ಭಾವಗೀತೆಗಳ ಮೂಲಕ ಕನ್ನಡಿಗರ ಭಾವನಾ ಲೋಕದ ಎಲ್ಲೆಗಳನ್ನು ವಿಸ್ತರಿಸಿದ್ದ ಸಹೃದಯಿ ಕವಿ ಎಚ್.ಎಸ್.ವೆಂಕಟೇಶಮೂರ್ತಿಗಳು ಅಸ್ತಂಗತರಾಗಿ ಕನ್ನಡ ಸಾಹಿತ್ಯ ಲೋಕದಲ್ಲೊಂದು ಶೂನ್ಯವನ್ನು ಸೃಷ್ಟಿಸಿದೆ ಎಂದೇ ಹೇಳಬೇಕು.
-ವಿಜಯ್ ಮಹಾಂತೇಶ. ಪಾಪನಾಳ.
ವೇದ, ಪ್ರಾಚೀನ ಇತಿಹಾಸ, ಶಾಸನಶಾಸ್ತ್ರದ ಸ್ವತಂತ್ರ ಸಂಶೋಧಕರು
ಭಾವಗೀತೆಗಳ ಮೂಲಕ ಕನ್ನಡಿಗರ ಭಾವನಾ ಲೋಕದ ಎಲ್ಲೆಗಳನ್ನು ವಿಸ್ತರಿಸಿದ್ದ ಸಹೃದಯಿ ಕವಿ ಎಚ್.ಎಸ್.ವೆಂಕಟೇಶಮೂರ್ತಿಗಳು ಅಸ್ತಂಗತರಾಗಿ ಕನ್ನಡ ಸಾಹಿತ್ಯ ಲೋಕದಲ್ಲೊಂದು ಶೂನ್ಯವನ್ನು ಸೃಷ್ಟಿಸಿದೆ ಎಂದೇ ಹೇಳಬೇಕು. ಜೀವನದ ಜಂಜಡಗಳಲ್ಲಿ ಬಸವಳಿದು ಬಳಲಿದವರ ಪಕ್ಕ ಪ್ರಿಯ ಸ್ನೇಹಿತನೊಬ್ಬ ಕೂತು ಹೆಗಲ ಮೇಲೆ ಕೈ ಹಾಕಿ ‘ಚಿಂತಿಸಬೇಡ, ನಿರಾಳವಾಗು’ ಎಂದು ಸಂತೈಸುವ ತೆರದಲಿ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಎಂಬ ಸಾಂತ್ವನದ ಅಮೃತ ಸಿಂಚನಗೈದವರು ಎಚ್ಚೆಸ್ವಿ. ಟಿ.ಎನ್.ಸೀತಾರಾಮ್ ಅವರೇ ಹೇಳಿದಂತೆ, ಅವರ ‘ಮುಕ್ತ ಮುಕ್ತ’ ಧಾರಾವಾಹಿಗೆ ಎಚ್ಚೆಸ್ವಿಯವರು ಬರೆದ ಶೀರ್ಷಿಕೆ ಗೀತೆ ಧಾರಾವಾಹಿಗಿಂತ ಹೆಚ್ಚು ಜನಪ್ರಿಯವಾಯಿತು. ಏಕಕಾಲಕ್ಕೆ ಆ ಧಾರಾವಾಹಿ ಮತ್ತದರ ಶೀರ್ಷಿಕೆ ಗೀತೆಯ ಅಮೋಘ ಯಶಸ್ಸು ಕನ್ನಡಿಗರು ಯಾವತ್ತೂ ಸದಭಿರುಚಿಯ ಕ್ರಿಯಾಶೀಲತೆಯನ್ನು ಒಪ್ಪಿ, ಸ್ವೀಕರಿಸಿ, ಮೆಚ್ಚಿ ಹರಸುತ್ತಾರೆ ಎಂದು ತೋರಿಸಿದ್ದು ಈಗ ಇತಿಹಾಸ.
