ಅಕಾಲಿಕ ಮಳೆ, ಬಿಸಿಲಿನಿಂದ ತರಕಾರಿ ದುಬಾರಿ

KannadaprabhaNewsNetwork | Updated : May 08 2025, 05:05 AM IST
Follow Us

ಸಾರಾಂಶ

ಅಕಾಲಿಕ ಮಳೆ ಬಿಸಿಲಿನ ತಾಪದಿಂದ ಬೆಳೆಗಳು ಹಾನಿಗೀಡಾದ ಪರಿಣಾಮ ಕಳೆದ ವಾರಕ್ಕೆ ಹೋಲಿಸಿದಲ್ಲಿ ಪ್ರಸ್ತುತ ತರಕಾರಿಗಳ ದರ ಕೆ.ಜಿ.ಗೆ ₹40 ವರೆಗೂ ಏರಿಕೆಯಾಗಿದ್ದು, ಖರೀದಿಗೆ ಗ್ರಾಹಕರು ಹಿಂದೇಟು ಹಾಕುವಂತಾಗಿದೆ.

 ಬೆಂಗಳೂರು : ಅಕಾಲಿಕ ಮಳೆ ಬಿಸಿಲಿನ ತಾಪದಿಂದ ಬೆಳೆಗಳು ಹಾನಿಗೀಡಾದ ಪರಿಣಾಮ ಕಳೆದ ವಾರಕ್ಕೆ ಹೋಲಿಸಿದಲ್ಲಿ ಪ್ರಸ್ತುತ ತರಕಾರಿಗಳ ದರ ಕೆ.ಜಿ.ಗೆ ₹40 ವರೆಗೂ ಏರಿಕೆಯಾಗಿದ್ದು, ಖರೀದಿಗೆ ಗ್ರಾಹಕರು ಹಿಂದೇಟು ಹಾಕುವಂತಾಗಿದೆ.

ಬೀನ್ಸ್, ಬಟಾಣಿ, ನವಿಲುಕೋಲು, ಹೂಕೋಸು, ನಿಂಬೆ, ಸೌತೆಕಾಯಿ ಸೇರಿ ಇನ್ನಿತರ ತರಕಾರಿಗಳ ಬೆಲೆ ಹೆಚ್ಚಾಗಿದೆ. ಅವರೇಕಾಯಿ ಸೀಸನ್‌ ಮುಗಿದಿರುವುದರಿಂದ ಇದರ ಬೆಲೆಯೂ ಏರಿಕೆಯಾಗಿದೆ. ತೆಂಗಿನಕಾಯಿ ದರ ಹೆಚ್ಚಾಗಿರುವ ಹೊತ್ತಲ್ಲೇ ಈಗ ತರಕಾರಿ ಬೆಲೆಯೂ ಹೆಚ್ಚಾಗಿದ್ದು, ಬೆಂಗಳೂರಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.

ನಗರದ ಕಲಾಸಿಪಾಳ್ಯ, ದಾಸನಪುರ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿದೆ. ಬಿಸಿಲಿನ ತಾಪದ ಜತೆಗೆ ಕಳೆದ ವಾರದಿಂದ ಸುರಿದ ಅಕಾಲಿಕ ಮಳೆಗೆ ತರಕಾರಿ ಕೊಳೆತಿದೆ. ಕ್ವಿಂಟಲ್‌ ಲೆಕ್ಕದ ಹೊಲ್‌ಸೇಲ್‌ ದರವೂ ಹೆಚ್ಚಾಗಿದ್ದು, ಪರಿಣಾಮ ಕೆ.ಆರ್‌.ಮಾರುಕಟ್ಟೆ, ಗಾಂಧಿ ಬಜಾರ್‌, ಮಲ್ಲೇಶ್ವರ, ಯಶವಂತಪುರ ಸೇರಿ ಎಲ್ಲೆಡೆಯ ಚಿಲ್ಲರೆ ಮಾರುಕಟ್ಟೆಯಲ್ಲೂ ತರಕಾರಿಗಳು ದುಬಾರಿಯಾಗಿವೆ.

