ರಣಜಿ ಟ್ರೋಫಿ: ಕರ್ನಾಟಕಕ್ಕೆ ಭರ್ಜರಿ ಆರಂಭ!

KannadaprabhaNewsNetwork |  
Published : Jan 09, 2024, 02:00 AM ISTUpdated : Jan 09, 2024, 11:10 AM IST
Ranaji_Karnataka

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಈ ಬಾರಿ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಪಂಜಾಬ್‌ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಗೆಲುವಿಗೆ 52 ರನ್‌ ಗುರಿ ಪಡೆದ ಕರ್ನಾಟಕ 17 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇನ್ನಿಂಗ್ಸ್‌ ಜಯದೊಂದಿಗೆ ಬೋನಸ್‌ ಅಂಕ ಪಡೆದು ಈ ಬಾರಿ ರಣಜಿ ಟ್ರೋಫಿ ಟೂರ್ನಿಯ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸುವ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ತುಸು ಹಿನ್ನಡೆಯಾದರೂ, ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಗೆಲುವಿಗೆ 52 ರನ್‌ ಗುರಿ ಪಡೆದ ಕರ್ನಾಟಕ 17 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ತಾರಾ ಬ್ಯಾಟರ್‌ಗಳು ಹಾಗೂ ವೇಗಿಗಳು ಕರ್ನಾಟಕಕ್ಕೆ ನೆರವಾದರೆ, 2ನೇ ಇನ್ನಿಂಗ್ಸ್‌ನಲ್ಲಿ ಯುವ ಸ್ಪಿನ್ನರ್‌ಗಳು ರಾಜ್ಯ ತಂಡಕ್ಕೆ ಆಸರೆಯಾದರು. ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಸದ್ಯ 2ನೇ ಸ್ಥಾನದಲ್ಲಿದೆ.

3ನೇ ದಿನದಂದ್ಯಕ್ಕೆ 3 ವಿಕೆಟ್‌ಗೆ 238 ರನ್‌ ಗಳಿಸಿದ್ದ ಪಂಜಾಬ್‌, ಕೊನೆ ದಿನವೂ ಹೋರಾಟ ನಡೆಸಿತು. ಇದರಿಂದ ಇನ್ನಿಂಗ್ಸ್‌ ಸೋಲು ತಪ್ಪಿಸಲು ಸಾಧ್ಯವಾಯಿತಾದರೂ, ಕರ್ನಾಟಕಕ್ಕೆ ದೊಡ್ಡ ಗುರಿ ನೀಡಲು ಸಾಧ್ಯವಾಗಲಿಲ್ಲ. 

ಕೊನೆ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ನಾಯಕ ಮನ್‌ದೀಪ್‌ ಸಿಂಗ್‌(27) ಹಾಗೂ ನೇಹಲ್‌ ವಧೇರಾ(26) ಬೇಗನೇ ಔಟಾದರು. ಆದರೆ ಜಿತಾಂಶ್‌ ಖೇರಾ(43), ಬೌಲರ್‌ಗಳಾದ ಮಯಾಂಕ್‌ ಮಾರ್ಕಂಡೆ ಹಾಗೂ ಅರ್ಶ್‌ದೀಪ್‌ ಸಿಂಗ್‌ ತಲಾ 36 ರನ್‌ ಸಿಡಿಸಿ ತಂಡಕ್ಕೆ ಅಲ್ಪ ಮಟ್ಟಿನ ಆಸರೆಯಾದರು. ತಂಡ 413ಕ್ಕೆ ಸರ್ವಪತನ ಕಂಡಿತು.ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದಿದ್ದ ವಾಸುಕಿ ಕೌಶಿಕ್‌ಗೆ ಈ ಬಾರಿ ವಿಕೆಟ್‌ ಬೀಳಲಿಲ್ಲ. ಸ್ಪಿನ್ನರ್‌ಗಳಾದ ಶುಭಾಂಗ್‌ ಹೆಗ್ಡೆ ಹಾಗೂ ಪಾದಾರ್ಪಣಾ ಪಂದ್ಯವಾಡಿದ ರೋಹಿತ್‌ ಕುಮಾರ್‌ ತಲಾ 3 ವಿಕೆಟ್‌ ಪಡೆದರು.

ರಾಜ್ಯಕ್ಕೆ ಆರಂಭಿಕ ಆಘಾತ: ಸುಲಭ ಗುರಿ ಪಡೆದ ಕರ್ನಾಟಕಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 8 ಎಸೆತಗಳಲ್ಲಿ ಸೂನ್ಯ ಸುತ್ತಿದ್ದ ನಾಯಕ ಮಯಾಂಕ್‌ ಅಗರ್‌ವಾಲ್‌, ಈ ಬಾರಿ ತಾವೆದುರಿಸಿದ ಮೊದಲ ಎಸೆತದಲ್ಲೇ ಸೊನ್ನೆಗೆ ಔಟಾದರು. 

