ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ₹1000 ಕೋಟಿ ವೆಚ್ಚದಲ್ಲಿ ಕ್ರಿಕೆಟ್ ಕ್ರೀಡಾಂಗಣ ಗುರುವಾರ ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರು ಭಾಗಿಯಾಗಲಿದ್ದಾರೆ.
ಕನ್ನಡಪ್ರಭ ವಾರ್ತೆ ಮುದ್ದೇನಹಳ್ಳಿ(ಚಿಕ್ಕಬಳ್ಳಾಪುರ)ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣ ಗುರುವಾರ ಲೋಕಾರ್ಪಣೆಗೊಳ್ಳಲಿದೆ.ಸುಮಾರು 1000 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಐದು ದಳಗಳ ಹೂವಿನಾಕೃತಿಯಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಸುತ್ತಲೂ ಇರುವ ನಾಲ್ಕು ಗ್ಯಾಲರಿಗಳಲ್ಲಿ 3,500 ಆಸನಗಳಿವೆ. ಜೊತೆಗೆ ಒಂದು ವೇದಿಕೆಯನ್ನೂ ಹೊಂದಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್, ಯುವರಾಜ್ ಸಿಂಗ್, ಮೊಹಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.
-ದಿಗ್ಗಜ ಕ್ರಿಕೆಟಿಗರಿಂದ ಪ್ರದರ್ಶನ ಪಂದ್ಯ
ಉದ್ಘಾಟನಾ ಸಮಾರಂಭದ ಬಳಿಕ ಕ್ರೀಡಾಂಗಣದಲ್ಲಿ ದಿಗ್ಗಜ ಕ್ರಿಕೆಟಿಗರಿಂದ ಪ್ರದರ್ಶನ ಪಂದ್ಯವಾಡಲಿದ್ದಾರೆ. ‘ಒಂದು ಜಗತ್ತು ಒಂದು ಕುಟುಂಬ’ ಘೋಷ ವಾಕ್ಯದೊಂದಿಗೆ ಪಂದ್ಯ ನಡೆಯಲಿದ್ದು, ಯುವರಾಜ್, ಸಚಿನ್, ಗವಾಸ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಪಂದ್ಯ ವೀಕ್ಷಿಸಲಿದ್ದಾರೆ.ಕ್ರಿಕೆಟ್ ಒಂದು ಕ್ರೀಡೆಯಷ್ಟೇ ಅಲ್ಲ, ಜೀವನದ ಎಲ್ಲ ರಂಗಗಳ ಜನರನ್ನು ಒಂದುಗೂಡಿಸಬಲ್ಲ ಒಂದು ಶಕ್ತಿಶಾಲಿ ವೇದಿಕೆ. ಸಮಾಜದ ಸೌಲಭ್ಯ ವಂಚಿತ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಸದ್ಗುರು ಶ್ರೀ ಮಧುಸೂದನ್ ಸಾಯಿಯವರು ‘ಒಂದು ಜಗತ್ತು-ಒಂದು ಕುಟುಂಬ-ವಸುಧೈವ ಕುಟುಂಬಕಮ್’ ಹೆಸರಿನಲ್ಲಿ ಕಾರ್ಯಗಳ ಬಗ್ಗೆ ಜಗತ್ತಿನ ಗಮನ ಸೆಳೆಯುವುದು ಈ ಸೌಹಾರ್ದ ಪಂದ್ಯದ ಉದ್ದೇಶ.
- ಸುನಿಲ್ ಗವಾಸ್ಕರ, ಮಾಜಿ ಕ್ರಿಕೆಟಿಗ-
ಪ್ರದರ್ಶನ ಪಂದ್ಯ ಆಡಲು ಬಹಳ ಖುಷಿ ಇದೆ. ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ. ತುಂಬಾ ಸಮಯದ ಬಳಿಕ ಟಿ20 ಪಂದ್ಯ ಆಡುತ್ತಿರುವುದು ಖುಷಿಯ ವಿಚಾರ.- ಯುವರಾಜ್ ಸಿಂಗ್, ಮಾಜಿ ಕ್ರಿಕೆಟಿಗ.