ದುಬೈ: ‘ಕನಿಷ್ಟ ಸರ್ಕಾರ ಗರಿಷ್ಠ ಆಡಳಿತ’ ಎಂಬುದು ನನ್ನ ಮಂತ್ರವಾಗಿದೆ. ಭಾರತ ಸರ್ಕಾರದ ಉದ್ದೇಶ ಮತ್ತು ಬದ್ಧತೆಯ ಮೇಲೆ ಜನರಿಗೆ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ ಭ್ರಷ್ಟಾಚಾರ ಮಕ್ತ ಸರ್ಕಾರ ಇಂದಿನ ಅಗತ್ಯ ಎಂದಿದ್ದಾರೆ.
ತಮ್ಮ ಯುಎಇ ಪ್ರವಾಸದ 2ನೇ ದಿನದಂದು ದುಬೈನಲ್ಲಿ ವಿಶ್ವ ಆಡಳಿತಗಳ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ ‘ಇಂದು ಜಗತ್ತಿಗೆ ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನು ಕರೆದುಕೊಂಡು ಹೋಗುವ ಸ್ವಚ್ಛ ಸರ್ಕಾರ ಬೇಕು ಮತ್ತು ಭ್ರಷ್ಟಾಚಾರ ಮುಕ್ತವಾಗಿರುವ ಸರ್ಕಾರಗಳ ಅಗತ್ಯವಿದೆ.
ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ನಾವು ಸಾರ್ವಜನಿಕ ಭಾವನೆಗಳಿಗೆ ಆದ್ಯತೆ ನೀಡಿದ್ದರಿಂದ ಮಾತ್ರ ಇದು ಸಾಧ್ಯವಾಯಿತು’ ಎಂದಿದ್ದಾರೆ.
ಅಲ್ಲದೇ ‘ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಭಾರತದ ಪ್ರಧಾನಿಯಾಗಿ 23 ವರ್ಷಗಳನ್ನು ಸರ್ಕಾರದಲ್ಲಿ ಕಳೆದಿದ್ದೇನೆ. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬುದು ನನ್ನ ಮಂತ್ರವಾಗಿದೆ.
ನಮ್ಮ ಸರ್ಕಾರವು ಭಾರತೀಯ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಬಲಪಡಿಸುವತ್ತ ಗಮನಹರಿಸಿದೆ.
ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆ ತಮ್ಮ ಸರ್ಕಾರದ ಆದ್ಯತೆಯಾಗಿದೆ ಮತ್ತು 50 ಕೋಟಿಗೂ ಹೆಚ್ಚು ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ’ ಎಂದು ತಿಳಿಸಿದರು.
ಇದೇ ವೇಳೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರನ್ನು ಶ್ಲಾಘಿಸಿದ ಮೋದಿ ‘ದುಬೈ ಜಾಗತಿಕ ಆರ್ಥಿಕತೆ, ವಾಣಿಜ್ಯ ಮತ್ತು ತಂತ್ರಜ್ಞಾನದ ಕೇಂದ್ರಬಿಂದುವಾಗುತ್ತಿದೆ.
ಜಾಯೆದ್ ಅವರು ದೂರದೃಷ್ಟಿ ಮತ್ತು ಸಂಕಲ್ಪ ಹೊಂದಿರುವ ನಾಯಕ’ ಎಂದರು. ‘ಭವಿಷ್ಯದ ಸರ್ಕಾರಗಳನ್ನು ರೂಪಿಸುವುದು’ ವಿಷಯದ ಮೇರೆಗೆ ವಿಶ್ವ ಆಡಳಿತ ಶೃಂಗಸಭೆ ನಡೆಯುತ್ತಿದ್ದು ಜಗತ್ತಿನ ವಿವಿಧ ಸರ್ಕಾರಗಳು, ಅಂತರಾಷ್ಟ್ರೀಯ ಸಂಸ್ಥೆಗಳು, ಚಿಂತನಶೀಲ ನಾಯಕರು ಮತ್ತು ಖಾಸಗಿ ವಲಯದ ನಾಯಕರು ಇದರಲ್ಲಿ ಭಾಗವಹಿಸಿದ್ದಾರೆ.