ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಸಣ್ಣ ನಗರಗಳ ಉದ್ಯಮಿಗಳು: ವಿಶ್ವ ಎಂಎಸ್ಎಂಇ ದಿನ ವಿಶೇಷ

KannadaprabhaNewsNetwork |  
Published : Jun 27, 2026, 12:15 AM IST
ಅಮೆಜಾನ್ | Kannada Prabha

ಸಾರಾಂಶ

ಸಣ್ಣ ನಗರಗಳ ಉದ್ಯಮಿಗಳು ಅಮೆಜಾನ್ ಮೂಲಕ ಬೆಳವಣಿಗೆ ಹೊಂದುತ್ತಿರುವ ಕುರಿತು ಅಮೆಜಾನ್ ಇಂಡಿಯಾದ ಸೆಲ್ಲರ್ ಪಾರ್ಟನರ್ ಸರ್ವಿಸಸ್‌ನ ನಿರ್ದೇಶಕರಾದ (ಪ್ರೊಡಕ್ಟ್ ಮ್ಯಾನೇಜ್‌ಮೆಂಟ್) ವಿಕ್ರಮ್ ದೇಶಪಾಂಡೆ ಅವರು ವಿಶ್ಲೇಷಣೆ ನಡೆಸಿದ್ದಾರೆ. ಅವರ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಅಮೆಜಾನ್ ಇಂಡಿಯಾದ ಸೆಲ್ಲರ್ ಪಾರ್ಟನರ್ ಸರ್ವಿಸಸ್‌ನ ನಿರ್ದೇಶಕರಾದ (ಪ್ರೊಡಕ್ಟ್ ಮ್ಯಾನೇಜ್‌ಮೆಂಟ್) ವಿಕ್ರಮ್ ದೇಶಪಾಂಡೆ ಅವರು ಸಣ್ಣ ನಗರಗಳ ಉದ್ಯಮಿಗಳ ಬೆಳವಣಿಗೆ ಕುರಿತು ವಿಶ್ಲೇಷಣೆ ನಡೆಸಿದ್ದಾರೆ. ಅವರ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ:ರಾಜಸ್ಥಾನದ ಜೈಪುರದಲ್ಲಿ ಪ್ರಸನ್ನ ಪಾರೀಕ್ ಅವರು ಸಾಂಪ್ರದಾಯಿಕ ಆಯುರ್ವೇದ ಜ್ಞಾನವನ್ನು ಆಧುನಿಕ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಅಶ್ಪ್‌ ವೇದ ಎಂಬ ಬ್ರ್ಯಾಂಡ್ ಆರಂಭಿಸಿದ್ದರು. ತೀವ್ರ ಪೈಪೋಟಿ ಇರುವ ಸೌಂದರ್ಯ ಮತ್ತು ವೆಲ್‌ ನೆಸ್ ಮಾರುಕಟ್ಟೆಯಲ್ಲಿ ತಳವೂರಲು ಅವರಿಗೆ ಅಮೆಜಾನ್ ಡಿಜಿಟಲ್ ವೇದಿಕೆ ಭದ್ರ ಬುನಾದಿ ಹಾಕಿಕೊಟ್ಟಿತು. ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಈ ಉತ್ಪನ್ನಗಳು, ಇಂದು ದೇಶದ ಮೂಲೆ ಮೂಲೆಗಳನ್ನು ತಲುಪಿವೆ. ಪ್ರಸ್ತುತ ಈ ಸಂಸ್ಥೆಯು ಅಮೆರಿಕ, ಬ್ರಿಟನ್ ಹಾಗೂ ಯುರೋಪ್ ಮಾರುಕಟ್ಟೆಗಳಿಗೂ ವಿಸ್ತರಿಸಲು ಸಜ್ಜಾಗಿದೆ. ಇದು ಸಣ್ಣ ನಗರಗಳ ಉದ್ಯಮಿಗಳಿಗೆ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ಸಿಕ್ಕರೆ ಭೌಗೋಳಿಕ ಮಿತಿಗಳನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಮೂಲಕ ದೇಶದ ಆರ್ಥಿಕ ಪ್ರಗತಿಯಲ್ಲಿ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ಮೆಟ್ರೋ ನಗರಗಳು ಮಾತ್ರವಲ್ಲದೆ, ದ್ವಿತೀಯ ಮತ್ತು ತೃತೀಯ ಹಂತದ ನಗರಗಳೂ ಪ್ರಮುಖ ಪಾತ್ರ ವಹಿಸುತ್ತಿವೆ.

