ದುಬೈ: ಇರಾನ್ನ ಅಣ್ವಸ್ತ್ರ ಮತ್ತು ಸೇನಾ ನೆಲೆಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದ ದಾಳಿಗೆ ಪ್ರತಿಯಾಗಿ ಶನಿವಾರ ಇರಾನ್ ಕೂಡಾ ಇಸ್ರೇಲ್ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದೆ. ಇಸ್ರೇಲ್ ಸೇನೆಯ ಕೇಂದ್ರ ಕಚೇರಿ, ಸೇನಾ ನೆಲೆಗಳು, ಪರಮಾಣು ಘಟಕಗಳನ್ನು ಗುರಿಯಾಗಿಸಿ 200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ನೂರಾರು ಡ್ರೋನ್ಗಳನ್ನು ಬಳಸಿ ಇರಾನ್ ದಾಳಿ ನಡೆಸಿದೆ.
ಈ ದಾಳಿಯ ವೇಳೆ ಇಸ್ರೇಲ್ನ ಸುರಕ್ಷತಾ ತಡೆಗೋಡೆಯಾದ ‘ಐರನ್ ಡೋಮ್’ ಭೇದಿಸುವಲ್ಲಿ ಇರಾನ್ನ ಕೆಲ ಕ್ಷಿಪಣಿಗಳು ಯಶಸ್ವಿಯಾಗಿವೆ. ಇರಾನ್ ದಾಳಿಯಲ್ಲಿ ಮೂವರು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೊತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.
ಈ ನಡುವೆ ಇರಾನ್ ಇದೇ ರೀತಿ ದಾಳಿ ಮುಂದುವರಿಸಿದರೆ ಟೆಹರಾನ್ ಹೊತ್ತಿ ಉರಿಯಲಿದೆ ಎಂದು ಇಸ್ರೇಲ್ನ ರಕ್ಷಣಾ ಸಚಿವ ಕಾಟ್ಜ್ ಎಚ್ಚರಿಸಿದ್ದಾರೆ. ಇದರೊಂದಿಗೆ ಉಭಯ ದೇಶಗಳ ನಡುವಿನ ಸಮರ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗುವ ಆತಂಕ ಎದುರಾಗಿದೆ.
ಮೂವರು ವಿಜ್ಞಾನಿಗಳ ಸಾವು:
ಈ ನಡುವೆ, ಇಸ್ರೇಲ್ ದಾಳಿಗೆ ಮತ್ತೆ ಮೂವರು ಅಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿಕೊಂಡಿದೆ. ಈ ಮೂಲಕ ಶುಕ್ರವಾರದಿಂದೀಚೆಗೆ ಇಸ್ರೇಲ್ ದಾಳಿಯಿಂದ ಇರಾನ್ನಲ್ಲಿ ಒಟ್ಟು 9 ಮಂದಿ ಅಣು ವಿಜ್ಞಾನಿಗಳು ಮತ್ತು ತಜ್ಞರು ಮೃತಪಟ್ಟಂತಾಗಿದೆ.
ಹೊತ್ತಿ ಉರಿಯಲಿದೆ ಇರಾನ್:
ಇರಾನ್ ಇದೇ ರೀತಿ ದಾಳಿ ಮುಂದುವರಿಸಿದರೆ ಟೆಹರಾನ್ ಹೊತ್ತಿ ಉರಿಯಲಿದೆ ಎಂದು ಇಸ್ರೇಲ್ನ ರಕ್ಷಣಾ ಸಚಿವ ಕಾಟ್ಜ್ ಎಚ್ಚರಿಸಿದ್ದಾರೆ. ಇಸ್ರೇಲ್ ಕೇವಲ ಅಣು ಮತ್ತು ಮಿಲಿಟರಿ ನೆಲೆಗಳಿಗೆ ಸೀಮಿತವಾಗಿ ದಾಳಿ ನಡೆಸಿದೆ. ಆದರೆ, ಇರಾನ್ ಜನರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ.
