ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿ, ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವ ಸುಳಿವು ನೀಡಿದ್ದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ಗೆ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿದ್ದು, ಇಂಡಿಯಾ ಕೂಟದ ಮುಂದೆಯೂ ಬಹಿಷ್ಕಾರದ ಆಯ್ಕೆಯಿದೆ ಎಂದು ಹೇಳಿದೆ.
ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ‘ತುಘಲಖ್ ಮಾದರಿಯ ಪ್ರಕ್ರಿಯೆ’ ಎಂದು ಕರೆದಿರುವ ಬಿಹಾರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವಾರು, ‘ಚುನಾವಣಾ ಆಯೋಗವು ತೋರಿಸಿರುವ ಅಂಕಿಅಂಶಗಳು ಸಂಪೂರ್ಣ ಸುಳ್ಳು. ಅದನ್ನು ಎಲ್ಲಾ ರೀತಿಯಲ್ಲಿ ವಿರೋಧಿಸುತ್ತೇವೆ. ಈ ಸಮಸ್ಯೆ ಬಗ್ಗೆ ಒಟ್ಟಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮ್ಮ ಮುಂದೆ ಎಲ್ಲಾ ರೀತಿಯ ಆಯ್ಕೆಗಳೂ ತೆರೆದಿವೆ
ಬಿಜೆಪಿ ತಿರುಗೇಟು:
ಬಿಹಾರ ಚುನಾವಣೆ ಬಹಿಷ್ಕಾರದ ಮಾತನ್ನಾಡಿರುವ ತೇಜಸ್ವಿ ಮತ್ತು ಇಂಡಿಯಾ ಕೂಟವನ್ನು ಟೀಕಿಸಿರುವ ಎನ್ಡಿಎ ಕೂಟ, ‘ಅವರ ಅಕ್ರಮ ಬಯಲಾಗಿದ್ದು, ಅವರಿಗೀಗ ಸೋಲಿನ ಭಯ ಶುರುವಾಗಿದೆ. ಆದ್ದರಿಂದಲೇ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಹೇಳುತ್ತಿದ್ದಾರೆ. ಇಲ್ಲವೇ, ಯಾವುದೋ ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದೆ.
ಮೃತರೂ ಮತದಾರರಾಗಿ ಉಳಿಯಬೇಕೆ?: ವಿಪಕ್ಷಕ್ಕೆ ಚು.ಆಯೋಗ ತಿರುಗೇಟು
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಎದ್ದಿರುವ ವಿಪಕ್ಷಗಳ ಟೀಕೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ‘ಸತ್ತವರು, ಶಾಶ್ವತವಾಗಿ ವಲಸೆ ಹೋದವರು ಅಥವಾ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರರಾಗಿರುವವರನ್ನು ಪಟ್ಟಿಗೆ ಸೇರಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.ಚುನಾವಣಾ ಆಯೋಗ ದೇಶಾದ್ಯಂತ ಚುನಾವಣೆಯನ್ನೇ ಕದಿಯುತ್ತಿದೆ ಎಂಬ ರಾಹುಲ್ ಆರೋಪಕ್ಕೆ ಜ್ಞಾನೇಶ್ ಕುಮಾರ್ ತಿರುಗೇಟು ನೀಡಿದ್ದು, ‘ನ್ಯಾಯಸಮ್ಮತ ಚುನಾವಣೆ ಹಾಗೂ ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯಕ್ಕಾಗಿ ಒಂದು ಪಾರದರ್ಶಕ ವ್ಯವಸ್ಥೆಯಲ್ಲಿ ಶುದ್ಧ ಮತದಾರರ ಪಟ್ಟಿಯನ್ನು ತಯಾರಿಸಲು ಸಾಧ್ಯವಿಲ್ಲವೇ? ಬಿಹಾರದಿಂದ ಮೊದಲ್ಗೊಂಡು ಇಡೀ ದೇಶದಲ್ಲಿ ಅನರ್ಹರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡುವುದು ಸಂವಿಧಾನವಿರೋಧಿ ಕ್ರಮವಾಗಿದೆ. ಈ ಪ್ರಶ್ನೆ ಕುರಿತು ರಾಜಕೀಯ ಸಿದ್ಧಾಂತಗಳನ್ನು ಮೀರಿ ಭಾರತೀಯ ನಾಗರಿಕರೆಲ್ಲರೂ ಆಲೋಚಿಸಬೇಕಿದೆ’ ಎಂದಿದ್ದಾರೆ.