ಅನಂತಪುರ: ಈ ಬಾರಿ ದುಲೀಪ್ ಟ್ರೋಫಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ಭಾರತ ‘ಎ’ ತಂಡ ಭಾರತ ‘ಸಿ’ ವಿರುದ್ಧ ದೊಡ್ಡ ಮುನ್ನಡೆ ಸಾಧಿಸಿದೆ. ಈಗಾಗಲೇ ಇನ್ನಿಂಗ್ಸ್ ಲೀಡ್ ಪಡೆದಿದ್ದ ತಂಡ ಸದ್ಯ 333 ರನ್ಗಳ ದೊಡ್ಡ ಮುನ್ನಡೆ ಪಡೆದಿದ್ದು, ಪಂದ್ಯದ ಕೊನೆ ದಿನವಾದ ಭಾನುವಾರ ಉತ್ತಮ ಪ್ರದರ್ಶನ ನೀಡಿ ಗೆಲ್ಲುವ ಕಾತರದಲ್ಲಿದೆ.
ಭಾರತ 2 ತಂಡದ 297 ರನ್ಗೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 7 ವಿಕೆಟ್ಗೆ 216 ರನ್ ಗಳಿಸಿದ್ದ ಸಿ ತಂಡ ಶನಿವಾರ ಕೇವಲ 18 ರನ್ ಸೇರಿಸಿತು. ಪುಲ್ಕಿತ್ ನಾರಂಗ್ 41 ರನ್ ಗಳಿಸಿ ಔಟಾದರು. ವಿಜಯ್ಕುಮಾರ್ ವೈಶಾಖ್ 18 ರನ್ ಕೊಡುಗೆ ನೀಡಿದರು. ತಂಡದ 234 ರನ್ಗೆ ಗಂಟುಮೂಟೆ ಕಟ್ಟಿತು. ಆವೇಶ್ ಖಾನ್ ಹಾಗೂ ಆಖಿಬ್ ಖಾನ್ ತಲಾ 3 ವಿಕೆಟ್ ಕಿತ್ತರು.63 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ‘ಎ’ ತಂಡ 3ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 270 ರನ್ ಗಳಿಸಿದೆ. ಮಯಾಂಕ್(34) ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದರು.
94ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರಿಯಾನ್ ಪರಾಗ್ ಹಾಗೂ ಶಾಶ್ವತ್ ರಾವತ್ ಆಸರೆಯಾದರು. ಈ ಜೋಡಿ 4ನೇ ವಿಕೆಟ್ಗೆ 105 ರನ್ ಜೊತೆಯಾಟವಾಡಿತು. 73 ರನ್ ಗಳಿಸಿದ್ದ ರಿಯಾನ್ ಪರಾಗ್ಗೆ ಗೌರವ್ ಯಾದವ್ ಪೆವಿಲಿಯನ್ ಹಾದಿ ತೋರಿದರೆ, 53 ರನ್ ಗಳಿಸಿದ್ದ ಶಾಶ್ವತ್ ರಾವತ್ರನ್ನು ಮಾನವ್ ಸುತಾರ್ ಬೌಲ್ಡ್ ಮಾಡಿದರು. ಕುಮಾರ್ ಕುಶಾಗ್ರ(40) 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅನ್ಶುಲ್, ಗೌರವ್, ಮಾನವ್ ತಲಾ 2 ವಿಕೆಟ್ ಪಡೆದರು.