ರಣಜಿ ಟ್ರೋಫಿ: 48ನೇ ಬಾರಿ ಫೈನಲ್‌ಗೆ ಮುಂಬೈ ಲಗ್ಗೆ

KannadaprabhaNewsNetwork |  
Published : Mar 05, 2024, 01:36 AM ISTUpdated : Mar 05, 2024, 09:22 AM IST
ಮುಂಬೈ ಆಟಗಾರರ ಸಂಭ್ರಮಾಚರಣೆ | Kannada Prabha

ಸಾರಾಂಶ

ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಇನ್ನಿಂಗ್ಸ್‌ ಹಾಗೂ 70 ರನ್‌ ಗೆಲುವು ಸಾಧಿಸಿದ ಮುಂಬೈ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ತಮಿಳ್ನಾಡು ಕೇವಲ 162 ರನ್‌ಗೆ ಆಲೌಟ್‌ ಆಯಿತು,

ಮುಂಬೈ: ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಟೂರ್ನಿಯ ಇತಿಹಾಸದಲ್ಲೇ 48ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 

ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿರುವ 41 ಬಾರಿ ಚಾಂಪಿಯನ್‌ ಮುಂಬೈ ತಂಡ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಇನ್ನಿಂಗ್ಸ್‌ ಹಾಗೂ 70 ರನ್‌ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ ಮುನ್ನಡೆಯ ನಿರೀಕ್ಷೆಯಲ್ಲಿದ್ದ ತಮಿಳುನಾಡು ಆ ಬಳಿಕ ಮುಂಬೈನ ಚಾಂಪಿಯನ್‌ ಆಟದ ಮುಂದೆ ಮಂಡಿಯೂರಿತು.

 ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲೂ ಫಸ್ಟ್‌ ಕ್ಲಾಸ್‌ ಪ್ರದರ್ಶನ ನೀಡಿದ ಮುಂಬೈ ಅರ್ಹವಾಗಿಯೇ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.

ತಮಿಳುನಾಡಿನ 146 ರನ್‌ಗೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 353 ರನ್ ಕಲೆಹಾಕಿದ್ದ ಮುಂಬೈ ಸೋಮವಾರ ಇನ್ನೂ 25 ರನ್‌ ಸೇರಿಸಿ, 378ಕ್ಕೆ ಸರ್ವಪತನ ಕಂಡಿತು. ತುಷಾರ್‌ ದೇಶಪಾಂಡೆ(26) ಔಟಾಗುವುದರೊಂದಿಗೆ ಮುಂಬೈ ಇನ್ನಿಂಗ್ಸ್‌ಗೆ ತೆರೆಬಿತ್ತು. ತನುಶ್‌ ಕೋಟ್ಯಾನ್‌ 89 ರನ್‌ ಸಿಡಿಸಿ ಔಟಾಗದೆ ಉಳಿದರು.

ಬ್ಯಾಟಿಂಗ್‌ ವೈಫಲ್ಯ: ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಆಟವಾಡಿದ್ದ ತಮಿಳುನಾಡಿಗೆ 2ನೇ ಇನ್ನಿಂಗ್ಸ್‌ನಲ್ಲೂ ಸುಧಾರಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 10 ರನ್‌ ಗಳಿಸುವಷ್ಟರಲ್ಲೇ ಸಾಯಿ ಸುದರ್ಶನ್‌(05), ಜಗದೀಶನ್‌(00), ವಾಷಿಂಗ್ಟನ್‌ ಸುಂದರ್‌(04) ವಿಕೆಟ್‌ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. 

ಈ ನಡುವೆ ಬಾಬಾ ಇಂದ್ರಜಿತ್‌ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇಂದ್ರಜಿತ್‌ 70 ರನ್‌ಗೆ ನಿರ್ಗಮಿಸಿದರೆ, ರಂಜನ್‌ ಪಾಲ್‌ 25, ವಿಜಯ್‌ ಶಂಕರ್‌ 24, ನಾಯಕ ಸಾಯಿ ಕಿಶೋರ್‌ 21 ರನ್‌ ಗಳಿಸಲಷ್ಟೇ ಶಕ್ತರಾದರು. 

