ಬೆಂಗಳೂರು : ಸೇವೆ ಕಾಯಮಾತಿ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ಘನತ್ಯಾಜ್ಯ ಸಾಗಿಸುವ ವಾಹನಗಳ ಚಾಲಕರು, ಸಹಾಯಕರು ಮತ್ತು ಲೋಡರ್ಗಳು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 12 ಸಾವಿರಕ್ಕೂ ಹೆಚ್ಚಿನ ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗುತ್ತಿದೆ. ಅದೇ ರೀತಿ ಗುತ್ತಿಗೆ ಮತ್ತು ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ತಮ್ಮ ಸೇವೆಯನ್ನು ಕಾಯಂ ಮಾಡಲು ಐಪಿಡಿ ಸಾಲಪ್ಪ ಅವರು ನೀಡಿರುವ ವರದಿ ಜಾರಿಗೊಳಿಸಬೇಕು. ಚಾಲಕರು, ಸಹಾಯಕರು ಮತ್ತು ಲೋಡರ್ಗಳನ್ನು ಪೌರಕಾರ್ಮಿಕರೆಂದು ಪರಿಗಣಿಸಿ ಅಧಿಸೂಚನೆ ಪ್ರಕಟಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಮನೆಗಳಿಗೆ ತೆರಳಿ ಕಸ ಸಂಗ್ರಹಿಸಿ, ವಿಲೇವಾರಿ ಮಾಡುವ ವಾಹನ ಚಾಲಕರು ಮತ್ತು ಸಹಾಯಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ, ನಿರಂತರ ಸ್ವರೂಪದ ಕೆಲಸವನ್ನು ಗುತ್ತಿಗೆ ನೀಡುವುದು ಮತ್ತು ಗುತ್ತಿಗೆ ಕಾರ್ಮಿಕರನ್ನು ನೇಮಿಸುವುದು ಕಾಯ್ದೆ ಅಡಿಯಲ್ಲಿ ಕಾನೂನು ಬಾಹಿರ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಐಪಿಡಿ ಸಾಲಪ್ಪ ವರದಿಯಲ್ಲಿರುವಂತೆ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ ಬೆಂಗಳೂರಿಗೆ 32000 ಪೌರಕಾರ್ಮಿಕರನ್ನು ನೇಮಿಸಬೇಕು. ಚಾಲಕರು, ಸಹಾಯಕರು ಮತ್ತು ಲೋಡರ್ಗಳನ್ನೂ ಪೌರಕಾರ್ಮಿಕರೆಂದು ಪರಿಗಣಿಸಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಯಮಾತಿಗೆ ಅವಕಾಶವಿಲ್ಲ: ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯನ್ನು ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಅದಕ್ಕಾಗಿ ಅವರು ವಾಹನ ಮತ್ತು ಸಿಬ್ಬಂದಿ ನೇಮಿಸುತ್ತಾರೆ. ಹೀಗಾಗಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಮಾಡುವ ಚಾಲಕರು, ಸಹಾಯಕರು ಮತ್ತು ಲೋಡರ್ಗಳನ್ನು ಕಾಯಂಗೊಳಿಸಲು ಬಿಬಿಎಂಪಿ ಬಳಿ ಅವಕಾಶವಿಲ್ಲ. ಆದರೂ, ಪ್ರತಿಭಟನೆ ಕುರಿತಂತೆ ಗುತ್ತಿಗೆದಾರರಿಂದ ವರದಿ ಪಡೆದು ಅವರ ವಿವರಣೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
2 ವಲಯಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ: ಪ್ರತಿಭಟನೆಯಿಂದಾಗಿ ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಸಮಸ್ಯೆಯಾಗಿದೆ. ಸುಮಾರು 500 ಟನ್ಗೂ ಹೆಚ್ಚಿನ ತ್ಯಾಜ್ಯ ವಿಲೇವಾರಿಯಾಗದೇ ರಸ್ತೆ ಬದಿಯಲ್ಲಿಯೇ ಉಳಿದಿದೆ. ಸದ್ಯ ಚಾಲಕರು, ಸಹಾಯಕರು ಮತ್ತು ಲೋಡರ್ಗಳ ಪ್ರತಿಭಟನೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳುತ್ತಿದ್ದು, ಮಂಗಳವಾರವೂ ಪ್ರತಿಭಟನೆ ಮುಂದುವರಿದರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ.