ಮಾಲ್ಡೀವ್ಸ್‌ ಗಡುವಿತ್ತರೂ ತಕ್ಷಣಕ್ಕೆ ಭಾರತೀಯ ಸೇನೆ ವಾಪಸ್‌ ಇಲ್ಲ

KannadaprabhaNewsNetwork | Updated : Jan 26 2024, 07:21 AM IST

ಸಾರಾಂಶ

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು಼ ಭಾರತಕ್ಕೆ ತಕ್ಷಣವೇ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವಂತೆ ಆದೇಶಿಸಿದ್ದರೂ ತಾನು ತಕ್ಷಣಕ್ಕೆ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವುದಿಲ್ಲ ಎಂದು ಭಾರತ ಸರ್ಕಾರ ಪಟ್ಟು ಹಿಡಿದಿದೆ.

ನವದೆಹಲಿ: ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾಪಡೆಯ ತುಕಡಿಯ ವಾಪಸ್ಸಾತಿ ಸದ್ಯಕ್ಕಿಲ್ಲ ಎಂದು ಭಾರತ ಹೇಳಿದೆ. ಚೀನಾ ಬೆಂಬಲಿತ ಮಯಿಜು ಮಾಲ್ಡೀವ್ಸ್‌ ಅಧ್ಯಕ್ಷರಾದ ಬಳಿಕ ಸೇನೆಯನ್ನು ಮರಳಿ ಕರೆಸಿಕೊಳ್ಳುವಂತೆ ಭಾರತಕ್ಕೆ ಹಲವು ಬಾರಿ ಸೂಚಿಸಿದ್ದಲ್ಲದೇ ಇದಕ್ಕಾಗಿ ಗಡುವನ್ನು ಸಹ ನೀಡಿದ್ದರು.

ದೆಹಲಿಯಲ್ಲಿ ಮಾಧ್ಯಮವೊಂದರ ಜೊತೆ ಗುರುವಾರ ಮಾತನಾಡಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌, ಮಾಲ್ಡೀವ್ಸ್‌ನಿಂದ ಸೇನಾಪಡೆಯನ್ನು ಮರಳಿ ಕರೆಸಿಕೊಳ್ಳುವ ಬಗ್ಗೆ ಭಾರತ ಸರ್ಕಾರ ಯಾವುದೇ ಸೂಚನೆಯನ್ನು ನೀಡಿಲ್ಲ.

ನಾವು ಸರ್ಕಾರದ ಆದೇಶಕ್ಕಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ. ಮಯಿಜು ಮಾಲ್ಡೀವ್ಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದು, ದ್ವೀಪರಾಷ್ಟ್ರದಲ್ಲಿರುವ 80 ಮಂದಿ ಭಾರತೀಯ ಯೋಧರನ್ನು ಮರಳಿ ಕರೆಸಿಕೊಳ್ಳಲು ಭಾರತಕ್ಕೆ ಮಾಲ್ಡೀವ್ಸ್‌ ಗಡುವು ನೀಡಿದೆ.

Share this article