ರಾಷ್ಟ್ರೀಯ ವೀಲ್‌ಚೇರ್ ಟೆನಿಸ್‌ನಲ್ಲಿ ಕರ್ನಾಟಕ ಪಾರಮ್ಯ: 9ರಲ್ಲಿ 6 ಪ್ರಶಸ್ತಿ ಗೆದ್ದ ರಾಜ್ಯದ ಅಥ್ಲೀಟ್ಸ್‌

KannadaprabhaNewsNetwork |  
Published : Aug 15, 2025, 01:00 AM IST
ವೀಲ್‌ಚೇರ್‌ | Kannada Prabha

ಸಾರಾಂಶ

ಅದ್ಭುತ ಪ್ರತಿಭೆ, ದೃಢ ಸಂಕಲ್ಪ ಮತ್ತು ಸಾಂಘಿಕ ಹೋರಾಟವನ್ನು ಪ್ರದರ್ಶಿಸಿದ ಕರ್ನಾಟಕ ಒಂಬತ್ತು ಚಾಂಪಿಯನ್‌ಶಿಪ್ ಪ್ರಶಸ್ತಿಗಳ ಪೈಕಿ ಆರು ಪ್ರಶಸ್ತಿಗಳನ್ನು ಗೆದ್ದಿದೆ.

ಬೆಂಗಳೂರು: ಚೆನ್ನೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಮಟ್ಟದ ವೀಲ್‌ಚೇರ್ ಟೆನಿಸ್ ಟೂರ್ನಿಯಲ್ಲಿ ಕರ್ನಾಟಕ ತಂಡ ಪಾರಮ್ಯ ಮೆರೆದಿದೆ. ಅದ್ಭುತ ಪ್ರತಿಭೆ, ದೃಢ ಸಂಕಲ್ಪ ಮತ್ತು ಸಾಂಘಿಕ ಹೋರಾಟವನ್ನು ಪ್ರದರ್ಶಿಸಿದ ಕರ್ನಾಟಕ ಒಂಬತ್ತು ಚಾಂಪಿಯನ್‌ಶಿಪ್ ಪ್ರಶಸ್ತಿಗಳ ಪೈಕಿ ಆರು ಪ್ರಶಸ್ತಿಗಳನ್ನು ಗೆದ್ದಿದೆ. ಈ ಮೂಲಕ ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ವಲಯದಲ್ಲಿ ತನ್ನ ಅಧಿಪತ್ಯ ಸಾಧಿಸಿದೆ.

ಕರ್ನಾಟಕದ ಕ್ರೀಡಾಪಟುಗಳು ಅಂಕಣದಲ್ಲಿ ತಮ್ಮ ಆಟದ ಮೂಲಕ ಹೃದಯಗಳನ್ನು ಗೆದ್ದಿದ್ದಲ್ಲದೆ, ತಮ್ಮ ಸಮನ್ವಯ ಮತ್ತು ತಂಡದ ನಡುವಿನ ಸೌಹಾರ್ದತೆಯ ಕಾರಣಕ್ಕೆ ಎಲ್ಲರ ಗಮನ ಸೆಳೆದರು. ತಮ್ಮ ಪ್ರಾಯೋಜಕರಾದ ಬಲ್ಡೋಟಾ ಗ್ರೂಪ್ ಲಾಂಛನವನ್ನು ಹೊಂದಿದ್ದ ಒಂದೇ ರೀತಿಯ ಟೀ-ಶರ್ಟ್‌ಗಳನ್ನು ಧರಿಸಿದ್ದ ಕರ್ನಾಟಕ ತಂಡ ಏಕತೆ ಮತ್ತು ವೃತ್ತಿಪರತೆಯ ಗಮನಾರ್ಹ ಚಿತ್ರಣವನ್ನು ಕಟ್ಟಿಕೊಟ್ಟಿತು. ಜೊತೆಗೆ ಟೂರ್ನಿಯದ್ದಕ್ಕೂ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.ಕ್ರೀಡಾಪಟುಗಳ ಗಮನಾರ್ಹ ಪ್ರದರ್ಶನ

- ಪುರುಷರ ಸಿಂಗಲ್ಸ್‌, ಡಬಲ್ಸ್‌ ಎರಡೂ ವಿಭಾಗಗಳಲ್ಲಿ ಶೇಖರ್‌ ಚಾಂಪಿಯನ್‌ ಆಗಿ ಗಮನ ಸೆಳೆದರು. ಈ ಮೂಲಕ ತಮ್ಮ ಅಸಾಧಾರಣ ಫಾರ್ಮ್ ಮತ್ತು ಹೋರಾಟದ ಮನೋಭಾವವನ್ನು ಪ್ರದರ್ಶಿಸಿದರು.

- ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ಪ್ರತಿಮಾ ರಾವ್ ಫೈನಲ್‌ ತಲುಪಿದ್ದರು. ಆದರೆ, ಎರಡರಲ್ಲೂ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟರು. ಅವರ ಸ್ಥೈರ್ಯ ಮತ್ತು ಕ್ರೀಡಾಸ್ಫೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಟೂರ್ನಿಯ ನಂತರ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಲು ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ವೀಲ್‌ಚೇರ್ ಟೆನಿಸ್ ಸಂಸ್ಥೆಯ (ಕೆಡಬ್ಲ್ಯೂಟಿಎ) ಅಧ್ಯಕ್ಷರಾದ ಚಂದ್ರಕಾಂತ್ ಅವರು ಬಲ್ಡೋಟಾ ಗ್ರೂಪ್‌ನ ನಿರಂತರ ಬೆಂಬಲಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಗೆಲುವು ನಮ್ಮ ಆಟಗಾರರಿಗೆ ಕೇವಲ ಹೆಮ್ಮೆಯ ಕ್ಷಣವಲ್ಲ, ಬದಲಿಗೆ ಉತ್ತಮ ಕ್ರೀಡಾಪಟುಗಳಿಗೆ ಸಮರ್ಪಕ ಬೆಂಬಲ ಸಿಕ್ಕರೆ ಅವರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮನ್ನು ನಂಬಿ ನಮ್ಮ ಪ್ರಯಾಣವನ್ನು ಬೆಂಬಲಿಸಿದ್ದಕ್ಕಾಗಿ ನಾವು ಬಲ್ಡೋಟಾ ಗ್ರೂಪ್‌ಗೆ ಋಣಿಯಾಗಿದ್ದೇವೆ. ಕೆಡಬ್ಲ್ಯೂಟಿಎ ಮತ್ತು ಬಲ್ಡೋಟಾ ಗ್ರೂಪ್ ನಡುವಿನ ಈ ಪಾಲುದಾರಿಕೆ ಕೇವಲ ಒಪ್ಪಂದವಲ್ಲ. ಇದೊಂದು ಆತ್ಮೀಯ ಸಂಬಂಧವಾಗಿದ್ದು, ಮುಂದೆ ಮತ್ತಷ್ಟು ಬಲಗೊಳ್ಳಲಿದೆ ಎಂದು ನಾವು ನಂಬುತ್ತೇವೆ ಎಂದು ಚಂದ್ರಕಾಂತ್‌ ಹೇಳಿದ್ದಾರೆ.

ಇದು ನಮ್ಮ ಜವಾಬ್ದಾರಿ ಎಂದ ಬಲ್ಡೋಟಾ ಗ್ರೂಪ್‌ 

ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಅಸಾಧಾರಣ ಪ್ರದರ್ಶನ ನಮಗೆ ಅಪಾರ ಹೆಮ್ಮೆ ತಂದಿದೆ. ಅವರ ಉತ್ಸಾಹ, ಶಿಸ್ತು ಮತ್ತು ಕ್ರೀಡಾ ಮನೋಭಾವ ನಿಜಕ್ಕೂ ಸ್ಪೂರ್ತಿದಾಯಕ. ಜೀವನವನ್ನು ಬದಲಾಯಿಸುವ ಮತ್ತು ಅಡೆತಡೆಗಳನ್ನು ಮುರಿಯುವ ಶಕ್ತಿಯನ್ನು ಕ್ರೀಡೆ ಹೊಂದಿದೆ ಎಂದು ಬಲ್ಡೋಟಾ ಗ್ರೂಪ್‌ ನಂಬುತ್ತದೆ. ಈ ಚಾಂಪಿಯನ್‌ಗಳಿಗೆ ಸ್ಪಾನ್ಸರ್‌ ಮಾಡುವ ಅವಕಾಶ ನಮಗೆ ಸಿಕ್ಕ ಗೌರವ ಮತ್ತು ನಮ್ಮ ಜವಾಬ್ದಾರಿ ಎಂದು ಬಲ್ಡೋಟಾ ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ.

ಈ ಭರ್ಜರಿ ಗೆಲುವಿನೊಂದಿಗೆ ಕರ್ನಾಟಕವು ವೀಲ್‌ಚೇರ್ ಟೆನಿಸ್‌ನಲ್ಲಿ ಒಂದು ಹೊಸ ಮಾನದಂಡವನ್ನು ಸ್ಥಾಪಿಸಿದೆ. ಜೊತೆಗೆ ಸಮಗ್ರ ಮತ್ತು ಸ್ಪರ್ಧಾತ್ಮಕ ಕ್ರೀಡೆಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಕೆಡಬ್ಲ್ಯೂಟಿಎ ಸಂಸ್ಥೆಯು ವಿಶೇಷ ಚೇತನ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚಲು ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ತನ್ನ ಕೆಲಸವನ್ನು ಮುಂದುವರಿಸಲಿದೆ.

PREV
Read more Articles on

Recommended Stories

ಇಂದಿನಿಂದ ರಣಜಿ ಟ್ರೋಫಿ - 91ನೇ ಆವೃತ್ತಿಯ ದೇಸಿ ಪ್ರ.ದರ್ಜೆ ಕ್ರಿಕೆಟ್‌ ಟೂರ್ನಿ
ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಜಯ