ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೆಎಫ್ ಡಿ ಸೋಂಕಿಗೆ ಬಲಿಯಾದ ಯುವತಿಯ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆಎಫ್ಡಿ ಜನಜಾಗೃತಿ ಒಕ್ಕೂಟದ ಸಂಚಾಲಕ ಕೆ.ಪಿ.ಶ್ರೀಪಾಲ್ ಒತ್ತಾಯಿಸಿದರು.ಇಲ್ಲಿನ ಪ್ರೆಸ್ಟ್ರಸ್ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬಪ್ಪನಮನೆ ಗ್ರಾಮದ 18 ವರ್ಷದ ಯುವತಿ ಜ.8 ರಂದು ಕೆಎಫ್ ಡಿಗೆ ಬಲಿಯಾಗಿದ್ದಾಳೆ.
ಆದರೆ, ಯುವತಿಯ ಸಾವಿನ ವಿಷಯದಲ್ಲಿ ಆರೋಗ್ಯ ಇಲಾಖೆ ವಾಸ್ತವಾಂಶಗಳನ್ನು ಮರೆಮಾಚಿ ಆಕೆಯ ಸಾವಿಗೆ ಕಾರಣವಾಗಿರುವುದಲ್ಲದೆ ಮಾಹಿತಿಯನ್ನು ತಿರುಚಿ ಸಾರ್ವಜನಿಕರನ್ನು ಮತ್ತು ಸರ್ಕಾರವನ್ನು ದಿಕ್ಕುತಪ್ಪಿಸಿರುವುದು ದಾಖಲೆ ಸಹಿತ ಬಹಿರಂಗವಾಗಿದೆ.
ಯುವತಿಗೆ ಕೆಎಫ್ಡಿ ಸೋಂಕು ಇರುವುದು ಗೊತ್ತಾಗಿದ್ದರೂ ನೆಗೆಟಿವ್ ವರದಿಕೊಟ್ಟು ಆಕೆಗೆ ಚಿಕಿತ್ಸೆಯ ದಿಕ್ಕುತಪ್ಪಿಸಿ ಯುವತಿಯ ಸಾವಿಗೆ ಕಾರಣ ಆಗಿರುವ ಡಿಎಚ್ಒ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಯುವತಿಯ ರಕ್ತದಲ್ಲಿ ಮೊದಲ ವೈರಸ್ ಪತ್ತೆ ಪರೀಕ್ಷೆಯೇ ಲೋಪವಾಗಿದ್ದರೂ, ಮರು ಪರೀಕ್ಷೆ ನಡೆಸುವ ಬದಲು ಫಲಿತಾಂಶ ನೆಗೆಟಿವ್ ಎಂದು ಸುಳ್ಳು ಮಾಹಿತಿ ನೀಡಿ ಆಕೆಯ ಚಿಕಿತ್ಸೆಯ ದಿಕ್ಕುತಪ್ಪಿಸಿದ್ದಾರೆ.
ಆಕೆಗೆ ಸಕಾಲದಲ್ಲಿ ಸೂಕ್ತ ಪರೀಕ್ಷೆ ನಡೆಸಿ, ಪ್ರಾಮಾಣಿಕ ಫಲಿತಾಂಶ ನೀಡಿದ್ದರೆ, ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭಿಸಿ ಆಕೆ ಬದುಕು ಳಿಯುವ ಸಾಧ್ಯತೆ ಹೆಚ್ಚಿತ್ತು ಎಂದರು. ಅದಲ್ಲದೆ, ಮೃತ ಯುವತಿಯ ಸಹೋದರಿಯ ರಕ್ತದ ಮಾದರಿಯ ಪರೀಕ್ಷೆಯ ಫಲಿತಾಂಶವನ್ನು ಕೂಡ ತಿರುಚಿ, ಸುಳ್ಳು ವರದಿ ನೀಡಿ ಚಿಕಿತ್ಸೆಯ ದಿಕ್ಕು ತಪ್ಪಿಸಿ ಆಕೆಯ ಜೀವಕ್ಕೆ ಅಪಾಯ ತಂದಿದ್ದಾರೆ.
