;Resize=(412,232))
ನವದೆಹಲಿ: 2026ರ ಐಪಿಎಲ್ನಲ್ಲಿ ತವರು ಮೈದಾನಗಳನ್ನು ಆಯ್ಕೆ ಮಾಡಲು ಆರ್ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಬಿಸಿಸಿಐ ವಿಧಿಸಿದ್ದ ಗಡುವು ಮಂಗಳವಾರ(ಜ.27)ಕ್ಕೆ ಕೊನೆಗೊಳ್ಳಲಿದೆ. ಅಂದರೆ, ಆರ್ಸಿಬಿ ತಂಡ ಬೆಂಗಳೂರಿನಲ್ಲಿ ಆಡಲಿದೆಯೇ ಇಲ್ಲವೇ ಎಂಬುದು ಇಂದೇ ತೀರ್ಮಾನವಾಗಲಿದೆ.
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ ಬೆಂಗಳೂರಿನಲ್ಲಿ ಆಡಲು ಆರ್ಸಿಬಿ ಹಿಂದೇಟು ಹಾಕುತ್ತಿತ್ತು. ಈ ನಡುವೆ ಬಿಸಿಸಿಐ, ಆರ್ಸಿಬಿಗೆ ಕೆಲ ದಿನಗಳ ಗಡುವು ನೀಡಿತ್ತು. ಜ.27ರ ಮೊದಲು ನಿಮ್ಮ ತವರು ಮೈದಾನ ಆಯ್ಕೆ ಮಾಡಿ ಎಂದು ಸೂಚಿಸಿತ್ತು.
ಈವರೆಗೂ ಆರ್ಸಿಬಿ ತನ್ನ ತವರು ಮೈದಾನವನ್ನು ಆಯ್ಕೆ ಮಾಡಿಲ್ಲ. ಮಂಗಳವಾರ ಇದರ ಬಗ್ಗೆ ಐಪಿಎಲ್ ಆಡಳಿತ ಮಂಡಳಿಗೆ ಫ್ರಾಂಚೈಸಿಯು ಮಾಹಿತಿ ನೀಡಬೇಕಿದೆ. ಇಷ್ಟು ವರ್ಷಗಳ ಕಾಲ ತನ್ನ ತವರು ಮೈದಾನವನ್ನಾಗಿಸಿದ್ದ ಚಿನ್ನಸ್ವಾಮಿಯಲ್ಲೇ ಆರ್ಸಿಬಿ ಈ ಬಾರಿಯೂ ಪಂದ್ಯಗಳನ್ನು ಆಡಲಿದೆಯೇ ಅಥವಾ ಬೇರೆ ನಗರವನ್ನು ಆಯ್ಕೆ ಮಾಡಲಿದೆಯೇ ಎಂಬ ಕುತೂಹಲವಿದೆ. ಫ್ರಾಂಚೈಸಿಯು ಚಿನ್ನಸ್ವಾಮಿ ಕ್ರೀಡಾಂಗಣ ಬೇಡ ಎಂದು ನಿರ್ಧರಿಸಿದರೆ ರಾಯ್ಪುರ, ನವಿ ಮುಂಬೈನಲ್ಲಿ ತನ್ನ ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ.