ಕನ್ನಡಪ್ರಭವಾರ್ತೆ ಮೈಸೂರು
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ, ಕಾವ್ಯ, ಮೀಮಾಂಸೆ, ವಿಮರ್ಶೆ, ಗದ್ಯ ಸಾಹಿತ್ಯದಲ್ಲಿ ಮಹತ್ವದ ಕಾರ್ಯ ಮಾಡಿರುವ ಜಿಎಸ್ಎಸ್ ಅವರ ಮೂರು ದಶಕಗಳ ಕಾಲ ವಚನ ಸಾಹಿತ್ಯದ ಭಿನ್ನ ನೆಲೆಗಳನ್ನು ಕುರಿತ ಬರೆದಿದ್ದ ಲೇಖನಗಳನ್ನು ಆ ಕೃತಿಯಲ್ಲಿ ಸಂಕಲಿಸಲಾಗಿದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಇಲ್ಲಿ ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಾಗಿದೆ.
ವಚನಕಾರರ ವಿಚಾರ ಕ್ರಾಂತಿ, ಶರಣ ಸಾಹಿತ್ಯದ ಪ್ರಸ್ತುತತೆ, ಶರಣ ಧರ್ಮದ ಆಧ್ಯಾತ್ಮಿಕ ನಿಲುವುಗಳು, ವಚನಗಳಲ್ಲಿ ಕಾವ್ಯತತ್ವ, ಬೆಡಗಿನ ವಚನಗಳುಃ ನೆಲೆ- ಹಿನ್ನೆಲೆ, ಕಾಯಕವನ್ನು ಕುರಿತ ವಚನಗಳುಃ ಒಂದು ಸಾಹಿತ್ಯಕ ವಿಶ್ಲೇಷಣೆ, ಶರಣರು ಮತ್ತು ದಲಿತ ಪ್ರಜ್ಞೆ, ಶರಣರ ದೇವಸ್ಥಾನ ನಿರಾಕರಣೆಃ ಒಂದು ದಿಟ್ಟ ಹೆಜ್ಜೆ, ಬಸವಣ್ಣನವರ ವಚನಗಳಲ್ಲಿ ಕಾವ್ಯ ಸೌಂದರ್ಯ, ಬಸವಣ್ಣ ಅವರು ಮತ್ತು ರಾಜತ್ವ, ತುರುಗಾಹಿ ರಾಮಣ್ಣನ ಒಂದು ವಚನ, ಅಕ್ಕಮಹಾದೇವಿಃ ಶರಣ ಚಳವಳಿಯಲ್ಲೊಂದು ಭಿನ್ನಸ್ವರ, ವಚನಕಾರರು ಮತ್ತು ನೇಮಿಚಂದ್ರ, ಕರ್ನಾಟಕ ಶಿವಶರಣರು ಮತ್ತು ಶ್ರೀ ರಾಮಕೃಷ್ಣ ಪರಮಹಂಸರಃ ಕೆಲವು ಸಾಮ್ಯಗಳು, ಸಿದ್ಧರಾಮಃ ಒಂದು ಪರಿಶೀಲನೆ, ಹರಿಹರ ಬಸವರಾಜ ದೇವರ ರಗಳೆಃ ಒಂದು ಸಮೀಕ್ಷೆ- ಈ 17 ಲೇಖನಗಳು ಈ ಗ್ರಂಥದಲ್ಲಿವೆ.ವಚನಕಾರರ ಮೌಲ್ಯಗಳು ವಿಚಾರಕ್ರಾಂತಿಯಲ್ಲಿವೆ. ವಚನಗಳಲ್ಲಿ ಕಾವ್ಯತತ್ವ ಲೇಖನದಲ್ಲಿ ಜಿಎಸ್ಎಸ್ ಅವರ ಸೃಜನಶೀಲ ಚಿಂತನೆ ಇದೆ. ವಚನ ಸಾಹಿತ್ಯದ ಮಹತ್ವವನ್ನು ಹಿಗ್ಗಿಸಿದ ಬೆಡಗಿನ ವಚನಗಳ ಬಗ್ಗೆ ಲೇಖನ ಇದೆ. ವಚನ ಸಾಹಿತ್ಯವು ಕಾಯಕಕ್ಕೆ ನೀಡಿದ ಪ್ರಾಧಾನ್ಯತೆಯನ್ನು ಪ್ರಸ್ತಾಪಿಸಿದ್ದಾರೆ.
22 ಪುಟಗಳ ಸುದೀರ್ಘವಾದ ಹಾಗೂ ವಿಮರ್ಶೆಯ ಸ್ವರೂಪದ ಮುನ್ನುಡಿ ಇದೆ. ಇದು ಕೂಡ ಅತ್ಯಂತ ಅರ್ಥಗರ್ಭಿತವಾಗಿದೆ. ಇಡೀ ಕೃತಿಯ ಹೂರಣವನ್ನು ಮಹೇಂದ್ರಮೂರ್ತಿ ಅವರು ಓದುಗರಿಗೆ ತಮ್ಮದೇ ಆದ ಅದ್ಭುತ ಬರವಣಿಗೆ ಶೈಲಿಯಲ್ಲಿ ಉಣಬಡಿಸಿದ್ದಾರೆ.