ಬೆಂಗಳೂರಿನಿಂದ ಐಪಿಎಲ್‌ ಫೈನಲ್‌ ಸ್ಥಳಾಂತರಗೊಳ್ಳಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 10057 ಹೆಚ್ಚುವರಿ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಕೇಳಿದ್ದೇ ಕಾರಣ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಬೆಂಗಳೂರು : ಬೆಂಗಳೂರಿನಿಂದ ಐಪಿಎಲ್‌ ಫೈನಲ್‌ ಸ್ಥಳಾಂತರಗೊಳ್ಳಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 10057 ಹೆಚ್ಚುವರಿ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಕೇಳಿದ್ದೇ ಕಾರಣ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆಂಗಳೂರಲ್ಲಿ ಫೈನಲ್‌ ನಡೆಸುವುದು ಅಸಾಧ್ಯ

ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌, ‘ಕ್ರೀಡಾಂಗಣದ ಆಸನ ಸಾಮರ್ಥ್ಯ 35000 ಇರುವಾಗ, ಇಷ್ಟು ದೊಡ್ಡ ಪ್ರಮಾಣದಲ್ಲಿ ಉಚಿತ, ರಿಯಾಯಿತಿ ದರದಲ್ಲಿ ಟಿಕೆಟ್‌ ಕೇಳುವುದು ಸೂಕ್ತವಲ್ಲ. ಹೀಗಾಗಿ, ಬೆಂಗಳೂರಲ್ಲಿ ಫೈನಲ್‌ ನಡೆಸುವುದು ಅಸಾಧ್ಯ ಎನಿಸಿ ಸ್ಥಳಾಂತರಕ್ಕೆ ನಿರ್ಧರಿಸಿದೆವು’ ಎಂದಿದ್ದಾರೆ.

ಕೆಎಸ್‌ಸಿಎ ಕೇಳಿದ 10057 ಟಿಕೆಟ್‌ಗಳ ಪೈಕಿ 900 ಟಿಕೆಟ್‌ಗಳು ಎಂಎಲ್‌ಎ/ಎಂಎಲ್‌ಸಿಗಳಿಗೆ, 750 ಟಿಕೆಟ್‌ಗಳು ತಜ್ಞರ ಸಮಿತಿ ಹಾಗೂ ಸರ್ಕಾರದ ಇತರೆ ಇಲಾಖೆಗಳಿಗೆ ನೀಡಲು ಬೇಕಿದ್ದವು. ಇದಲ್ಲದೇ, ರಿಯಾಯಿತಿ ದರದಲ್ಲೂ ಸಾವಿರಾರು ಟಿಕೆಟ್‌ಗೆ ಬೇಡಿಕೆ ಬಂದಿತ್ತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತನ್ನ ಕ್ರಿಕೆಟ್‌ ಕ್ಲಬ್‌ಗಳಿಗೆ ಕೊಡಲು ತಲಾ 2000 ರುಪಾಯಿಗೆ ಪಿ3 ಸ್ಟ್ಯಾಂಡ್‌ನ 3007 ಟಿಕೆಟ್‌ ಹಾಗೂ ಸದಸ್ಯರ ಪತ್ನಿ, ಮಕ್ಕಳಿಗೆ ಮೆಂಬರ್ಸ್‌ ಸ್ಟ್ಯಾಂಡ್‌ನ 900 ಟಿಕೆಟ್‌ಗೆ ಬೇಡಿಕೆ ಬಂದಿತ್ತು. ಅಲ್ಲದೆ, ಕೆಎಸ್‌ಸಿಎ ಆಜೀವ ಸದಸ್ಯರಿಗೆ ನೀಡಲು ಎಂ4 ಸ್ಟ್ಯಾಂಡ್‌ನ 1000 ಟಿಕೆಟ್‌ಗಳನ್ನು ತಲಾ 2000ದಿಂದ 3500 ರು.ಗೆ ಕೊಡುವಂತೆ ಕೋರಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಕೆಎಸ್‌ಸಿಎಗೆ ಶೇ.15ರಷ್ಟು ಉಚಿತ ಕೋಟಾ ಜೊತೆ 10000 ಹೆಚ್ಚುವರಿ ಟಿಕೆಟ್‌ ನೀಡಿದರೆ, ಅಭಿಮಾನಿಗಳಿಗೆ ಉಳಿಯುವುದು 20000 ಟಿಕೆಟ್ ಮಾತ್ರ. ಬೋರ್ಡ್‌ನ ನಿಯಮದ ಪ್ರಕಾರ ಇದು ಸೂಕ್ತವಲ್ಲ ಎನ್ನುವ ನಿರ್ಧಾರ ಕೈಗೊಂಡ ಬಿಸಿಸಿಐ, ಫೈನಲ್‌ ಸ್ಥಳಾಂತರಿಸಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆಎಸ್‌ಸಿಎ ಟಿಕೆಟ್‌ ಬೇಡಿಕೆ

ಯಾರಿಗೆ? ಎಷ್ಟು?

ಶಾಸಕರು 900

ತಜ್ಞರ ಸಮಿತಿ, ಸರ್ಕಾರ 750

ಕ್ರಿಕೆಟ್‌ ಕ್ಲಬ್‌ 3007

ಸದಸ್ಯರ ಕುಟುಂಬ 900

ಆಜೀವ ಸದಸ್ಯರು 4500

ಒಟ್ಟು ಟಿಕೆಟ್‌ 10057