ಅಪಾಯದ ಅಂಚಿನಲ್ಲಿ ಭೂಮಿ ವಿಶ್ವಸಂಸ್ಥೆ ಎಚ್ಚರಿಕೆ

KannadaprabhaNewsNetwork | Updated : Mar 20 2024, 12:50 PM IST

ಸಾರಾಂಶ

ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳು ಮತ್ತು ಸಮುದ್ರದಲ್ಲಿನ ನೀರ್ಗಲ್ಲು ಕುಸಿತ ಆತಂಕಕಾರಿ ಏರಿಕೆಯಾಗಿದೆ.

ಜಿನೇವಾ: ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳು ಮತ್ತು ಸಮುದ್ರದಲ್ಲಿನ ನೀರ್ಗಲ್ಲು ಕುಸಿತ ಆತಂಕಕಾರಿ ಏರಿಕೆ, ಭೂಮಿ, ನೀರಿನ ಉಷ್ಣಾಂಶ ಹೆಚ್ಚಳವು ಆತಂಕಕಾರಿ ಮಟ್ಟ ತಲುಪಿದ್ದು ಭೂಮಿ ಅಪಾಯದ ಅಂಚಿನಲ್ಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಘಟನೆ ರೆಡ್‌ ಅಲರ್ಟ್‌ ನೀಡಿದೆ.

ಈ ಕುರಿತ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯ ಮಹಾಪ್ರದಾನ ಕಾರ್ಯದರ್ಶಿ ಆ್ಯಂಟನಿಯೋ ಗ್ಯುಟೆರ್ರಸ್‌, ‘2023ನೇ ವರ್ಷ ಉಷ್ಣಾಂಶ ದಾಖಲು ಆರಂಭವಾದ ಬಳಿಕ ಅತ್ಯಂತ ಉಷ್ಣತೆಯ ಮತ್ತು 2023ಕ್ಕೆ ಕೊನೆಗೊಂಡ ದಶಕವು, ಇತಿಹಾಸದಲ್ಲೇ ಅತ್ಯಂತ ಉಷ್ಣಾಂ ದಾಖಲಿಸಿದ ದಶಕವಾಗಿ ಹೊರಹೊಮ್ಮಿದೆ. 

ಇದು ಭೂಮಿ ಅತ್ಯಂತ ಅಪಾಯದ ಅಂಚಿನಲ್ಲಿದೆ ಎಂಬುದನ್ನು ತೋರಿಸುತ್ತದೆ’ ಎಂದು ವಿಶ್ವ ಸಂಸ್ಥೆಯ ಆ್ಯಂಟನಿ ಗುಟೆರಸ್‌ ಹೇಳಿದ್ದಾರೆ. ವಿಶ್ವ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವರದಿ ಅನ್ವಯ 2023ರಲ್ಲಿ ಸರಾಸರಿ ತಾಪಮಾನ ಏರಿಕೆ 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು ಇದು ಅತಿ ಆತಂಕಕ್ಕೆ ಕಾರಣವಾಗಿದೆ. 

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಮಿತಿಗಿಂತ ಕೊಂಚವೇ ಕಡಿಮೆಯಾಗಿದೆ. 2023ರಲ್ಲಿ ಭೂಮಿಯ ಶೇ.90ರಷ್ಟು ಸಾಗರ ಪ್ರದೇಶಗಳು ಉಷ್ಣ ಮಾರುತ ಕಂಡಿದೆ. 

ಇದರ ಪರಿಣಾಮವಾಗಿ ಸ್ವಿಜರ್ಲೆಂಡ್‌ನ ಅಲ್ಪೈನ್‌ ಹಿಮ  ಪರ್ವತದಲ್ಲಿ ಎರಡು ವರ್ಷದಲ್ಲಿ ಶೇ.20ರಷ್ಟು ಹಿಮ ಕರಗಿದೆ.ಅಂಟಾರ್ಟಿಕದಲ್ಲಿ ದಶಕದಲ್ಲಿ ಅತಿ ಹೆಚ್ಚು ಹಿಮ ಕರಗುವಿಕೆಯಾಗಿದೆ ಎಂದು ವರದಿ ಹೇಳಿದೆ.

ಇನ್ನು ಈ ಹಿಮ ಕರಗುವಿಕೆ, ಸಮುದ್ರ ಉಷ್ಣತೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗಿದೆ. ಹವಳದ ದ್ವೀಪಗಳು ಕಳೆಗುಂದುತ್ತಿವೆ. ಕಡಲ ಜಲಚರಗಳು ನಶಿಸುತ್ತಿವೆ ಎಂದು ವರದಿ ಆತಂಕ ಹೊರಹಾಕಿದೆ.

Share this article