ಸಾರಾಂಶ
- ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು, ಜನ ಪ್ರತಿನಿಧಿಗಳ ಸಲಹೆ
- ಸ್ಕೈವಾಕ್, ಅಂಡರ್ ಪಾಸ್ ಎಲ್ಲಿದೆ ಸ್ವಾಮಿ, ಪಾಲಿಕೆಗೆ ಹಿರಿಯ ಸದಸ್ಯ ಚಮನ್ ಪ್ರಶ್ನೆಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಮಹಾನಗರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು, ಪಾಲಿಕೆ ಸದಸ್ಯರಿಂದ ಸಾಕಷ್ಟು ಸಲಹೆ, ಸೂಚನೆಗಳು ವ್ಯಕ್ತವಾದವು. ಪಾಲಿಕೆ ಸಭಾಂಗಣದಲ್ಲಿ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರ ಪಾಲಿಕೆಯ 2023-24ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ, ಜಿಲ್ಲಾ ಕೇಂದ್ರದ ಗುಂಡಿ ಬಿದ್ದ ರಸ್ತೆಗಳ ದುರಸ್ತಿ, ಬೀದಿ ದೀಪಗಳ ವ್ಯವಸ್ಥೆ ಸರಿಪಡಿಸಲು, ಶಿಥಿಲ ದೇವಸ್ಥಾನಗಳ ಜೀರ್ಣೋದ್ಧಾರ, ಕಳೆದ ಬಜೆಟ್ನಲ್ಲಿ ಮಂಡಿಸಿದ ಯೋಜನೆ, ಕಾಮಗಾರಿಗಳ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು.ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಾಳೇಶ್ವರ ಮಾತನಾಡಿ, ಹಳೆ ಭಾಗದಲ್ಲಿ ಪಾಳು ಬಿದ್ದ ನಾಗಣ್ಣ ಗರಡಿ ಮನೆ ಅಭಿವೃದ್ಧಿಪಡಿಸಿ. ಆಗದಿದ್ದರೆ ಅಲ್ಲೊಂದು ಗ್ರಂಥಾಲಯ ಆರಂಭಿಸಿ, ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್ ಅಳವಡಿಸುವುದರಿಂದ ಪಾಲಿಕೆಗೆ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಇನ್ನು 3 ತಿಂಗಳಲ್ಲೇ ಜಲಸಿರಿ ಶುರುವಾಗಲಿದ್ದು, ದಿನದ 24 ಗಂಟೆ ನೀರು ಪೂರೈಸಲಾಗುವುದು. ಹಾಗಾಗಿ ಕೊಳವೆ ಬಾವಿಗೆ ಸೋಲಾರ್ ಪಂಪ್ ಅಳವಡಿಸುವ ಅಗತ್ಯವಿಲ್ಲ ಎನಿಸುತ್ತದೆ ಎಂದರು.ಕಾಂಗ್ರೆಸ್ಸಿನ ಹಿರಿಯ ಮುಖಂಡ ಸೋಮಲಾಪುರ ಹನುಮಂತಪ್ಪ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಿರಿಸಿದ ಅನುದಾನವನ್ನ ಸಮರ್ಪಕವಾಗಿ ಬಳಕೆ ಮಾಡಬೇಕು. ಆದರೆ, ಪಾಲಿಕೆಯಿಂದ ಅಂತಹ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಂಗ್ರಹಿಸಿದ ಜನರು, ಸಂಘಟನೆಗಳ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸುತ್ತಿರಾ ಎಂಬ ಬಗ್ಗೆಯೂ ಸ್ಪಷ್ಟಪಡಿಸಿ ಎಂದು ಹೇಳಿದರು. ಹಿರಿಯ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್ ಮಾತನಾಡಿ, ಹಿಂದಿನ ಬಜೆಟ್ನಲ್ಲಿ ಪಾಲಿಕೆ ಎದುರು ಸ್ಕೈ ವಾಕ್ ನಿರ್ಮಿಸಲು