ಸಾರಾಂಶ
ಗುಂಡ್ಲುಪೇಟೆ: ಪುರಸಭೆ ಮುಖ್ಯಾಧಿಕಾರಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳಿಗೆ ಮುಂದಾಗಿದ್ದಾರೆ. ಪಟ್ಟಣದ ಕ್ರೀಡಾಂಗಣ, 3 ಪಾರ್ಕ್ ಹಾಗೂ ಪುರಸಭೆ ಕಚೇರಿ ಆವರಣದಲ್ಲಿ ಕಲ್ಲಿನಾಸನ ಹಾಕಿಸಿ, ಜಡ್ಡುಗಟ್ಟಿದ್ದ ಆಡಳಿತಕ್ಕೆ ವೇಗ ನೀಡಿದ್ದಾರೆ.
ಪಟ್ಟಣದ ಪಾರ್ಕ್ಗಳು ಹಾಗೂ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಬಂದಾಗ ವಿರಮಿಸಲು ಕಲ್ಲಿನಾಸಿಗೆ ಇರಲಿಲ್ಲ. ಪುರಸಭೆ ಇತ್ತ ಗಮನ ಹರಿಸಿರಲಿಲ್ಲ. ನೂತನ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಆಸಕ್ತಿಯ ಫಲವಾಗಿ ಇಲ್ಲಿ ಕಲ್ಲಿನಾಸನ ಹಾಕಿಸಲಾಗಿದೆ.ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣ, ಉದಯ ರವಿ, ಕೆಎಸ್ಎನ್ ಬಡಾವಣೆ, ಜನತಾ ಕಾಲೋನಿ ಪಾರ್ಕ್ ಹಾಗೂ ಪುರಸಭೆ ಕಚೇರಿ ಆವರಣದಲ್ಲಿ 31 ಕಲ್ಲಿನಾಸನ ಹಾಕಿಸಿ ಅಭಿವೃದ್ಧಿ ಕೆಲಸಕ್ಕೆ ಸದ್ದಿಲ್ಲದೆ ಚಾಲನೆ ಸಿಕ್ಕಿದೆ.
ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಪುರಸಭೆ ಆಡಳಿತ ವರ್ಗದ ಸಹಕಾರದಿಂದ ಆರಂಭಿಕವಾಗಿ ಮೂರು ಪಾರ್ಕ್ ಹಾಗೂ ಕ್ರೀಡಾಂಗಣದ ಜತೆಗೆ ಪುರಸಭೆ ಕಚೇರಿ ಆವರಣದಲ್ಲಿ 5 ಲಕ್ಷ ರು. ವೆಚ್ಚದಲ್ಲಿ 31 ಕಲ್ಲಿನಾಸನ ಹಾಕಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಕ್ರೀಡಾಂಗಣ, ಪಾರ್ಕ್ ಹಾಗೂ ಪುರಸಭೆ ಕಚೇರಿ ಆವರಣದಲ್ಲಿ ಸಾರ್ವಜನಿಕರು ಕೂರಲು ಪುರಸಭೆ ಅವಕಾಶ ಮಾಡಿ ಕೊಟ್ಟ ಬಗ್ಗೆ ಪಟ್ಟಣದ ಸಾರ್ವಜನಿಕರು, ವಾಯುವಿಹಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
--------------ಶಾಸಕರು, ಪುರಸಭೆ ಆಡಳಿತ ಮಂಡಳಿ ಸೂಚನೆ ಮೇರೆಗೆ ಮೂರು ಪಾರ್ಕ್, ಡಿ.ದೇವರಾಜ ಅರಸು ಕ್ರೀಡಾಂಗಣ ಹಾಗೂ ಪುರಸಭೆ ಕಚೇರಿ ಆವರಣದಲ್ಲಿ ಕಲ್ಲಿನಾಸನ ಹಾಕಲಾಗಿದೆ. ಉಳಿದ ಪಾರ್ಕ್ಗಳಿಗೂ ಹಾಕಲು ಚಿಂತನೆ ಕೂಡ ನಡೆಸಲಾಗಿದೆ.ಎಸ್.ಶರವಣ, ಪುರಸಭೆ, ಮುಖ್ಯಾಧಿಕಾರಿ.