- ಹೊನ್ನಾಳಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪೋಲಿಯೋ ಮುಕ್ತ ಭಾರತವನ್ನಾಗಿಸುವಂತೆ ಬಂಜೆತನ ಮುಕ್ತ ದೇಶವನ್ನಾಗಿಸಬೇಕಾಗಿದೆ ಎಂದು ಸ್ಥಳೀಯ ಶಾಸಕ ಡಿ.ಜಿ.ಶಾಂತನಗೌಡ ಪುತ್ರ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಮಹಿಳಾ ಕದಳಿ ವೇದಿಕೆ. ಕಡ್ಲಿ ಐ.ವಿ.ಎಫ್., ಸೆಂಟರ್ ದಾವಣಗೆರೆ, ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಮಾಜದಲ್ಲಿ ಹೆಣ್ಣುಮಕ್ಕಳ ಬಂಜೆತನವನ್ನ ಒಂದು ಶಾಪ ಎನ್ನುವ ಮೂಢನಂಬಿಕೆ ಇದೆ. ಇದೀಗ ವೈದ್ಯಕೀಯ ವಿಜ್ಞಾನ ಸಾಕಷ್ಟು ಆಭಿವೃದ್ಧಿಯಾಗಿದೆ. ಬಂಜೆತನ ನಿವಾರಣೆಗಾಗಿ ಅನೇಕ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಲಭ್ಯವಾಗಿವೆ, ಮದುವೆಯಾದ ಹೆಣ್ಣುಮಕ್ಖಳು ತಮಗೆ ಮಕ್ಕಳಿಲ್ಲ ಎಂದು ಕೊರಗುವ ಬದಲಿಗೆ, ಇಂತಹ ವೈದ್ಯಕೀಯ ಸೌಲಭ್ಯಗಳನ್ನು ಪಡೆದುಕೊಂಡು ತಾವೂ ಮಗವಿನ ತಾಯಿಯಾಗಬಹುದು ಎಂದು ಹೇಳಿದರು.

ದಾವಣಗೆರೆಯ ಕಡ್ಲಿ ಐ.ವಿ.ಎಫ್. ಸೆಂಟರ್‌ನ ವೈದ್ಯರಾದ ಡಾ.ವರದ ಕಿರಣ್ ಮಾತನಾಡಿ, ಐವಿಎಫ್ ವೈದ್ಯಕೀಯ ತಂತ್ರಜ್ಞಾನ ಬಂದು ಸುಮಾರು 40 ವರ್ಷಗಳಾಗಿದೆ. 10 ವರ್ಷಗಳಿಂದಲೂ ಬಂಜೆತನ ನಿವಾರಣೆಗಾಗಿ ಚಿಕಿತ್ಸೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಜೀವನಶೈಲಿಯಲ್ಲಿನ ನ್ಯೂನತೆಗಳಿಂದ ಬಂಜೆತನ ಎನ್ನುವುದು ಸಾಮಾನ್ಯವಾಗಿದೆ. ಇದರಿಂದ ಮಕ್ಕಳಿಲ್ಲದ ಮಹಿಳೆಯರು ಧೃತಿಗೆಡದೇ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆದರೆ ಎಲ್ಲರಂತೆ ತಾವೂ ಮಗುವನ್ನು ಪಡೆಯಬಹುದು ಎಂದು ಹೇಳಿದರು.

ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ, ವಿದೂಷಿ ಪ್ರತಿಮಾ ನಿಜಗುಣ ಶಿವಯೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಇಷ್ಟು ದಿನ ತಮ್ಮ ವೇದಿಕೆ ವತಿಯಿಂದ ಸಂಗೀತ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬರಲಾಗುತ್ತಿತ್ತು. ಇದೇ ಪ್ರಥಮ ಭಾರಿಗೆ ಮಹಿಳೆಯರಿಗಾಗಿ ಈ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರ ಏರ್ಪಡಿಸಲಾಗಿದೆ. ಸಾಕಷ್ಟು ಮಹಿಳೆಯರು ಭಾಗವಹಿಸಿರುವುದು ಉತ್ತಮ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ನಂದಕುಮಾರ್, ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ, ಸ್ತ್ರೀರೋಗ ತಜ್ಞೆ ಡಾ.ಲಕ್ಷ್ಮೀ ಮಾತನಾಡಿದರು. ವೇದಿಕೆಯ ಕೋಶಾಧಿಕಾರಿ ಶಿಲ್ಪರಾಜುಗೌಡ್ರು ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಕದಳಿ ವೇದಿಕೆಯ ಎಲ್ಲ ಪದಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ, ಮಹಿಳೆಯರು ಇದ್ದರು.

- - -

-30ಎಚ್.ಎಲ್.ಐ1:

ಶಿಬಿರವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಉದ್ಘಾಟಿಸಿದರು.