ಹಾಗೂ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಬಜೆಟ್ ನಲ್ಲಿ ಮಂಡಿಸಲಾಗಿತ್ತು. ಆದರೆ, ಹಿಂದಿನ ಬಜೆಟ್ನ ಘೋಷಣೆಗಳು ಇಂದಿಗೂ ಅನುಷ್ಠಾನಗೊಂಡಿಲ್ಲ. ಕಳೆದ ಬಜೆಟ್ನಲ್ಲಿ ಕಾಮಗಾರಿಗಳಿಗೆ ಮೀಸಲಿರಿಸಿದ್ದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸ ಆಗಲಿ ಎಂದು ಸಲಹೆ ನೀಡಿದರು. ಮಹಮ್ಮದ್ ಸಲೀಂ ಮಾತನಾಡಿ, ಈರುಳ್ಳಿ ಮಾರುಕಟ್ಟೆ ರಸ್ತೆ, ಗೀತಾಂಜಲಿ ಚಿತ್ರ ಮಂದಿರದ ಶ್ರೀ ಲಿಂಗೇಶ್ವರ ದೇವಸ್ಥಾನ ರಸ್ತೆಗೆ ಜನರು ಕಸ ತಂದು ಸುರಿಯುತ್ತಾರೆ. ಪರಿಸರ ಮಲಿನವಾಗುವ ಜೊತೆಗೆ ಜನಾರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕುಡಿಯುವ ನೀರು, ಬೀದಿ ದೀಪದ ಸಮಸ್ಯೆಯೂ ಇದೆ. ಬಜೆಟ್ನಲ್ಲಿ ಕಸ ವಿಲೇ ಹಾಗೂ ಬೀದಿ ದೀಪ ದುರಸ್ಥಿಗೆ ಅನುದಾನಮೀಸಲಿಡಿ ಎಂದರು.ಆಯುಕ್ತೆ ಮಾತನಾಡಿ, ಈರುಳ್ಳಿ ಮಾರುಕಟ್ಟೆ, ಲಿಂಗೇಶ್ವರ ದೇವಸ್ಥಾನ ರಸ್ತೆ ಎಪಿಎಂಸಿಗೆ ಒಳಪಡುತ್ತದೆ. ಆದರೂ, ಸ್ಥಳ ಪರಿಶೀಲಿಸಿ, ಅಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದರು. ಪಾಲಿಕೆ ಸದಸ್ಯ ಆರ್.ಎಲ್.ಶಿವಪ್ರಕಾಶ ಮಾತನಾಡಿ, ಪಾಲಿಕೆಯಿಂದ 3 ಸಾವಿರ ಆಶ್ರಯ ಮನೆ ನೀಡಿರುವ ಮಾಹಿತಿ ಇದ್ದು, ತಮ್ಮ ವಾರ್ಡ್ನ ಯಾರೊಬ್ಬರಿಗೂ ನೀಡಿಲ್ಲ. ಯಾಕೆ ಹೀಗಾಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಪಾಲಿಕೆ ಆಯುಕ್ತರು, ಆಶ್ರಯ ಮನೆ ವಿಚಾರವಾಗಿ ಸದಸ್ಯರ ದೂರಿನ ಬಗ್ಗೆ ಪರಿಶೀಲಿಸುವುದಾಗಿ ಹೇಳಿ, ಸದಸ್ಯರನ್ನು ಸುಮ್ಮನಾಗಿಸಿದರು. ಅಲ್ಲಿಗೆ ಆಶ್ರಯ ಮನೆ ಕೇಳಿದ ಸದಸ್ಯರಿಗೆ ಸಮರ್ಪಕ ಉತ್ತರವಂತೂ ಸ್ಪಷ್ಟವಾಗಿ ಸಿಗಲಿಲ್ಲವೆಂಬುದು ಸ್ಪಷ್ಟವಾಯಿತು. ಉಪ ಮೇಯರ್ ಯಶೋಧ ಯೋಗೇಶ, ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ, ಅಧಿಕಾರಿ ಉದಯಕುಮಾರ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಸಂಘ-ಸಂಸ್ಥೆ ಪ್ರತಿನಿಧಿಗಳು, ಸಂಘಟನೆ ಮುಖಂಡರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು. ಬಜೆಟ್ ಪೂರ್ವಭಾವಿ ಸಭೆಗೆ ಆಡಳಿತ-ವಿಪಕ್ಷ ಸದಸ್ಯರ ಗೈರು ಎದ್ದು ಕಾಣುತ್ತಿತ್ತು. ಕೇವಲ ಬೆರಳಣಿಕೆ ಸದಸ್ಯರು ಮಾತ್ರ ಉಭಯ ಪಕ್ಷದಿಂದ ಭಾಗವಹಿಸಿದ್ದರು. ಸಭೆಗೆ ವಿಪಕ್ಷವಾಗಿ ಸಲಹೆ, ಸೂಚನೆ ನೀಡಬೇಕಿದ್ದ ಬಿಜೆಪಿ ಸದಸ್ಯರೇ ಗೈರು ಹಾಜರಾಗಿದ್ದರು. ವಿಪಕ್ಷ ನಾಯಕರು ಸಹ ಸಭೆಗೆ ಹಾಜರಾಗಿರಲಿಲ್ಲ.