ಪ್ರಸ್ತುತ ಮೊರಾದಾಬಾದ್‌ ನ ಲೋಹದ ಪಾತ್ರೆಗಳ ಉದ್ಯಮ, ಸೂರತ್‌ ನ ಜವಳಿ ಉದ್ಯಮ ಹಾಗೂ ಕೊಯಮತ್ತೂರಿನ ಉತ್ಪಾದನಾ ವಲಯಗಳು ದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಮಾರ್ಪಡುತ್ತಿವೆ. ದೇಶದಲ್ಲಿ ಸದ್ಯ ಸುಮಾರು 6 ಕೋಟಿ ಎಂಎಸ್‌ಎಂಇಗಳಿದ್ದು, ಇವು ಭಾರತದ ಒಟ್ಟು ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುವ ಮೂಲಕ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿವೆ. ಅದರಲ್ಲೂ ವಿಶೇಷವಾಗಿ, ಮುಂದಿನ 2030ರ ವೇಳೆಗೆ ಭಾರತದ ಇ-ಕಾಮರ್ಸ್ ಮಾರುಕಟ್ಟೆಯು ಸುಮಾರು 345 ಬಿಲಿಯನ್ ಡಾಲರ್‌ ತಲುಪುವ ಅಂದಾಜಿದ್ದು, ಇದಕ್ಕೆ ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಗ್ರಾಹಕರೇ ಪ್ರಮುಖ ಕಾರಣವಾಗಲಿದ್ದಾರೆ.ಮೆಟ್ರೋ ಆಚೆಗಿನ ನಗರಗಳಲ್ಲಿ ಉದ್ಯಮಶೀಲತೆಯ ಹೊಸ ಅಲೆ

ದೇಶದ ಮಹಾನಗರಗಳ ಆಚೆಗಿನ ಸಣ್ಣ ಸಣ್ಣ ಪಟ್ಟಣಗಳಲ್ಲಿ ಉದ್ಯಮಶೀಲತೆ ಮತ್ತು ವ್ಯಾಪಾರ ಜಾಲಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಜಗತ್ತಿನ ಅತ್ಯಂತ ಬಲಿಷ್ಠ ಜವಳಿ ಮತ್ತು ವಜ್ರ ಸಂಸ್ಕರಣಾ ಉದ್ಯಮವನ್ನು ಹೊಂದಿರುವ ಸೂರತ್ ಹಾಗೂ ಪ್ರಿಸಿಷನ್ ಇಂಜಿನಿಯರಿಂಗ್ ಹಬ್ ಆಗಿ ಗುರುತಿಸಿಕೊಂಡಿರುವ ಕೊಯಮತ್ತೂರು ನಗರಗಳು ದಶಕಗಳ ಕಾಲ ಜಾಗತಿಕ ಮಟ್ಟದಲ್ಲಿ ತೆರೆಮರೆಯಲ್ಲೇ ಉಳಿದಿದ್ದವು. ಅಂತೆಯೇ, ಜೈಪುರದ ಕುಶಲಕರ್ಮಿಗಳು ತಯಾರಿಸುವ ಅದ್ಭುತ ಕರಕುಶಲ ವಸ್ತುಗಳು ದೆಹಲ ತಲುಪುವ ಮುನ್ನವೇ ವಿದೇಶಿ ಮಾರುಕಟ್ಟೆಗಳಲ್ಲಿ ಸದ್ದು ಮಾಡುತ್ತಿದ್ದವು.