ಉಪನಾಯಕ ನಿಕಿನ್‌ ಜೋಸ್‌ ಕೂಡಾ ರನ್‌ ಖಾತೆ ತೆರೆಯಲಿಲ್ಲ. ಬಳಿಕ ಶ್ರೀನಿವಾಸ್‌ ಶರತ್‌(ಔಟಾಗದೆ 21), ಮನೀಶ್‌ ಪಾಂಡೆ(ಔಟಾಗದೆ 10) ತಂಡವನ್ನು ಗೆಲುವಿನ ದಡ ಸೇರಿಸಿದರು.ಇದಕ್ಕೂ ಮುನ್ನ ಪಂಜಾಬನ್ನು ಪಂದ್ಯದ ಮೊದಲ ದಿನವೇ 152ಕ್ಕೆ ಆಲೌಟ್‌ ಮಾಡಿದ್ದ ಕರ್ನಾಟಕ, ಬಳಿಕ 8 ವಿಕೆಟ್‌ಗೆ 514 ರನ್ ಕಲೆಹಾಕಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು.

ಸ್ಕೋರ್‌: ಪಂಜಾಬ್‌ 152 ಹಾಗೂ 413/10 (ಜಿತಾಂಶ್‌ 43, ಶುಭಾಂಗ್‌ 3-89, ರೋಹಿತ್‌ 3-101), ಕರ್ನಾಟಕ 514/8 ಡಿ. ಮತ್ತು 52/3(ಸಮರ್ಥ್‌ 21, ಶರತ್‌ 21*, ಪ್ರೇರಿತ್‌ 2-10)

08ನೇ ವಿಕೆಟ್‌ ಕೀಪರ್‌ ಶ್ರೀನಿವಾಸ್‌ ಶರತ್‌ ವಿಕೆಟ್‌ ಕೀಪಿಂಗ್‌ ಮೂಲಕ 50 ಮಂದಿಯನ್ನು ಔಟ್‌ ಮಾಡಿದ ಕರ್ನಾಟಕದ 8ನೇ ಆಟಗಾರ. ಶರತ್‌ 48 ಕ್ಯಾಚ್‌, 2 ಸ್ಟಂಪಿಂಗ್‌ ಮಾಡಿದ್ದಾರೆ.

ಗುಜರಾತ್‌ ಸವಾಲು: ರಾಜ್ಯ ತಂಡ ಟೂರ್ನಿಯ 2ನೇ ಪಂದ್ಯದಲ್ಲಿ ಜ.12ರಿಂದ ಗುಜರಾತ್‌ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಗುಜರಾತ್‌ ಆರಂಭಿಕ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆದ್ದಿದೆ.

ಡೆಲ್ಲಿಗೆ ಪುದುಚೇರಿಯ ವಿರುದ್ಧ ಅಚ್ಚರಿ ಸೋಲು:  7 ಬಾರಿ ಚಾಂಪಿಯನ್‌ ಡೆಲ್ಲಿ ತಂಡ ಈ ಬಾರಿ ರಣಜಿ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಪುದುಚೇರಿ ವಿರುದ್ಧ 9 ವಿಕೆಟ್ ಅಚ್ಚರಿಯ ಸೋಲನುಭವಿಸಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ 148ಕ್ಕೆ ಆಲೌಟಾಗಿದ್ದ ಡೆಲ್ಲಿ, ಪುದುಚೇರಿಗೆ 244 ರನ್‌ ಬಿಟ್ಟುಕೊಟ್ಟಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲೂ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ ಡೆಲ್ಲಿ 145ಕ್ಕೆ ಆಲೌಟಾಯಿತು. 50 ರನ್‌ ಗುರಿ ಪಡೆದ ಪುದುಚೇರಿ 1 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು.

ನಾಯಕ ಧುಳ್‌ ತಲೆದಂಡಮೊದಲ ಪಂದ್ಯದ ಆಘಾತಕಾರಿ ಸೋಲಿನ ಬೆನ್ನಲ್ಲೇ ಡೆಲ್ಲಿ ತಂಡದ ನಾಯಕತ್ವದಿಂದ 21ರ ಯಶ್‌ ಧುಳ್‌ರನ್ನು ಕೆಳಗಿಳಿಸಲಾಗಿದೆ. ಅವರ ಬದಲು ಹಿಮ್ಮತ್‌ ಸಿಂಗ್‌ರನ್ನು ನಾಯಕನಾಗಿ ನೇಮಿಸಲಾಗಿದೆ. ಅಂಡರ್‌-19 ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕನಾಗಿದ್ದ ಧುಳ್‌, 2022ರ ಡಿಸೆಂಬರ್‌ನಲ್ಲಿ ಡೆಲ್ಲಿ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!
ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?