ಎಚ್ಚೆಸ್ವಿಯವರ ಭಾವಗೀತೆಗಳಲ್ಲಿ ಜೀವನದ ಘಟನೆಗಳನ್ನು, ಅನುಭವಗಳನ್ನು ತಣ್ಣಗೆ ಕೂತು ಅನುಭವಿಸಿ, ಆ ಅನುಭವಗಳೊಡನೆ ಅನುಸಂಧಾನಕ್ಕಿಳಿದ ಕವಿಯ ಮನಸ್ಥಿತಿ ಓದುಗನ ಅನುಭವಕ್ಕೂ ಬರುತ್ತದೆ. ಹಾಗೆ ಕವಿ ಮತ್ತು ಓದುಗನ ಮಧ್ಯೆ ಒಂದು ತಾದಾತ್ಮ್ಯ ಭಾವ ಸೃಷ್ಟಿಯಾದಾಗಲೇ ಅಲ್ಲವೆ ಕವನವು ಸಾರ್ಥಕತೆಯನ್ನು ಪಡೆಯುವುದು? ಅಂಥ ಸಾರ್ಥಕತೆಯನ್ನು ಎಚ್ಚೆಸ್ವಿಯವರ ಕವಿತೆಗಳು ಪಡೆದಿದ್ದವು ಎನ್ನುವುದು ಅವರನ್ನು ಓದಿದ ಯಾರಿಗಾದರೂ ತಿಳಿಯುವ ಸಂಗತಿಯೆ. ಅನುಭವಗಳೊಡನೆ ಅನುಸಂಧಾನಕ್ಕಿಳಿಯುವ ಎಚ್ಚೆಸ್ವಿಯವರು ತಮ್ಮ ಕವನಗಳಲ್ಲಿ ತುಂಬಿಕೊಟ್ಟದ್ದು ಮಾತ್ರ ಮಥನದ ನಂತರ ಬರುವ ಅಮೃತವನ್ನೆ. ಅದೊಂದು ಭಾವಸ್ಥ ಸ್ಥಿತಿ. ಮನಸ್ಸು ಆಳವಾದ ಚಿಂತನೆಯಲ್ಲಿ ತೊಡಗಿದಾಗ ಮಾತ್ರ ಅಂತಹ ಹೃದಯಸ್ಪರ್ಶಿ ಕವಿತೆಗಳು ಹೊರಬರಲು ಸಾಧ್ಯ. ಅಲ್ಲಿ ತತ್ವಜ್ಞಾನಿಯ ಧ್ಯಾನವಿದೆ; ತಪಸ್ವಿಯ ಮೌನವಿದೆ. ಇವೆರಡರ ಪ್ರತಿಫಲವಾಗಿ ಮೌನದ ಧ್ಯಾನದಿಂದ ಬಂದೊದಗುವ ತಂಪನೆಯ ತಪನೆಯ ಭಾವಗೀತವಿದೆ.
ಋಗ್ವೇದದ ಮಂತ್ರಗಳ ಕನ್ನಡೀಕರಣ
ಆದರೆ, ಇಂಥ ಭಾವಗೀತೆಗಳ ಚೌಕಟ್ಟನ್ನು ಎಚ್ಚೆಸ್ವಿಯವರು ಋಗ್ವೇದದ ಋಕ್-ಮಂತ್ರಗಳಿಗೂ ಹಾಕಿದ್ದು ಬಹು ಜನರಿಗೆ ತಿಳಿದಿರಲಿಕ್ಕಿಲ್ಲ. ಋಗ್ವೇದ ಮಂತ್ರಗಳೆಂದರೆ ಕೇವಲ ಛಂದೋಬದ್ಧವಾಗಿ ಪೂಜಾ ಸಮಯದಲ್ಲಿ ಪಠಿಸುವ ಯಾಂತ್ರಿಕ ಮಂತ್ರೋಚ್ಛಾರಗಳಷ್ಟೇ ಅಲ್ಲ. ಅದರಾಚೆಗೂ ಋಗ್ವೇದದ ಮಹತ್ವವಿದೆ. ಹಾಗೆ ನೋಡಿದರೆ, ಋಗ್ವೇದದ ನಿಜವಾದ ಅರ್ಥ-ಮಹತಿಗಳು ನಮಗೆ ತಿಳಿಯುವುದು ಋಗ್ವೇದವನ್ನು ಯಾಂತ್ರಿಕವಾಗಿ ಪದ-ಪಾಠ ರೂಪದಲ್ಲಿ ಪಠಿಸದೆ, ಒಂದು ಸಾಹಿತ್ಯ ಕೃತಿಯಂತೆ ಓದಿದಾಗ. ಋಗ್ವೇದವನ್ನು ಪ್ರಸ್ತುತ ಈ ಲೇಖಕ ಸ್ವಾಧ್ಯಾಯದಿಂದ ಓದಿ ಅರ್ಥಮಾಡಿಕೊಳ್ಳಲು ಅಧ್ಯಯನ ಶುರು ಮಾಡಿದ್ದೇ ಈ ರೀತಿಯ ಕ್ರಮದಿಂದ. ಇದರಿಂದ ನನಗೆ ಋಗ್ವೇದವನ್ನು ಒಂದು ಸಾಮಾಜಿಕ, ಸಾಂಸ್ಕೃತಿಕ, ಮತ್ತು ಐತಿಹಾಸಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಎಚ್.ಎಸ್.ವೆಂಕಟೇಶಮೂರ್ತಿಗಳ ‘ಋಗ್ವೇದ ಸ್ಪುರಣ’ ಎನ್ನುವ ಕೃತಿಯನ್ನು ನಾನು ಮೊದಲು ಓದಿದಾಗ ನನಗೆ ಅನಿಸಿದ್ದು, ಈ ಪುಸ್ತಕ ನಾನು ಋಗ್ವೇದವನ್ನು ಅಧ್ಯಯನ ಮಾಡಲು ಶುರು ಮಾಡಿದಾಗ ಸಿಕ್ಕಿದ್ದರೆ ನನ್ನ ಋಗ್ವೇದದ ಓದು ಎಷ್ಟು ಸರಳವಾಗುತ್ತಿತ್ತು ಎಂದು.