ಬಾಳೆ ಹಣ್ಣು ದಿಢೀರ್ ಹೆಚ್ಚಳ:

ಮೋಡ ಕವಿದ ವಾತಾವರಣದೊಂದಿಗೆ ಮಳೆ ಬರುತ್ತಿದ್ದರೆ ಕೆಲವು ತರಕಾರಿಗಳು ಬೇಗ ಕೊಯ್ಲಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಸಿಮೆಣಸಿಕಾಯಿ, ಚಪ್ಪರದವರೆಕಾಯಿ, ಹಾಗಲಕಾಯಿ, ಗೋರಿಕಾಯಿ ಮತ್ತಿತರ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಅವರೆಕಾಯಿ ಬದಲು ಹಿತಕಿದ ಬೆಳೆ ಬರುತ್ತಿದ್ದು, ಕೇಜಿಗೆ ₹300 - ₹350 ಇತ್ತು. ಜೊತೆಗೆ ಮೆಂತ್ಯ ಸೊಪ್ಪು, ಸಬ್ಬಕ್ಕಿ ಸೊಪ್ಪು, ಹರಿವೆ ಸೊಪ್ಪು, ದಂಟಿನ ಸೊಪ್ಪು, ಪಾಲಕ್​ ಸೊಪ್ಪುಗಳು ಕೂಡ ಮಳೆಯಿಂದ ಹಾಳಾಗಿದ್ದು, ದರಗಳು ದಿಢೀರ್ ಏರಿಕೆಯಾಗಿದೆ. ಇನ್ನು, ಬಾಳೆ ಹಣ್ಣಿನ ದರ ಕೂಡ ದಿಢೀರ್ ಹೆಚ್ಚಾಗಿದ್ದು, ಕೇಜಿಗೆ ₹80 ರಿಂದ ₹100 ಗೆ ಮಾರಾಟ ಮಾಡಲಾಗುತ್ತಿದೆ.

ಕ್ವಿಂಟಲ್‌ ಈರುಳ್ಳಿಗೆ ₹1400:

ಮಳೆಯಿಂದಾಗಿ ಈರುಳ್ಳಿ ಕೊಳೆಯುತ್ತಿದೆ. ಹೀಗಾಗಿ ರೈತರು ಬಂದಷ್ಟು ಬೆಲೆಗೆ ತಂದು ಮಾರುತ್ತಿದ್ದಾರೆ. ಯಶವಂತಪುರ ಎಪಿಎಂಸಿಯಲ್ಲಿ ರಾಜ್ಯದ ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ₹1400 , ಮಹಾರಾಷ್ಟ್ರದ ಈರುಳ್ಳಿ ₹1800 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ₹ 35- ₹ 40 ಇದೆ. ಈ ನಡುವೆ ಸಾಧಾರಣ ಗುಣಮಟ್ಟದ ಈರುಳ್ಳಿ-ಟೊಮೆಟೊ 5 ಕೆಜಿಗೆ ₹ 100 ನಂತೆಯೂ ಮಾರಾಟವಾಗುತ್ತಿದೆ.

ತರಕಾರಿಪ್ರಸ್ತುತ ದರ (ಕೇಜಿ ₹ )ಬೀನ್ಸ್80-90

ಈರುಳ್ಳಿ 35-40

ಬಟಾಣಿ 140

ನವಿಲುಕೋಲು60

ಡೊಳ್ಳುಮೆಣಸು60

ನಿಂಬೆ7 (1ಕ್ಕೆ)

ಬಿಳಿ ಬದನೆಕಾಯಿ36

ಗುಂಡು ಬದನೆಕಾಯಿ28

ದಪ್ಪ ಮೆಣಸಿನಕಾಯಿ56

ಗೋರಿಕಾಯಿ64

ಡಬ್ಬಲ್‌ ಬೀನ್ಸ್‌115

ಬೆಳ್ಳುಳ್ಳಿ175

ಎಲೆಕೋಸು22

ಟೊಮೇಟೊ20

ಹೀರೇಕಾಯಿ46

ಸಬ್ಬಕ್ಕಿ ಸೊಪ್ಪು80

ಮೆಂತ್ಯ ಸೊಪ್ಪು85

ಬೆಂಡೆಕಾಯಿ44

ಹಿತಕಿದ ಅವರೆಬೆಳೆ300-350

ಬಿಸಿಲು, ಮಳೆಗೆ ತರಕಾರಿ ಕೊಳೆಯುತ್ತಿದ್ದು, ಪೂರೈಕೆ ಕಡಿಮೆ ಆಗಿದೆ. ಇದರಿಂದ ತರಕಾರಿ ದರ ಕಳೆದ ವಾರಕ್ಕೆ ಹೋಲಿಸಿದರೆ ಹೆಚ್ಚಾಗಿದೆ.

- ನಂಜಪ್ಪ, ತರಕಾರಿ ವರ್ತಕರು ವಿಜಯನಗರ