ಹಿಂದಿನ ದಶಕಗಳಲ್ಲಿ ಇಂತಹ ಸಣ್ಣ ಉದ್ಯಮಗಳು ಕೇವಲ ಸ್ಥಳೀಯ ಬೇಡಿಕೆ ಹಾಗೂ ಸೀಮಿತ ವಿತರಣಾ ಜಾಲಗಳ ಕಾರಣದಿಂದಾಗಿ ಬೆಳವಣಿಗೆ ಕಾಣದೆ ಸಂಕಷ್ಟ ಎದುರಿಸುತ್ತಿದ್ದವು. ಆದರೆ, ಇಂದಿನ ಡಿಜಿಟಲ್ ಕಾಮರ್ಸ್ ಯುಗವು ಈ ಭೌಗೋಳಿಕ ಮಿತಿಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿದೆ. ಸಾವಿರಾರು ಕರಕುಶಲ ಸಂಸ್ಥೆಗಳು ಮತ್ತು ಮೊದಲ ತಲೆಮಾರಿನ ಉದ್ಯಮಿಗಳು ಇಂದು ದೇಶಾದ್ಯಂತ ಗ್ರಾಹಕರನ್ನು ತಲುಪಲು ಹಾಗೂ ಅವರ ನಂಬಿಕೆ ಗಳಿಸಲು ಈ ತಂತ್ರಜ್ಞಾನ ನೆರವಾಗಿದೆ. ಜೈಪುರದ ಒಬ್ಬ ಸಾಮಾನ್ಯ ಹ್ಯಾಂಡಿಕ್ರಾಫ್ಟ್ ವ್ಯಾಪಾರಿ ಯಾವುದೇ ಭೌತಿಕ ಮಳಿಗೆಯನ್ನು ತೆರೆಯದೆಯೇ ದೇಶದ ಯಾವುದೇ ಮೂಲೆಯ ಬೇಡಿಕೆಯನ್ನು ಪೂರೈಸಬಹುದಾಗಿದೆ.

ಕೇವಲ ಗ್ರಾಹಕರ ಬೇಡಿಕೆ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ನಗರಗಳ ಉದ್ಯಮಿಗಳ ಆಲೋಚನಾ ಶೈಲಿಯೂ ಡಿಜಿಟಲ್ ಮಯವಾಗಿದೆ. ಸಮಾನ ಅವಕಾಶ ಕಲ್ಪಿಸಿದ ಡಿಜಿಟಲ್ ಮೂಲಸೌಕರ್ಯ:

ಡಿಜಿಟಲ್ ಕಾಮರ್ಸ್ ವೇದಿಕೆಗಳು ಎಂಎಸ್‌ಎಂಇ ಸಂಸ್ಥೆಗಳು ತಮ್ಮ ಸ್ಥಳೀಯ ಗಡಿಗಳನ್ನು ದಾಟಿ ಬೆಳೆಯಲು ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿವೆ. ಈ ನಿಟ್ಟಿನಲ್ಲಿ ಅಮೆಜಾನ್ ಮಾರ್ಕೆಟ್ ಪ್ಲೇಸ್ ಹಿಂದೆ ಕೇವಲ ದೊಡ್ಡ ಬ್ರ್ಯಾಂಡ್‌ ಗಳಿಗೆ ಮಾತ್ರ ಸೀಮಿತವಾಗಿದ್ದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಣ್ಣ ಉದ್ಯಮಗಳಿಗೂ ಲಭ್ಯವಾಗುವಂತೆ ಮಾಡಿದೆ. ಉದಾಹರಣೆಗೆ, ಎಐ ಆಧಾರಿತ ಲಿಸ್ಟಿಂಗ್ ಪರಿಕರಗಳು ಮಾರಾಟಗಾರರು ತಮ್ಮ ಉತ್ಪನ್ನಗಳ ವಿವರವಾದ ಕ್ಯಾಟಲಾಗ್ ಸಿದ್ಧಪಡಿಸಲು ನೆರವಾಗುತ್ತಿವೆ. ತಾಂತ್ರಿಕ ಜಟಿಲತೆಗಳಿಲ್ಲದೆ, ಸಾಮಾನ್ಯ ಇಂಗ್ಲಿಷ್ ಹಾಗೂ ಹಿಂಗ್ಲಿಷ್ (ಹಿಂದಿ+ಇಂಗ್ಲಿಷ್) ಭಾಷೆಗಳಲ್ಲಿ ದಿನದ 24 ಗಂಟೆಯೂ ಲಭ್ಯವಿರುವ ಎಐ-ಸೆಲ್ಲರ್ ಅಸಿಸ್ಟೆಂಟ್ ವ್ಯವಸ್ಥೆಯು ಉದ್ಯಮಿಗಳ ಆನ್‌ ಲೈನ್ ಮಳಿಗೆ ನಿರ್ವಹಣೆಯ ಹೊರೆಯನ್ನು ಗಣನೀಯವಾಗಿ ತಗ್ಗಿಸಿದೆ.