ಈ ಕೃತಿಯಲ್ಲಿ ಎಚ್ಚೆಸ್ವಿಯವರು ಆಯ್ದ ಕೆಲವು ಋಗ್ವೇದದ ಋಕ್ಕುಗಳನ್ನು ತಿಳಿಗನ್ನಡದಲ್ಲಿ ಅನುವಾದ ಮಾಡಿದ್ದಾರೆ. ಅವರ ಅನುವಾದವನ್ನು ಓದುತ್ತಿದ್ದರೆ ವೇದ ಮಂತ್ರಗಳಿಗೆ ಭಾವಗೀತೆಗಳ ಉಸಿರು ತುಂಬಿದ್ದಾರೇನೋ ಎಂದೆನಿಸುತ್ತದೆ. ವಾಸ್ತವವಾಗಿ ಈ ಭಾವನಾಲೋಕವು ಋಗ್ವೇದದಲ್ಲಿ ಅಂತಸ್ಥವಾಗಿಯೇ ಇದೆ. ಆದರೆ, ಶತ-ಶತಮಾನಗಳಿಂದಲೂ ಹೀಗೇ ಪಠನ ಮಾಡಬೇಕು ಎಂಬ ಕಟ್ಟಳೆಯೊಂದು ಋಗ್ವೇದದ ಆ ಅಂತಸ್ಥ ಸ್ವರೂಪವನ್ನು ನೋಡಲು ಅಡ್ಡಿಯಾಗುತ್ತದೆ. ಅಂಥ ಅಡ್ಡಿಯನ್ನು ಎಚ್ಚೆಸ್ವಿಯವರು ನಯವಾಗಿಯೇ ದೂರ ತಳ್ಳಿ, ವೇದ ಮಂತ್ರಗಳ ಓದಿಗೆ ಹೊಸ ಭೂಮಿಕೆಯೊಂದರ ಸಾಧ್ಯತೆಯನ್ನು ತೆರೆದು ನಮ್ಮೆದುರು ಇಡುತ್ತಾರೆ. ಅವರ ಈ ಮಾತುಗಳನ್ನು ಗಮನಿಸಿ: ‘(ಋಗ್ವೇದದಲ್ಲಿ) ಲೌಕಿಕ ಸಂತೋಷದ ಬಗ್ಗೆ ವೇದ ಸಂಸ್ಕೃತಿಗೆ ಅಲಕ್ಷ್ಯವೇನಿಲ್ಲ. ವಿಶ್ವ ರಹಸ್ಯದ ಅನ್ವೇಷಣೆ, ಶಿವಪ್ರಕಾಶವಾದ ಪರಂಜ್ಯೋತಿಯ ಸಾಕ್ಷಾತ್ಕಾರದ ಕಡೆಯೇ ಅದರ ಒಲವು’. ಹೀಗೆ ಹೇಳುವ ಮೂಲಕ ಎಚ್ಚೆಸ್ವಿಯವರು ಋಗ್ವೇದವನ್ನು ಅರ್ಥೈಸಿಕೊಳ್ಳಲು ಹೊಸ ಮಾರ್ಗವೊಂದನ್ನು ತೋರುತ್ತಾರೆ. ಅವರ ಈ ಅನುವಾದಗಳನ್ನು ನೋಡಿ:
‘ಇಮಾ ರುದ್ರಾಯ ಸ್ಥಿರಧನ್ವನೆ ಗಿರಃ ಕ್ಷಿಪ್ರೇಷವೇ ದೇವಾಯ ಸ್ವಧಾವ್ನೇ
ಅಷಾಳ್ಹಾಯ ಸಹಮಾನಾಯ ವೇಧಸೆ ತಿಗ್ಮಾಯುಧಾಯ ಭರತಾ ಶೃಣೋತು ನಃ’
ಎಂದಿರುವ ಋಕ್ ಮಂತ್ರವು ಎಚ್ಚೆಸ್ವಿಯವರ ಸರಳಗನ್ನಡದ ಪ್ರಾರ್ಥನೆಯಾಗುವ ಪರಿ ಹೀಗಿದೆ:
‘(ರುದ್ರನು) ಸಕಲ ಮಾನವರ ಪೂಜೆಗೆ ಅರ್ಹನು
ಧನುರ್ಬಾಣಗಳ ಧರಿಸಿದವ
ಎಲ್ಲ ಲೋಕಗಳ ಕಾಯುವಂಥವನು
ಅವನ ಮೀರಿ ನಿಲುವವರಿಲ್ಲ’.
