ಕನ್ನಡಪ್ರಭವಾರ್ತೆ ಬೆಂಗಳೂರು

ಭಾರತದ ಅತ್ಯಂತ ಕ್ರಿಯಾಶೀಲ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕರ್ನಾಟಕವು, 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿರುವ 8.5 ಲಕ್ಷಕ್ಕೂ ಅಧಿಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಮ್‌ಎಸ್‌ಎಮ್‌ಇ) ತವರಾಗಿದೆ. ಆರ್ಥಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಬೆಂಗಳೂರನ್ನು ಮೀರಿ ವಿಸ್ತರಿಸುತ್ತಿದ್ದು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳು ಪ್ರಮುಖ ಆರ್ಥಿಕ ಹಾಗೂ ಕೈಗಾರಿಕಾ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ರಾಜ್ಯದಾದ್ಯಂತ ಹೆಚ್ಚುತ್ತಿರುವ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಯು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಲು, ಹೊಸ ಮಾರುಕಟ್ಟೆಗಳನ್ನು ತಲುಪಲು ಹಾಗೂ ಬೃಹತ್ ಪೂರೈಕೆ ಸರಪಳಿಗಳಲ್ಲಿ ಭಾಗವಹಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಕಾರ, ಕರ್ನಾಟಕದಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಗ್ರಾಹಕರು ತಮ್ಮ ವ್ಯವಹಾರ ವಿಸ್ತರಣೆ ಮತ್ತು ಮಾರುಕಟ್ಟೆ ವೈವಿಧ್ಯೀಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ರಾಜ್ಯದ ಉದಯೋನ್ಮುಖ ವಾಣಿಜ್ಯ ಕೇಂದ್ರಗಳಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ವಾಣಿಜ್ಯ ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಬ್ಯಾಂಕ್ ಗಮನಿಸಿದ್ದು, ಇದು ಉದ್ಯಮಿಗಳಲ್ಲಿ ಹೆಚ್ಚುತ್ತಿರುವ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಕೋಟಕ್, ತನ್ನ ಮೂಲತತ್ವದಲ್ಲೇ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಗಮನಹರಿಸುವ ಬ್ಯಾಂಕ್ ಆಗಿದೆ. 2026 ರ ಜೂನ್ 30 ರ ವೇಳೆಗೆ, ಬ್ಯಾಂಕ್ ₹ 1,25,826 ಕೋಟಿಗಳಷ್ಟು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಲದ ಪ್ರಮಾಣವನ್ನು ಹೊಂದಿದ್ದು, ವಾರ್ಷಿಕವಾಗಿ ಶೇಕಡಾ 20 ರಷ್ಟು ಬೆಳವಣಿಗೆಯೊಂದಿಗೆ ಬ್ಯಾಂಕ್‌ನ ಒಟ್ಟು ಮುಂಗಡಗಳ ಪಾಲಿನಲ್ಲಿ ಶೇಕಡಾ 24 ರಷ್ಟನ್ನು ಹೊಂದಿದೆ.

ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಸಣ್ಣ ಮತ್ತು ಮಧ್ಯಮ ಉದ್ಯಮ ವಿಭಾಗದ ಮುಖ್ಯಸ್ಥರಾದ ಶೇಖರ್ ಭಂಡಾರಿ ಅವರು, ‘ಬೆಳವಣಿಗೆಯ ದಾರಿಗಳು ಇನ್ಮುಂದೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಇತರ ಉದಯೋನ್ಮುಖ ಕೇಂದ್ರಗಳ ಉದ್ಯಮಿಗಳು ಬೆಳವಣಿಗೆಗಾಗಿ ಹೂಡಿಕೆ ಮಾಡುವ ಮೂಲಕ ಹಾಗೂ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುವ ಮೂಲಕ ತಮ್ಮ ಸಾಹಸ ಮನೋಭಾವವನ್ನು ಪ್ರದರ್ಶಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ನಗರಗಳಿಂದ ವಾಣಿಜ್ಯ ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಾಲೀಕರಲ್ಲಿ ಹೆಚ್ಚುತ್ತಿರುವ ಧೈರ್ಯವನ್ನು ತೋರಿಸುತ್ತದೆ. ಭಾರತದಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದೀರ್ಘಕಾಲದ ಬ್ಯಾಂಕಿಂಗ್ ಪಾಲುದಾರರಾಗಿ, ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಆತ್ಮವಿಶ್ವಾಸದಿಂದ ಬೆಳೆಸಲು ಬೆಂಬಲಿಸುವುದರ ಮೇಲೆ ನಾವು ಗಮನಹರಿಸಿದ್ದೇವೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಬೆಳೆಯುತ್ತಿರುವ ತಂತ್ರಜ್ಞಾನ, ಉತ್ಪಾದನೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿ‍ಸಿ) ಜಾಲವು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೃಹತ್ ಮೌಲ್ಯ ಸರಪಳಿಗಳಲ್ಲಿ ಭಾಗವಹಿಸಲು ನೂತನ ಅವಕಾಶಗಳನ್ನು ಸೃಷ್ಟಿಸುತ್ತಿದೆ. ವ್ಯವಹಾರಗಳು ಬೆಳೆದಂತೆ, ಉದ್ಯಮಿಗಳು ತಮ್ಮ ವಾಣಿಜ್ಯ ಮತ್ತು ವೈಯಕ್ತಿಕ ಹಣಕಾಸು ಅಗತ್ಯಗಳೆರಡನ್ನೂ ಬೆಂಬಲಿಸಬಲ್ಲ ಬ್ಯಾಂಕಿಂಗ್ ಪಾಲುದಾರರನ್ನು ಹೆಚ್ಚಾಗಿ ಬಯಸುತ್ತಿದ್ದಾರೆ.


ಈ ಕುರಿತು ಭಂಡಾರಿ, ‘ಇಂದಿನ ಉದ್ಯಮಿಗಳು ಕೇವಲ ಸಾಲ ನೀಡುವ ಸಂಸ್ಥೆಗಿಂತ ಹೆಚ್ಚಿನದನ್ನು ಬಯಸುತ್ತಾರೆ. ಅವರು ತಮ್ಮ ವ್ಯವಹಾರವನ್ನು ಅರ್ಥಮಾಡಿಕೊಳ್ಳುವ ಮತ್ತು ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅವರಿಗೆ ಬೆಂಬಲ ನೀಡುವ ಬ್ಯಾಂಕಿಂಗ್ ಪಾಲುದಾರರನ್ನು ಬಯಸುತ್ತಾರೆ. ನಮ್ಮ ಪೂರ್ಣಮಟ್ಟದ ಬ್ಯಾಂಕಿಂಗ್ (ಹೌಸ್- ಬ್ಯಾಂಕ್) ವಿಧಾನವು ಈ ನಂಬಿಕೆಯ ಮೇಲೆ ನಿರ್ಮಿತವಾಗಿದೆ. ಒಂದೇ ಬಾಂಧವ್ಯದ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಾಲೀಕರ ವ್ಯವಹಾರ, ವೈಯಕ್ತಿಕ ಬ್ಯಾಂಕಿಂಗ್, ವಹಿವಾಟು ಬ್ಯಾಂಕಿಂಗ್ ಮತ್ತು ಬೆಳವಣಿಗೆಯ ಅಗತ್ಯಗಳನ್ನು ಬೆಂಬಲಿಸಲು ನಾವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಇದು ಅವರಿಗೆ ಅವಕಾಶಗಳನ್ನು ಪಡೆದುಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಬೆಳೆಯಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದ್ದಾರೆ.

ಕೋಟಕ್ ಮಹೀಂದ್ರಾ ಬ್ಯಾಂಕ್, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಕಾರ್ಯಾಚರಣೆಯೊಂದಿಗೆ ಕರ್ನಾಟಕದಾದ್ಯಂತ ತನ್ನ ಅಸ್ತಿತ್ವವನ್ನು ಗಟ್ಟಿಗಳಿಸುವುದನ್ನು ಮುಂದುವರಿಸಿದೆ. ತನ್ನ ಬಾಂಧವ್ಯ ಆಧಾರಿತ ವಿಧಾನ, ಕ್ಷೇತ್ರ ಪರಿಣತಿ ಮತ್ತು ಡಿಜಿಟಲ್ ಸಾಮರ್ಥ್ಯಗಳ ಮೂಲಕ, ಕರ್ನಾಟಕದ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಬೆಳೆಯಲು ನೆರವಾಗಲು ಕೋಟಕ್ ಬದ್ಧವಾಗಿದೆ.