಲೂಕಿನ ಮುರ್ನಾಡ್‌ ಗ್ರಾಮದ ನಿವಾಸಿಗಳಾದ ಬಿ.ಎಸ್‌.ಜನಾರ್ದನ (52) ಮತ್ತು ಆತನ ತಾಯಿ ಬಿ.ಎಸ್‌.ಉಮಾವತಿ (73) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್‌ ಅವರ ಪೀಠ ಈ ಆದೇಶ ಮಾಡಿದೆ.

ಪತಿ-ಪತ್ನಿ ನಡುವಿನ ಜಗಳಗಳು ಐಪಿಸಿ ಸೆಕ್ಷನ್‌ 498 ಅಡಿಯಲ್ಲಿ ಕ್ರೌರ್ಯ ಮತ್ತು ಕಿರುಕುಳ ಅಪರಾಧ ಕೃತ್ಯವಾಗುವುದಿಲ್ಲ. ಪತ್ನಿಯ ಮೇಲೆ ಪತಿ ಹಾಗೂ ಕುಟುಂಬಸ್ಥರಿಂದ ಕ್ರೌರ್ಯ ನಡೆದಿರುವುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಬೇಕಾಗುತ್ತದೆ. ಕ್ರೌರ್ಯ ಎಂದರೆ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆ, ಗಂಭೀರ ಗಾಯ ಅಥವಾ ಜೀವಕ್ಕೆ ಅಪಾಯ ಮಾಡಿಕೊಳ್ಳಲು ಮಹಿಳೆಯನ್ನು ಪ್ರಚೋದಿಸಿರಬೇಕು. ಮಾನಸಿಕ ಕಿರುಕುಳ ಕೂಡ ಕ್ರೌರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಪೀಠ ತಿಳಿಸಿದೆ. ಐಪಿಸಿ ಸೆಕ್ಷನ್‌ 306 ಅಡಿ ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧವಾಗಬೇಕೆಂದರೆ ಆರೋಪಿಯ ಕೃತ್ಯ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಹಾಗೂ ಸಕ್ರಿಯ ಪಾತ್ರ ನಿರ್ವಹಿಸಿರಬೇಕು. ಆತ್ಮಹತ್ಯೆಗೆ ಪ್ರೇರೇಪಿಸಲು ಅಥವಾ ಸಹಾಯ ಮಾಡಲು ಆರೋಪಿಯ ಕಡೆಯಿಂದ ಸಕಾರಾತ್ಮಕ ಕೃತ್ಯವಿಲ್ಲದಿದ್ದರೆ, ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗಿ ಉಳಿಯುವುದಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ವಿವರ: ಸರಸ್ವತಿ ಎಂಬುವರನ್ನು ಜನಾರ್ದನ 1996ರಲ್ಲಿ ವಿವಾಹವಾಗಿದ್ದರು. 1998ರ ಆ.4ರಂದು ಮುಂಜಾನೆ 5.30ರ ಸಮಯದಲ್ಲಿ ಸರಸ್ವತಿ ವಿಷ ಸೇವಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪೊಲೀಸ್‌ ಪೇದೆ ಮುಂದೆ ಹೇಳಿಕೆ ನೀಡಿದ್ದ ಸರಸ್ವತಿ, ಪತಿ ತನ್ನ ಶೀಲ ಹಾಗೂ ನಿಷ್ಠೆಯನ್ನು ಶಂಕಿಸಿ, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಪತಿ ಜೊತೆಗೆ ಆಗಾಗ ಜಗಳ ನಡೆಯುತ್ತಿತ್ತು. ಹಿರಿಯರು ಬುದ್ಧಿವಾದ ಹೇಳಿದ್ದರೂ ಪತಿ ನಡತೆ ಸುಧಾರಣೆ ಕಾಣಲಿಲ್ಲ. ಕಿರುಕುಳ ಮುಂದುವರಿಸಿದ್ದರು ಎಂದು ಪತ್ನಿ ಆರೋಪಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆ.6ರಂದು ಸರಸ್ವತಿ ಸಾವನ್ನಪ್ಪಿದ್ದರು.

ಇದರಿಂದ ಪೊಲೀಸರು ಸರಸ್ವತಿಯ ಪತಿ ಜನಾರ್ದನ ಮತ್ತು ಅತ್ತೆ ಉಮಾವತಿ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಡಿಕೇರಿ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ಜನಾರ್ದನಗೆ ಏಳು ವರ್ಷ ಜೈಲು, ಅವರ ತಾಯಿಗೆ ನಾಲ್ಕು ವರ್ಷ ಕಠಿಣ ಸಜೆ ಮತ್ತು ತಲಾ ಒಂದು ಸಾವಿರ ರು. ದಂಡ ವಿಧಿಸಿತ್ತು. ಕ್ರೌರ್ಯ ಅಪರಾಧಕ್ಕೆ ಇಬ್ಬರಿಗೂ ತಲಾ ಒಂದು ವರ್ಷ ಕಠಿಣ ಸಜೆ ಮತ್ತು ಒಂದು ಸಾವಿರ ದಂಡ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಈ ಆರೋಪಿಗಳು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಆರೋಪ ಜನಾರ್ದನ ಮೇಲಿದೆ. ಸರಸ್ವತಿ ಮಾಡುತ್ತಿದ್ದ ಮನೆ ಕೆಲಸ ತೃಪ್ತಿಕರವಾಗಿಲ್ಲ ಎಂದು ಆಕ್ಷೇಪಿಸುತ್ತಿದ್ದ ಆರೋಪ ಉಮಾವತಿ ಮೇಲಿದೆ. ಮೃತಳ ಹತ್ತಿರದ ಸಂಬಂಧಿಕರು ಹಾಗೂ ಪಕ್ಕದ ಮನೆಯವರು ನುಡಿದ ಸಾಕ್ಷ್ಯದ ಪ್ರಕಾರ ಸರಸ್ವತಿಗೆ ಪತಿ ಯಾವುದೇ ಕಿರುಕುಳ ನೀಡುತ್ತಿರಲಿಲ್ಲ ಹಾಗೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಪತ್ನಿ-ಪತಿ ನಡುವೆ ಸೌಹಾರ್ದಯುತ ಸಂಬಂಧವಿತ್ತು ಎಂಬುದು ಸಾಬೀತಾಗುತ್ತದೆ. ಆರೋಪಿಗಳು ಮೃತಳಿಗೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಸಾಕ್ಷಿಗಳಾದ ಮೃತಳ ಪೋಷಕರು, ಸಹೋದರ ಮತ್ತು ಸಹೋದರಿಯರು ನುಡಿದಿದ್ದ ಸುಳ್ಳು ಸಾಕ್ಷ್ಯ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಬಾಹಿರವಾಗಿದೆ ಎಂದು ತೀರ್ಮಾನಿಸಿತು. ಜೊತೆಗೆ, ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದೆ.

PREV

Recommended Stories

ನನ್ನಲ್ಲಿನ ವೈದ್ಯನಿಗೆ ಕಾಣದ ಸತ್ಯಗಳು ನನ್ನಲ್ಲಿನ ಲೇಖಕನಿಗೆ ಅರ್ಥವಾಗುತ್ತವೆ : ಗುರುಪ್ರಸಾದ ಕಾಗಿನೆಲೆ
ಇವತ್ತು ಜಗತ್ತಿನಲ್ಲಿ ಎಲ್ಲರೂ ಆಧ್ಯಾತ್ಮದ ಪಾಠ ಮಾಡುವವರೇ - ಬದುಕಲು ಕಲಿಯಿರಿ