ಕನ್ನಡಪ್ರಭ ವಾರ್ತೆ ಹುಬ್ಬಳ್ಳಿರಣಜಿ ಟ್ರೋಫಿಯ ಚಂಡೀಗಢ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಮೇಲುಗೈ ಸಾಧಿಸಿದೆ. ರಾಜ್ಯದ ಬೌಲರ್ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಚಂಡೀಗಢ ಮೊದಲ ದಿನದಂತ್ಯಕ್ಕೆ 6 ವಿಕೆಟ್ಗೆ 219 ರನ್ ಗಳಿಸಿತು.ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಿದ್ದರೆ ಗೆಲ್ಲಲೇಬೇಕಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ, ಚಂಡೀಗಢವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ತಂಡ 4 ರನ್ ಗಳಿಸುವಷ್ಟರಲ್ಲೇ ಶಿವಂ ಭಾಂಬ್ರಿ ವಿಕೆಟ್ ಕಳೆದುಕೊಂಡರೆ, ಅರ್ಸಲನ್ ಖಾನ್(08) ಔಟಾದಾಗ ತಂಡದ ಮೊತ್ತ ಕೇವಲ 8 ರನ್. ನಾಯಕ ಮನನ್ ವೋಹ್ರಾ ಕೂಡಾ 21 ರನ್ಗೆ ವಿಕೆಟ್ ಒಪ್ಪಿಸಿದರು. 37ಕ್ಕೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಕರಣ್ ಕೈಲಾ ಹಾಗೂ ಕುನಾಲ್ ಮಹಾಜನ್ ಆಸರೆಯಾದರು. 4ನೇ ವಿಕೆಟ್ಗೆ ಈ ಜೋಡಿ 71 ರನ್ ಸೇರಿಸಿತು. ಕುನಾಲ್ 34ಕ್ಕೆ ವಿಕೆಟ್ ಒಪ್ಪಿಸಿದರೆ, ಕರಣ್ 79 ರನ್ ಸಿಡಿಸಿ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕೌಶಿಕ್ 24 ರನ್ ಕೊಡುಗೆ ನೀಡಿದರು.