ಮತ್ತೆ ತನ್ನ ಸ್ಪಿನ್‌ ಕೈಚಳಕ ಪ್ರದರ್ಶಿಸಿದ ಶಮ್ಸ್‌ ಮುಲಾನಿ 4 ವಿಕೆಟ್‌ ಕಿತ್ತರೆ, ಶಾರ್ದೂಲ್‌ ಠಾಕೂರ್‌, ಮೋಹಿತ್‌ ಅವಸ್ತಿ, ತನುಶ್ ತಲಾ 2 ವಿಕೆಟ್‌ ಕಬಳಿಸಿದರು.

ಸ್ಕೋರ್‌: ತಮಿಳುನಾಡು 146/10 ಮತ್ತು 162/10(ಇಂದ್ರಜಿತ್‌ 70, ಮುಲಾನಿ 4-53, ಶಾರ್ದೂಲ್‌ 2-16), ಮುಂಬೈ 378/10.

ಗೆಲುವಿಗಾಗಿ ವಿದರ್ಭ ದಿಟ್ಟ ಹೋರಾಟ
ನಾಗ್ಪುರ: ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಹೊರತಾಗಿಯೂ ಮಧ್ಯಪ್ರದೇಶ ವಿರುದ್ಧದ ಸೆಮಿಫೈನಲ್‌ನ 2ನೇ ಇನ್ನಿಂಗ್ಸಲ್ಲಿ ವಿದರ್ಭ ದೊಡ್ಡ ಮೊತ್ತ ಕಲೆಹಾಕಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ ಹಿನ್ನಡೆ ಅನುಭವಿಸಿದ್ದ ವಿದರ್ಭ 2ನೇ ಇನ್ನಿಂಗ್ಸಲ್ಲಿ 3ನೇ ದಿನದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 346 ರನ್‌ ಗಳಿಸಿದ್ದು, ಒಟ್ಟಾರೆ 261 ರನ್‌ ಮುನ್ನಡೆಯಲ್ಲಿದೆ. 

ಅಥರ್ವ ತೈಡೆ(02), ಅಕ್ಷಯ್‌(01) ತಂಡದ ಮೊತ್ತ 17 ರನ್‌ ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದರು. ಆದರೆ ಧ್ರುವ್‌ ಶೋರೆ 40, ಅಮನ್‌ ಮೊಖಾಡೆ 59, ಕರುಣ್‌ ನಾಯರ್ 38 ರನ್‌ ಸಿಡಿಸಿ ತಂಡವನ್ನು ಮೇಲೆತ್ತಿದರು. 

ಆದರೂ 161ಕ್ಕೆ 5 ವಿಕೆಟ್‌ ಕಳೆದುಕೊಂಡ ಬಳಿಕ ಯಶ್‌ ರಾಥೋಡ್‌(ಔಟಾಗದೆ 97) ಹಾಗೂ ಅಕ್ಷಯ್‌ ವಾಡ್ಕರ್‌(77) 168 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದಾರೆ.

ಫೈನಲ್‌ಗೆ ವಾಂಖೇಡೆ ಆತಿಥ್ಯ: ಟೂರ್ನಿಯ ಫೈನಲ್‌ ಪಂದ್ಯ ಮಾ.10ಕ್ಕೆ ಆರಂಭಗೊಳ್ಳಲಿದ್ದು, ಮುಂಬೈನ ಪ್ರಸಿದ್ಧ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಆರ್‌ಸಿಬಿಯ ಮುಕುಟಕ್ಕೆ ಹ್ಯಾಟ್ರಿಕ್‌ ಕಿರೀಟ!
ದಾಖಲೆಯ ಚೇಸ್‌: 10ನೇ ಸಲ ಭಾರತ ಫೈನಲ್‌ಗೆ