ಈ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ದಿನನಿತ್ಯದ ಸಾಂಪ್ರದಾಯಿಕ ಕೆಲಸಗಳಿಗೆ ತಗಲುತ್ತಿದ್ದ ಸಮಯವು ಶೇ.70 ರಷ್ಟು ಉಳಿತಾಯವಾಗುತ್ತಿದ್ದು, ಉತ್ಪನ್ನಗಳು ಆನ್‌ ಲೈನ್‌ ನಲ್ಲಿ ಗ್ರಾಹಕರಿಗೆ ಸುಲಭವಾಗಿ ಹುಡುಕಲು ಸಿಗುವಂತಾಗಿದೆ. ವಿಸ್ತಾರವಾದ ವಿತರಣಾ ಸೌಲಭ್ಯಗಳ ಕಾರಣದಿಂದಾಗಿ, ಲಕ್ನೋದ ಒಬ್ಬ ಉದ್ಯಮಿ ಹೈದರಾಬಾದ್‌ನ ಗ್ರಾಹಕನಿಗೆ ಕೇವಲ ಎರಡು ದಿನಗಳಲ್ಲಿ ಆರ್ಡರ್ ತಲುಪಿಸುವ ಭರವಸೆ ನೀಡಿ ಅದನ್ನು ಈಡೇರಿಸಲು ಸಾಧ್ಯವಾಗುತ್ತಿದೆ. ಇದರೊಂದಿಗೆ ಹೊಸ ಮಾರಾಟಗಾರರಿಗೆ ನೀಡಲಾಗುವ ವಿಶೇಷ ರಿವಾರ್ಡ್ ಪ್ರೋಗ್ರಾಂಗಳು ಮತ್ತು ರೂ.1000 ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳ ಮೇಲಿನ ಶೂನ್ಯ ರೆಫರಲ್ ಶುಲ್ಕದಂತಹ ಸರಳೀಕೃತ ನಿಯಮಗಳು ಸಣ್ಣ ಉದ್ಯಮಗಳು ಯಾವುದೇ ಆತಂಕವಿಲ್ಲದೆ ಇ-ಕಾಮರ್ಸ್ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡುತ್ತಿವೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಸಣ್ಣ ನಗರಗಳ ಉದ್ಯಮಿಗಳು ಅಮೆಜಾನ್ ವೇದಿಕೆಯಲ್ಲಿ ದೀರ್ಘಾವಧಿಯ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ.ಎಂಎಸ್‌ಎಂಇಗಳ ಬೆಳವಣಿಗೆಗೆ ಪೂರಕ ವ್ಯವಸ್ಥೆ:

ಆನ್‌ ಲೈನ್ ಮಾರುಕಟ್ಟೆಯ ಮೂಲಕ ತಮ್ಮ ಮೊದಲ 500 ಆರ್ಡರ್‌ಗಳನ್ನು ಪಡೆಯುವ ಒಬ್ಬ ಸಾಮಾನ್ಯ ಉದ್ಯಮಿಗೆ ತಕ್ಷಣವೇ ಕೆಲವು ಸಂಕೀರ್ಣ ಪ್ರಶ್ನೆಗಳು ಎದುರಾಗುತ್ತವೆ. ದೊಡ್ಡ ಮಟ್ಟದಲ್ಲಿ ದಾಸ್ತಾನು ನಿರ್ವಹಣೆ ಮಾಡುವುದು ಹೇಗೆ? ಗ್ರಾಹಕರು ವಾಪಸ್ ಕಳುಹಿಸುವ ಉತ್ಪನ್ನಗಳನ್ನು ನಿಭಾಯಿಸುವುದು ಹೇಗೆ? ಮತ್ತು ಇಡೀ ಭಾರತದಾದ್ಯಂತ ತಲುಪುವಂತಹ ಒಂದು ಬ್ರ್ಯಾಂಡ್ ಅನ್ನು ಕಟ್ಟುವುದು ಹೇಗೆ? ಎಂಬ ಸವಾಲುಗಳು ಮೂಡುತ್ತವೆ.

ಸಣ್ಣ ಉದ್ಯಮಗಳಿಗೆ ಸಾಲದ ಸೌಲಭ್ಯ ಒದಗಿಸುವುದು, ಸ್ಟಾರ್ಟ್-ಅಪ್ ಧನಸಹಾಯ ಮತ್ತು ಡಿಜಿಟಲ್ ಮಾರುಕಟ್ಟೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಎನ್‌ಡಿಸಿ ಮತ್ತು ಜೆಮ್ ನಂತಹ ಸರ್ಕಾರದ ಪ್ರಮುಖ ಯೋಜನೆಗಳು ಈಗಾಗಲೇ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿವೆ. ಇದೇ ವೇಳೆ, ಸರಬರಾಜು ಜಾಲ, ಗೋದಾಮು ನಿರ್ವಹಣೆ, ಡೆಲಿವರಿ ಪರಿಹಾರಗಳು, ಡಿಜಿಟಲ್ ಕೌಶಲ್ಯಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಯು ಉದ್ಯಮಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಮುಖ ಪಾತ್ರ ವಹಿಸುತ್ತಿವೆ. ಆನ್‌ ಲೈನ್ ಮಾರುಕಟ್ಟೆಯನ್ನು ಬಳಸುವ ಮಾರಾಟಗಾರರಿಗೆ ಇನ್ವೆಂಟರಿ ನಿರ್ವಹಣೆ, ಆರ್ಡರ್ ಪ್ರಕ್ರಿಯೆ ಮತ್ತು ದೇಶಾದ್ಯಂತ ವಿತರಣೆಯನ್ನು ಸರಳಗೊಳಿಸಲು ಕಾರ್ಯಾಚರಣೆಯ ಬೆಂಬಲ ಸೇವೆಗಳು ನೆರವಾಗುತ್ತಿವೆ. ದೊಡ್ಡ ಮಟ್ಟದ ಆರಂಭಿಕ ಬಂಡವಾಳ ಹೂಡಿಕೆ ಇಲ್ಲದೆಯೇ ವಿವಿಧ ಪ್ರದೇಶಗಳ ಗ್ರಾಹಕರಿಗೆ ಸೇವೆ ನೀಡಲು ಬಯಸುವ ಉದ್ಯಮಗಳಿಗೆ ಈ ವ್ಯವಸ್ಥೆಗಳು ಅತ್ಯಂತ ಉಪಯುಕ್ತವಾಗಿವೆ. ಇಂತಹ ಬೆಂಬಲದ ಪ್ರಭಾವವು ಇಂದು ದೇಶದ ಹಲವು ಉದಯೋನ್ಮುಖ ಬ್ರ್ಯಾಂಡ್‌ ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಲಾಜಿಸ್ಟಿಕ್ಸ್ ಸೌಲಭ್ಯಗಳಿಂದಾಗಿ ತಾವು ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಗ್ರಾಹಕರ ತೃಪ್ತಿ ಮತ್ತು ಬ್ರ್ಯಾಂಡ್ ನಿರ್ಮಾಣದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ ಎಂದು ಹಲವು ಉದ್ಯಮಿಗಳು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.ಭಾರತದ ಪ್ರತಿಯೊಂದು ಹೊಸ ಪಿನ್-ಕೋಡ್‌ಗಳ ಸಬಲೀಕರಣ:

