ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಇತಿಹಾಸದಲ್ಲಿ ಶ್ರೀರಾಮ ನವಮಿ ಹಬ್ಬ ಹಿಂದೂಗಳಿಗೆ ವಿಶೇಷದ ಹಬ್ಬವಾಗಿದೆ. ಅದರಲ್ಲೂ ಶ್ರೀರಾಮನವಮಿ ಹಬ್ಬಕ್ಕೆ ಭಕ್ತಾದಿಗಳು ಪ್ರತಿ ವರ್ಷ ಶ್ರೀರಾಮ ಮತ್ತು ಆಂಜನೇಯ ದೇವಾಲಯಗಳಿಗೆ ತೆರಳಿ ಪೂಜೆ ಪುರಸ್ಕಾರ ಸಲ್ಲಿಸಿ ಸಂಭ್ರಮಿಸುತ್ತಾರೆ.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ಸಮಾಜ ಸೇವಕ ಸಂದೀಪ್.ಬಿ.ರೆಡ್ಡಿ ಅವರು ಕಳೆದ ವರ್ಷದಿಂದ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ರಾಮೋತ್ಸವದ ಹೆಸರಿನಲ್ಲಿ ಪ್ರತಿ ವರ್ಷ ಬೈಕ್ ರ್ಯಾಲಿ ಏರ್ಪಡಿಸುವುದಾಗಿ ಎಲ್ಲಾ ಹಿಂದೂಗಳು ಒಗ್ಗೂಡಿ ಯಶಸ್ವಿಗೊಳಸಿ ಎಂದು ಕರೆ ನೀಡಿದ್ದರು. ಅದರಂತೆ ನಗರ ಹೊರವಲಯದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಬೈಕ್ ರ್ಯಾಲಿಗೆ ಸಾವಿರಾರು ಹಿಂದೂಗಳು ಭಾಗಿಯಾಗಿದ್ದು, ದಾರಿಯುದ್ದಕ್ಕೂ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಕೇಸರಿ ಬಾವುಟಗಳನ್ನು ಹಾರಿಸುವ ಮೂಲಕ ಒಗ್ಗಟ್ಟು ತೋರಿಸಿದರು.ರಾಮೋತ್ಸವ ಮೆರವಣಿಗೆಯಲ್ಲಿ ಅಯೋಧ್ಯೆ ಶೈಲಿಯ ಶ್ರೀರಾಮನ ಮೂರ್ತಿ, ಮಂಗಳವಾದ್ಯಗಳು ಹಾಗೂ ಜಾನಪದ ಕಲಾತಂಡಗಳ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು.ಭಗತ್ ಸಿಂಗ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮಾತನಾಡಿ, ಶ್ರೀರಾಮನ ಆದರ್ಶಗಳನ್ನು ನೆನೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು.
ಎರಡನೇ ವರ್ಷದ ರಾಮೋತ್ಸವದ ಮೆರವಣಿಗೆ ಪ್ರಯುಕ್ತ ವೀರಾಂಜನೇಯ ದೇವಾಲಯದಿಂದ ಪ್ರಾರಂಭವಾದ ಬೈಕ್ ರ್ಯಾಲಿಯು ಬಿಬಿ ರಸ್ತೆಯ ಮೂಲಕ ಸಂತೆ ಮಾರುಕಟ್ಟೆ, ಬಜಾರ್ ಟೌನ್ ಹಾಲ್ ಸರ್ಕಲ್, ಗಂಗಮ್ಮ ಗುಡಿ ರಸ್ತೆ, ಎಂ.ಜಿ.ರಸ್ತೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿ ನಂತರ ವಾಪಸಂದ್ರ ಹೊರವಲಯದ ಸಮರಾಸ್ ವೆಜ್ ಹೋಟೆಲ್ ವರೆಗೆ ಸಾಗಿದ ಮೆರವಣಿಗೆ ನಗರದ ಜನರ ಗಮನ ಸೆಳೆಯಿತು. ನಂತರ ಪ್ರಸಾದ ವಿನಿಯೋಗದೊಂದಿಗೆ ಮುಕ್ತಾಯವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸುಮಂಗಲರು ಬೈಕ್ ಸವಾರರ ಮೇಲೆ ಪುಷ್ಪಗಳನ್ನು ಎರಚಿ ಸಂತೋಷ ಪಟ್ಟರು.