ದುಬೈ: ಏಷ್ಯಾಕಪ್ ಫೈನಲ್ನಲ್ಲಿ ನಡೆದ ಟ್ರೋಫಿ ಹಸ್ತಾಂತರ ಹೈಡ್ರಾಮದಿಂದ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ, ಪಾಕಿಸ್ತಾನದ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ತಮ್ಮ ಉದ್ಧಟನ ಮುಂದುವರಿಸಿದ್ದಾರೆ. ‘ಭಾರತಕ್ಕೆ ಟ್ರೋಫಿ ಬೇಕಿದ್ದರೆ ನನ್ನಿಂದಲೇ ಪಡೆದುಕೊಳ್ಳಲಿ’ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಎಸಿಸಿ ಅಧ್ಯಕ್ಷನಾಗಿ ನಾನು ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಂದು ಸಿದ್ಧವಾಗಿದ್ದೆ. ಈಗಲೂ ತಯಾರಾಗಿದ್ದೇನೆ. ಅವರಿಗೆ ನಿಜವಾಗಿಯೂ ಟ್ರೋಫಿ ಬೇಕಿದ್ದರೆ ಎಸಿಸಿ ಕಚೇರಿಗೆ ಬಂದು ನನ್ನಿಂದ ಪಡೆದುಕೊಳ್ಳಲಿ. ಒಂದಂತೂ ಸ್ಪಷ್ಟ. ನಾನೇನೂ ತಪ್ಪು ಮಾಡಿಲ್ಲ. ನಾನು ಬಿಸಿಸಿಐ ಜೊತೆ ಕ್ಷಮೆಯಾಚಿಸಿಲ್ಲ. ಎಂದಿಗೂ ಹಾಗೆ ಮಾಡುವುದೂ ಇಲ್ಲ’ ಎಂದಿದ್ದಾರೆ.
ಏಷ್ಯಾಕಪ್ ಫೈನಲ್ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು.\\
ಎಸಿಸಿ ಮುಖ್ಯಸ್ಥ ನಖ್ವಿ ವಿರುದ್ಧ
ಬಿಸಿಸಿಐ ಅವಿಶ್ವಾಸ ನಿರ್ಣಯ?
ನವದೆಹಲಿ: ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಟ್ರೋಫಿ ವಿವಾದದಲ್ಲಿ ಉದ್ಧಟತನದ ನಡೆ ಹಾಗೂ ಹೇಳಿಕೆ ಮೂಲಕ ಟೀಕೆಗೆ ಗುರಿಯಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವರದಿಯೊಂದರ ಪ್ರಕಾರ, ಬಿಸಿಸಿಐ ನಖ್ವಿಯನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯೋಚಿಸುತ್ತಿದ್ದು, ಅದಕ್ಕಾಗಿ ಮಂಡಳಿಯಲ್ಲಿರುವ ಇತರ ಸದಸ್ಯರ ಬೆಂಬಲ ಪಡೆಯಲು ಮುಂದಾಗಿದೆ ಎನ್ನಲಾಗಿದೆ. ಶ್ರೀಲಂಕಾ ಮಂಡಳಿ ಭಾರತದ ಪರ ನಿಂತಿದ್ದರೆ, ಪಾಕಿಸ್ತಾನಕ್ಕೆ ಬಾಂಗ್ಲಾ ತನ್ನ ಬೆಂಬಲ ನೀಡಿದೆ ಎನ್ನಲಾಗಿದೆ. ಹೀಗಾಗಿ ಆಪ್ಘಾನಿಸ್ತಾನದ ಮತ ಎರಡೂ ರಾಷ್ಟ್ರಗಳಿಗೆ ನಿರ್ಣಾಯಕವಾಗಿದೆ. ನಖ್ವಿ ಏಪ್ರಿಲ್ನಿಂದ ಎಸಿಸಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.