ಇನ್ನೊಂದು ಋಕ್ ದ್ಯಾವಾ-ಪೃಥಿವಿಗೆ ಸಂಬಂಧಿಸಿದ್ದು. ಮೂಲ ವೇದಕಾಲೀನ ಸಂಸ್ಕೃತದಲ್ಲಿ ಅದು ಕೊಂಚ ಕಠಿಣವೇ ಅರ್ಥಮಾಡಿಕೊಳ್ಳಲು. ಆದರೆ ಆ ಪ್ರಾರ್ಥನೆಯನ್ನು ಎಚ್ಚೆಸ್ವಿಯವರು ಕನ್ನಡಿಸುವುದು ಹೀಗೆ:
‘ನೀರಡಸಿ ಕೊಳದ ಬಳಿ ಬಂದ ಜಿಂಕೆಯನು
ಆಕ್ರಮಿಸುವಂತೆ ಹಲವಾರು ತೋಳ |
ಆಕ್ರಮಿಸಿಕೊಂಡಿಹವು ಹಲವಾರು ಚಿಂತೆ
ಕಾಪಾಡಿ ಹಿಡಿದೆತ್ತಿ ನನ್ನ ತೋಳ ||’
ತೋಳ ಎನ್ನುವ ಪದವನ್ನು ಶ್ಲೇಷೆಯಲ್ಲಿ ಬಳಸಿ ಎಚ್ಚೆಸ್ವಿಯವರು ಕನ್ನಡಿಸಿದ ಈ ಋಕ್ ಮಂತ್ರವು ಮೂಲ ಸಂಸ್ಕೃತಕ್ಕಿಂತ ಕನ್ನಡದ ಈ ರೂಪದಲ್ಲಿಯೇ ಹೆಚ್ಚು ಆಪ್ಯಾಯಮಾನ ಎನಿಸಿದರೆ ಅಚ್ಚರಿಯೇನಿಲ್ಲ. ಋಕ್ ಮಂತ್ರಗಳನ್ನು ಎಚ್ಚೆಸ್ವಿಯವರ ಈ ಕನ್ನಡ ಅನುವಾದದಲ್ಲಿ ಓದುತ್ತಿದ್ದರೆ ಸೂಕ್ಷ್ಮಗ್ರಾಹಿಯಾದ ಓದುಗನ ಮನಃಪಟಲದ ಮೇಲೆ ವೇದಕಾಲೀನ ಋಷಿಯೊಡನೆ ಭಾವಗೀತೆಯೊಂದನ್ನು ಎಚ್ಚೆಸ್ವಿಯವರು ಹಂಚಿಕೊಳ್ಳುತ್ತಿರುವಂತ ಚಿತ್ರ ಮೂಡುತ್ತದೆ! ಅದವರ ಭಾವ ಸಂಲಗ್ನತೆಯ ಆಳ.
ಈ ‘ಋಗ್ವೇದ ಸ್ಪುರಣ'' ಕೃತಿಯ ಅರ್ಪಣೆಯ ಪುಟದಲ್ಲಿ ಎಚ್ಚೆಸ್ವಿಯವರು ನೆನಪಿನ ಕುರಿತಾಗಿ ಬರೆಯುವುದು ಹೀಗೆ: ‘ಮರಣವನು ಗೆಲ್ಲಲೊಂದೇ ಮದ್ದು: ಸ್ಮರಣ’!
ಹೌದಲ್ಲವೇ? ನೆನಪುಗಳಲ್ಲಿ ಮನುಷ್ಯ ಯಾವತ್ತೂ ಜೀವಂತ, ಚಿರಂಜೀವಿ. ‘ನೆನಪುಗಳೇ ಹಾಗೆ’ ಎನ್ನುವ ಕವಿತೆಯೊಂದರಲ್ಲಿ ಗೋಪಾಲಕೃಷ್ಣ ಅಡಿಗರು ಸಹ ಹಾಗೇ ಅನ್ನುತ್ತಾರೆ:
‘ನೆನಪುಗಳೇ ಹಾಗೆ; ಮಳೆಗಾಲದಲ್ಲಿ ನೆಲದೊಳುಕ್ಕುವ ನೀರಿನ ತುಳುಕು
ಬೇಸಿಗೆಗೆ ಬಾನೆಲ್ಲ ನೀರ ನೆಳಲು
ಕಾಯುವ ನೆಲಕ್ಕಿಳಿವ ಸರಿಯ ಬಿಳಲು’.
ಆದ್ದರಿಂದ, ಎಚ್ಚೆಸ್ವಿಯವರು ಇಲ್ಲ ಎನ್ನುವಂತಿಲ್ಲ, ನೆಲದೊಳುಕ್ಕುವ ನೀರಿನ ಬುಗ್ಗೆಯ ಹಾಗೆ, ಒರತೆಯ ಹಾಗೆ ಅವರ ಭಾವಗೀತೆಗಳ ನೆನಪಿನಲಿ ಅವರು ನಿತ್ಯ ಜೀವಂತ, ನಿತ್ಯ ಚಿರಂಜೀವ!