ಜೊತೆಗೆ ಇರಾನ್ ರಾಜಧಾನಿ ಟೆಹರಾನ್ ಸೇರಿದಂತೆ ಯಾವುದೇ ಪ್ರದೇಶಗಳು ನಮಗೆ ನಿಲುಕದ ವ್ಯಾಪ್ತಿಯಲ್ಲಿ ಇಲ್ಲ. ಶುಕ್ರವಾರ ನಾವು ನಡೆಸಿದ ದಾಳಿ ವೇಳೆ ನಮ್ಮ ವಿಮಾನ ಮತ್ತು ಡ್ರೋನ್ಗಳು ರಾಜಧಾನಿ ಟೆಹರಾನ್ ಮೇಲೇ ಎರಡೂವರೆ ಗಂಟೆಗಳ ಕಾಲ ಹಾರಾಟ ನಡೆಸಿದ್ದವು. ಯಾವುದೇ ಕ್ಷಣದಲ್ಲಿ ಬೇಕಾದರೂ ನಾವು ಯಾವುದೇ ಸ್ಥಳದ ಮೇಲೆ ದಾಳಿಯ ಸಾಮರ್ಥ್ಯ ಹೊಂದಿದ್ದೇವೆ. ನಾವು ಇರಾನ್ ವಾಯುರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಅಮೆರಿಕ ಮೇಲೂ ದಾಳಿ:
ಈ ನಡುವೆ, ಇಸ್ರೇಲ್ ಮೇಲಿನ ದಾಳಿ ತಡೆಯಲು ಮುಂದಾದರೆ ಬ್ರಿಟನ್, ಅಮೆರಿಕ, ಫ್ರಾನ್ಸ್ನ ಮಿಲಿಟರಿ ನೆಲೆಗಳು ಮತ್ತು ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಇದೇ ವೇಳೆ ಇರಾನ್ ಎಚ್ಚರಿಸಿದೆ.
ಇಸ್ರೇಲ್ನಲ್ಲಿ ಸಿಲುಕಿ 19 ಕನ್ನಡಿಗರ ಪರದಾಟ
ಬೆಂಗಳೂರು: ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ವಿಮಾನ ಸ್ಥಗಿತಗೊಂಡ ಪರಿಣಾಮ ಅಧ್ಯಯನ ಪ್ರವಾಸಕ್ಕಾಗಿ ಇಸ್ರೇಲ್ಗೆ ತೆರಳಿದ್ದ 18 ಮಂದಿ ಕನ್ನಡಿಗರು ಇಸ್ರೇಲ್ನಲ್ಲೇ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಕೆಪಿಸಿಸಿ ವಕ್ತಾರ ಎ.ಎನ್. ನಟರಾಜಗೌಡ ಸೇರಿ ಬಿಪ್ಯಾಕ್ನ 18 ಮಂದಿ ಸದಸ್ಯರಿದ್ದಾರೆ. ಯುದ್ಧದ ಸ್ಥಿತಿ ಹಿನ್ನೆಲೆಯಲ್ಲಿ ತುರ್ತುಸ್ಥಿತಿ ಘೋಷಣೆ ಮಾಡಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಟೆಲ್ ಅವಿವ್ ನಗರದಲ್ಲಿ ಇವರೆಲ್ಲ ಬಾಕಿ ಆಗಿದ್ದಾರೆ.
ಯುದ್ದದಿಂದ ಭಾರತಕ್ಕೆ ತೈಲ ಬೆಲೆ ಹೊಡೆತ?
ನವದೆಹಲಿ: ಇಸ್ರೇಲ್ ಮತ್ತು ಇರಾನ್ ಸಮರವು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಗನಮುಖಿಯಾಗುವಂತೆ ಮಾಡಿದೆ. ಕಳೆದ 2- 3 ದಿನಗಳಲ್ಲಿ ಕಚ್ಚಾತೈಲದ ಬೆಲೆ ಶೇ.8ರಷ್ಟು ಏರಿಕೆಯಾಗಿದ್ದು, ಕಚ್ಚತೈಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿತ ಭಾರತದ ಮೇಲೆ ಹೊಡೆತ ನೀಡುವ ಸಾಧ್ಯತೆ ಕಂಡುಬಂದಿದೆ. ಶನಿವಾರ ಬ್ಯಾರೆಲ್ ಕಚ್ಚಾ ತೈಲದ ಬೆಲೆ 518 ರು. ಏರಿಕೆಯಾಗುವ ಮೂಲಕ ಐದು ತಿಂಗಳ ಗರಿಷ್ಠವಾದ 6727 ರು.ಗೆ ತಲುಪಿದೆ.