ಕನ್ನಡಪ್ರಭ ವಾರ್ತೆ ಶಿರಾ
ಆಯುರ್ವೇದವು ಪ್ರತಿ ಋತುವಿನಲ್ಲಿ ನಾವು ಯಾವ ಆಹಾರ ಸೇವಿಸಬೇಕು ಮತ್ತು ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ. ಅದೇ ರೀತಿ ಜೀವನ ಬದಲಿಸಿಕೊಂಡರೆ ನಾವು ಧೀರ್ಘಾಯುಗಳಾಗಿ ಬದುಕಬಹುದು ಎಂದು ವೈದ್ಯಾಧಿಕಾರಿ ಡಾ.ಜಯಶ್ರೀ ಹೇಳಿದರು.ಅವರು ಶಿರಾ ತಾಲೂಕಿನ ನವ್ಯದಿಶ ಸಂಸ್ಥೆಯ ಯುವ ಚಾವಡಿ ಕಾರ್ಯಕ್ರಮದ ಭಾಗವಾಗಿ ಕಾಳಾಪುರದ ಆ್ಯಕ್ಟಿವ್ ಟೀನ್ ಕ್ಲಬ್ ಮತ್ತು ಬಾಲಯ್ಯನಪಾಳ್ಯದ ಉನ್ನತಿ ಟೀನ್ ಕ್ಲಬ್ ನ ಸದಸ್ಯರಿಗೆ ವಿಶ್ವ ಭೂ ದಿನದ ಅಂಗವಾಗಿ ಮಾಯಸಂದ್ರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಕ್ಷೇತ್ರಭೇಟಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಆಯುರ್ವೇದವು ನಾವು ದಿನನಿತ್ಯ ಬಳಸುವ ಸಾಂಬಾರ ಪದಾರ್ಥಗಳಾದ ಅರಿಶಿನ, ಶುಂಠಿ, ಜೀರಿಗೆ, ತುಳಸಿ ಮುಂತಾದವುಗಳನ್ನು ಔಷಧಿಯಂತೆ ನೋಡುತ್ತದೆ. ಹಾಗಾಗಿ ನಾವು ಪ್ರತಿನಿತ್ಯ ತಿನ್ನುವ ಆಹಾರವೇ ಔಷಧಿಯಾಗಬೇಕು. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳ ಮೂಲಕವೇ ಹೆಚ್ಚಿನ ಕಾಯಿಲೆಗಳನ್ನು ಗುಣಪಡಿಸಬಹುದು ಎಂಬುದು ಆಯುರ್ವೇದ ಚಿಕಿತ್ಸೆಯ ವಿಶೇಷ. ಜೊತೆಗೆ ರಾಸಾಯನಿಕ ಮುಕ್ತ ಬದುಕನ್ನು ಪ್ರೋತ್ಸಾಹಿಸುತ್ತದೆ, ಇದು ಮಣ್ಣು, ನೀರು ಮತ್ತು ಗಾಳಿಯ ಶುದ್ಧತೆಗೆ ಹೆಚ್ಚಿನ ಒತ್ತು ನೀಡುತ್ತದೆ. ಏಕೆಂದರೆ ಪರಿಸರ ಅಶುದ್ಧವಾದರೆ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಿಲ್ಲ ಎಂಬುದು ಆಯುರ್ವೇದದ ಮೂಲ ನಂಬಿಕೆ. ಆಯುರ್ವೇದವು ರೋಗಕ್ಕೆ ಚಿಕಿತ್ಸೆ ನೀಡುವುದಿಲ್ಲ, ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಒಂದು ವಿಧಾನವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಯೂತ್ ಮೆಂಟರ್ ಮಂಜುನಾಥ್ ಅಮಲಗೊಂದಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ನಾವು ತಿನ್ನುವ ಆಹಾರವು ರಾಸಾಯನಿಕಯುಕ್ತವಾಗಿದ್ದು, ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಅಲ್ಲದೇ ರಾಸಾಯನಿಕ ಕೃಷಿಯಿಂದ ಆಹಾರ ಗುಣಮಟ್ಟವು ಕುಂಠಿತವಾಗುತ್ತಿದೆ. ತಿನ್ನುವ ಆಹಾರ ಔಷಧಿಯಾಗಬೇಕಿತ್ತು, ಆದರೆ ಔಷಧಿಗಳನ್ನೇ ಆಹಾರದಂತೆ ಸೇವಿಸುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಜೊತೆಗೆ ಆಯುರ್ವೇದ ಚಿಕಿತ್ಸೆಯೂ ಆರೋಗ್ಯದ ಒಂದು ಪ್ರಮುಖ ಮಾರ್ಗವಾಗಿದೆ. ಹಾಗಾಗಿ ಹದಿಹರೆಯದವರಿಗೆ ಅರಿವು ಮೂಡಿಸುವುದು ಈ ಕ್ಷೇತ್ರಭೇಟಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಎರಡೂ ಟೀನ್ ಕ್ಲಬ್ ಸದಸ್ಯರಿಗೆ ಆಯುರ್ವೇದ ಔಷಧಗಳ ಬಗ್ಗೆ ಒಂದು ಪ್ರಾತ್ಯಕ್ಷಿಕವಾಗಿ ತೋರಿಸಿ, ಎಲ್ಲರಿಗೂ ಅಗತ್ಯವಾಗಿ ಬೇಕಾದ ಔಷಧಿಗಳನ್ನು ಸಹ ವಿತರಿಸಲಾಯಿತು. ಆಯುರ್ವೇದ ಔಷಧಿಗಳ ಉಪಯೋಗದ ಬಗ್ಗೆ ಟೀನ್ ಗಳೊಂದಿಗೆ ಸಂವಾದ ನಡೆಸಲಾಯಿತು. ಕೆಲವು ಸಾಮಾಜಿಕ ಕೌಶಲ್ಯಗಳ ಬಗೆಗಿನ ಆಟಗಳನ್ನು ಆಡಿಸಲಾಯಿತು.
ಸಂಸ್ಥೆಯ ಸಂಯೋಜಕರಾದ ಜನಾರ್ಧನ್, ಯೂಥ್ ಮೆಂಟರ್ ಕಿರಣ್ ಕುಮಾರ್, ಆಸ್ಪತ್ರೆಯ ಸಿಬ್ಬಂದಿ ಪೂಜಾ ಹಾಜರಿದ್ದರು.