.......................................ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಾರ್ಚ್ನಲ್ಲಿ ಇದ್ದು, ಅದೇ ವೇಳೆ ನಿಟುವಳ್ಳಿಯಲ್ಲೂ ಶ್ರೀ ಕರಿಯಮ್ಮ ದೇವಿ ಜಾತ್ರೆ ಆಗುತ್ತದೆ. ನಿಟುವಳ್ಳಿ ಭಾಗದ ಸಣ್ಣಪುಟ್ಟ ದೇವಸ್ಥಾನಗಳಿಗೂ ಸುಣ್ಣಬಣ್ಣ ಮಾಡಿಸಬೇಕು. 33ನೇ ವಾರ್ಡ್ನ ನಿಟುವಳ್ಳಿಯಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ಆರಂಭಿಸಬೇಕು.ಕೆ.ಎಂ.ವೀರೇಶ, ಪಾಲಿಕೆ ಬಿಜೆಪಿ ಸದಸ್ಯ. ............................ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಇದ್ದು, ಪಾಲಿಕೆ ನೌಕರರಿಗೂ ಪಾಲಿಕೆಯಿಂದಲೇ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಬೇಕು. ಪಾಲಿಕೆ ಎಲ್ಲಾ ನೌಕರರಿಗೂ 2 ವರ್ಷಕ್ಕೊಮ್ಮೆ 2ನೇ ಬಾರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕೆ.ಎಸ್.ಗೋವಿಂದರಾಜ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ..............................
ಪ್ರತಿ ವಾರ್ಡ್ನಲ್ಲಿ ಮಾದರಿ ರಸ್ತೆ ಮಾಡಬೇಕೆಂದಿದೆ. ತಮ್ಮ ವಾರ್ಡ್ ನಲ್ಲೂ ಮಾದರಿ ರಸ್ತೆ ಆಗಬೇಕು. ಕಳೆದ ಸಾಲಿನಲ್ಲಿ ಅನುಮೋದನೆಯಾಗಿದ್ದು, ಈ ಬಜೆಟ್ನಲ್ಲಾದರೂ ಕಾಮಗಾರಿಗೆ ಹಣ ಒದಗಿಸಬೇಕು. ಡಿ.ಎಸ್.ಉಮಾ ಪ್ರಕಾಶ ಪಾಲಿಕೆ ಸದಸ್ಯೆ, ಮಾಜಿ ಮೇಯರ್---------------
ವಲಯ ಕಚೇರಿಗಳು ಯಾವ್ಯಾವ ವಾರ್ಡ್ಗೆ ಸಂಬಂಧಿಸಿದ್ದವು ಎಂಬ ಮಾಹಿತಿ ಸಮರ್ಪಕವಾಗಿ ನೀಡುತ್ತಿಲ್ಲ. ಮೊದಲು ವಲಯ ಕಚೇರಿ ವ್ಯಾಪ್ತಿಗೊಳಪಡುವ ವಾರ್ಡ್ಗಳ ಫಲಕ ಅಳವಡಿಸಿ. ವಿನಾಕಾರಣ ವಿದ್ಯಾರ್ಥಿಗಳಿಂದ ವಯೋವೃದ್ಧರವರೆಗೆ, ವಿಕಲಚೇತನರು ಹೀಗೆ ಎಲ್ಲರೂ ವಲಯ ಕಚೇರಿ ಅಲೆಯುವುದನ್ನು ತಪ್ಪಿಸಿ. ಪಾಲಿಕೆಯಾಗಿ 16 ವರ್ಷವಾದರೂ ಗಾಂಧಿ ನಗರದ ಕಮಾನು ಮೇಲೆ ನಗರಸಭೆ ಫಲಕ ಇದೆ. ಅಲ್ಲಿ ಪಾಲಿಕೆ ಅಂತಾ ಮೊದಲು ಬರೆಸಬೇಕು.ಎಲ್.ಎಂ.ಎಚ್.ಸಾಗರ್, ಕಾಂಗ್ರೆಸ್ ಮುಖಂಡ