;Resize=(412,232))
ಬೆಂಗಳೂರು : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ನಾಪತ್ತೆಯಾಗಿರುವ ಕರ್ನಾಟಕದವರ ಸಂಖ್ಯೆ ಹೆಚ್ಚುತ್ತಲಿದ್ದು, ಶನಿವಾರ ನೇಪಾಳದಲ್ಲಿ ಕಾಣೆಯಾಗಿ ಸಂಪರ್ಕಕ್ಕೆ ಸಿಗದವರ ಸಂಖ್ಯೆ 24 ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಮಾಹಿತಿಯಂತೆ ಶುಕ್ರವಾರ ಬೆಳಗಿನವರೆಗೆ ನೇಪಾಳಕ್ಕೆ ತೆರಳಿದ್ದವರಲ್ಲಿ ರಾಜ್ಯದ 24 ಮಂದಿ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗಿತ್ತು. ಅದರಲ್ಲಿ 20 ಮಂದಿ ಮಾಹಿತಿ ಪತ್ತೆಯಾಗಿರಲಿಲ್ಲ. ಶನಿವಾರ ಸಂಕಷ್ಟಕ್ಕೆ ಸಿಲುಕಿದವರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, ಅವರಲ್ಲಿ ನಾಲ್ವರು ಮಾತ್ರ ಸಂಪರ್ಕಕ್ಕೆ ದೊರೆತಿದ್ದಾರೆ. ಆ ನಾಲ್ವರು ಸುರಕ್ಷಿತ ಸ್ಥಳದಲ್ಲಿರುವುದಾಗಿ ಖಚಿತಪಡಿಸಿಕೊಳ್ಳಲಾಗಿದೆ. ಉಳಿದಂತೆ ಇನ್ನೂ 24 ಮಂದಿ ಮಾಹಿತಿ ಲಭ್ಯವಾಗಿಲ್ಲ. ಅವರ ಪತ್ತೆಗಾಗಿ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ನೇಪಾಳದ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಲಾಗಿದೆ.
ನೇಪಾಳದಲ್ಲಿ ಸಿಲುಕಿ ಸದ್ಯ ಸುರಕ್ಷಿತ ಸ್ಥಳದಲ್ಲಿರುವ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ವಿಡಿಯೋ ಕರೆ ಮಾಡಿ ಮಾತನಾಡಿದರು. ನೇಪಾಳದಲ್ಲಿ ಹೊರಗೆ ಓಡಾಡಬೇಡಿ. ಸುರಕ್ಷಿತ ಸ್ಥಳದಲ್ಲಿರಿ. ನಿಮ್ಮನ್ನು ಸುರಕ್ಷಿತವಾಗಿ ತವರಿಗೆ ಕರೆತರಲು ಎಲ್ಲ ಪ್ರಯತ್ನ ಮಾಡುತ್ತೇನೆ ಮತ್ತು ಎಲ್ಲ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ನೇಪಾಳದಿಂದ ದೆಹಲಿಗೆ ಬರುವ ಎಲ್ಲ ಕನ್ನಡಿಗರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಮತ್ತು ಅಲ್ಲಿಂದ ಬೆಂಗಳೂರಿಗೆ ಬರಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.