ಜಿಲ್ಲಾ ಅರೋಗ್ಯಾಧಿಕಾರಿ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದಂತೆ ಮೃತ ಯುವತಿಯ ಮೊದಲ ಕೆಎಫ್ಡಿ ವೈರಸ್ ಪರೀಕ್ಷೆ ನೆಗಟಿವ್ ಆಗಿರಲಿಲ್ಲ. ವಿಡಿಎಲ್ನಲ್ಲಿ ನಡೆಸಿದ ರಕ್ತದ ಮಾದರಿ ಪರೀಕ್ಷೆಯ ದತ್ತಾಂಶ ಮತ್ತು ಲಾಗ್ ವಿವರಗಳನ್ನು ಮರು ಪರಿಶೀಲಿಸಿದಾಗ ಯುವತಿಯ ರಕ್ತದ ಮಾದರಿಯ ಮೊದಲ ಪರೀಕ್ಷೆಯು ಜ.3ರಂದು ನಡೆದಿರುತ್ತದೆ.
ಯಂತ್ರದ ಲಾಗ್ವಿವರದ ಪ್ರಕಾರ ಅಂದು ಮಧ್ಯಾಹ್ನ 1.24ಕ್ಕೆ ನಡೆದ ಪರೀಕ್ಷೆಯು ವಿಫಲವಾಗಿದೆ. ಹೀಗೆ ಒಮ್ಮೆ ಪರೀಕ್ಷೆ ನಡೆಸಿದಾಗ ಯಾವುದೇ ಫಲಿತಾಂಶ ಬರದೆ. ಪರೀಕ್ಷೆ ವಿಫಲವಾದಾಗ ಮರು ಪರೀಕ್ಷೆ ಮಾಡುವುದು ಇಲಾಖೆಯ ನಿಯಮಾವಳಿ.
ಆದರೆ, ಈ ಪ್ರಕರಣದಲ್ಲಿ ಹಾಗೆ ಮರು ಪರೀಕ್ಷೆ ಮಾಡುವ ಮುನ್ನವೇ. ನೆಗೆಟಿವ್ ಎಂದು ತರಾತುರಿಯಲ್ಲಿ ಸುಳ್ಳು ವರದಿ ನೀಡಲಾಗಿದೆ ಎಂದು ದೂರಿದರು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವೈದ್ಯರು ಮರು ಪರೀಕ್ಷೆಗೆ ರಕ್ತದ ಮಾದರಿ ಕಳಿಸಿಕೊಟ್ಟಿದ್ದರು. ಆಗ ಮತ್ತೊಮ್ಮೆ ಜ.4ರಂದು ಎರಡನೇ ಬಾರಿಗೆ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿತ್ತು.
ಅಂದು ಬೆಳಿಗ್ಗೆ 11.17ಕ್ಕೆ ನಡೆಸಿದ ರಕ್ತದ ಮಾದರಿ ಸಂಖ್ಯೆ 24H00072ರ ಪರೀಕ್ಷೆಯಲ್ಲಿ ಕೆಎಫ್ಡಿ ವೈರಾಣು ಇರುವುದು ದೃಢಪಟ್ಟಿ ರುತ್ತದೆ. ಆಗಲೂ ಸಹ, ಸೋಂಕು ದೃಢಪಟ್ಟಿರುವ ವಿಚಾರವನ್ನು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ತಿಳಿಸಿರುವುದಿಲ್ಲ.
ಮತ್ತೊಮ್ಮೆ ಅದೇ ದಿನ ಮಧ್ಯಾಹ್ನ 1.53ಕ್ಕೆ, ಮತ್ತೆ ಸಂಜೆ 4.42ಕ್ಕೆ ಮತ್ತೊಮ್ಮೆ ಮರು ಪರೀಕ್ಷೆ ನಡೆಸಿದಾಗಲೂ ಸೋಂಕು ಇರುವುದು ಖಚಿತವಾಗಿದೆ ಎಂದು ತಿಳಿಸಿದರು. ಕೂಡಲೇ ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಜೊತೆಗೆ ಆಕೆಯ ಸಹೋದರಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ್ ಗೌಡ, ಶಶಿ ಸಂಪಳ್ಳಿ, ಸುರೇಶ್ ಗೌಡ ಇದ್ದರು.