;Resize=(412,232))
ನವದೆಹಲಿ: ಭಾರತದತ್ತ ಹೊರಟ ಶೇ.40ರಷ್ಟು ತೈಲ ಮತ್ತು ಶೇ.50ರಷ್ಟು ಎಲ್ಎನ್ಜಿ ಸಾಗಿ ಬರುತ್ತಿದ್ದ ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್ ಮಾಡಿರುವ ಇರಾನ್, ಅಲ್ಲಿಂದ ಸಾಗುವ ಎಲ್ಲಾ ಹಡಗುಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಘೋಷಿಸಿದೆ. ಇದು ಭಾರತೀಯ ಹಡುಗಗಳ ಮಾಲೀಕರನ್ನು ಚಿಂತಾಕ್ರಾಂತರನ್ನಾಗಿಸಿದೆ.
ರಾಷ್ಟ್ರೀಯ ಹಡಗು ಮಾಲೀಕರ ಸಂಘವು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಭಾರತೀಯ ಹಡಗುಗಳು ಸುರಕ್ಷಿತವಾಗಿ ಸಾಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ‘ಭಾರತೀಯ ಧ್ವಜ ಇರುವ 27 ಹಡಗುಗಳು ಪ್ರಸ್ತುತ ಹೋರ್ಮುಜ್ ಪ್ರದೇಶದಲ್ಲಿ ಸಿಲುಕಿಕೊಂಡಿವೆ. ಪರಿಣಾಮ 10,000 ಕೋಟಿ ರು.ಗೂ ಅಧಿಕ ಮೌಲ್ಯದ ನಮ್ಮ ಆಸ್ತಿಗಳು ಅಪಾಯದಲ್ಲಿವೆ. ಆದ್ದರಿಂದ ದಯವಿಟ್ಟು ಇರಾನ್ ಮತ್ತು ಇಸ್ರೇಲ್ ಜತೆ ರಾಜತಾಂತ್ರಿಕ ಮಾತುಕತೆ ನಡೆಸಿ ಅವುಗಳು ಸುರಕ್ಷಿತವಾಗಿ ಸಾಗಲು ಅನುವು ಮಾಡಿಕೊಡಿ’ ಎಂದು ಅದರಲ್ಲಿ ತಿಳಿಸಲಾಗಿದೆ.
ಸದ್ಯ ಹೋರ್ಮುಜ್ ಸಮೀಪದ ಪರ್ಷಿಯನ್ ಕೊಲ್ಲಿ, ಒಮಾನ್ ಕೊಲ್ಲಿಯಲ್ಲಿ ಭಾರತದ ಸುಮಾರು 37 ಹಡಗುಗಳು ಸಿಲುಕಿದ್ದು, ಅದರಲ್ಲಿ ಅಂದಾಜು 1,109 ನಾವಿಕರು ಇದ್ದಾರೆಂದು ತಿಳಿದುಬಂದಿದೆ.