ಉದ್ಯಮಶೀಲತೆಯ ಅವಕಾಶಗಳು ಕೇವಲ ಕೆಲವು ಪ್ರಮುಖ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದರೆ ಭಾರತವು ಜಾಗತಿಕ ಉತ್ಪಾದನೆ ಮತ್ತು ಬಳಕೆಯ ಶಕ್ತಿ ಕೇಂದ್ರವಾಗಲು ಸಾಧ್ಯವಿಲ್ಲ. ಮುಂದಿನ ದಶಕದ ಆರ್ಥಿಕ ಬೆಳವಣಿಗೆಯು, ಭಾರತದ (ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳ) ಲಕ್ಷಾಂತರ ಸಣ್ಣ ಉದ್ಯಮಗಳು ಎಷ್ಟು ಪರಿಣಾಮಕಾರಿಯಾಗಿ ಬೆಳೆಯುತ್ತವೆ, ರಾಷ್ಟ್ರಮಟ್ಟದಲ್ಲಿ ಹೇಗೆ ಪೈಪೋಟಿ ನೀಡುತ್ತವೆ ಮತ್ತು ಜಾಗತಿಕ ವಾಣಿಜ್ಯದಲ್ಲಿ ಹೇಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತವೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಇದನ್ನು ಸಾಕಾರಗೊಳಿಸಲು ಅಗತ್ಯವಿರುವ ಭದ್ರವಾದ ಮೂಲಸೌಕರ್ಯಗಳು ಇಂದು ದೇಶದಲ್ಲಿ ಲಭ್ಯವಿವೆ. ಏಕೆಂದರೆ ಭಾರತದ ಮುಂದಿನ ಆರ್ಥಿಕ ಸ್ಥಿತ್ಯಂತರವು ಕೇವಲ ಬೆಂಗಳೂರು, ಮುಂಬೈ ಅಥವಾ ಗುರಗಾಂವ್‌ನಂತಹ ಮಹಾನಗರಗಳಲ್ಲಿ ಮಾತ್ರ ನಿರ್ಮಾಣವಾಗುತ್ತಿಲ್ಲ. ಬದಲಿಗೆ ಮೊರಾದಾಬಾದ್, ಸೂರತ್, ಕೊಯಮತ್ತೂರು, ರಾಜ್‌ಕೋಟ್, ಕಾನ್ಪುರ ಮತ್ತು ಒಂದು ಕಾಲದಲ್ಲಿ ಅತ್ಯಂತ ಸಣ್ಣ ಉದ್ಯಮ ಕೇಂದ್ರಗಳೆಂದು ಪರಿಗಣಿಸಲ್ಪಟ್ಟಿದ್ದ ದೇಶದ ಸಾವಿರಾರು ಪಿನ್-ಕೋಡ್‌ಗಳ ವ್ಯಾಪ್ತಿಯಲ್ಲಿ ಈ ಕ್ರಾಂತಿ ಸದ್ದಿಲ್ಲದೆ ನಡೆಯುತ್ತಿದೆ.

PREV

Recommended Stories

ರೆಡ್‌ಮಿ ಟರ್ಬೊ 5 ಪವರ್‌ ಫುಲ್‌ ಮೊಬೈಲ್‌ ಬಿಡುಗಡೆ
ನೋಂದಣಿಗೆ ಆರ್‌ಎಸ್ಸೆಸ್‌ ಭಯ ಪಡುತ್ತಿರುವುದೇಕೆ?