ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಮಹಾ ಕ್ಯಾತೆ

| N/A | Published : Jun 03 2025, 04:40 AM IST

Almatti Dam

ಸಾರಾಂಶ

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಮಹಾ ಕ್ಯಾತೆ

ಅಣೆಕಟ್ಟೆ ಎತ್ತರಿಸಿದರೆ ಸಾಂಗ್ಲಿ, ಕೊಲ್ಹಾಪುರಕ್ಕೆ ಪ್ರವಾಹ

ಯೋಜನೆ ಕೈಬಿಡುವಂತೆ ಸಿಎಂಗೆ ಫಡ್ನವೀಸ್‌ ಪತ್ರ: ಡಿಕೆಶಿ

  ಬೆಂಗಳೂರು : ಕೃಷ್ಣಾ ನ್ಯಾಯಾಧಿಕರಣದ ಐತೀರ್ಪಿನಂತೆ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಲು ಆಲಮಟ್ಟಿ ಅಣೆಕಟ್ಟು ಎತ್ತರಿಸುವುದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಹಿತ ಕಾಪಾಡಲು ರಾಜ್ಯದ ಎಲ್ಲ ಸಂಸದರು, ಕೇಂದ್ರ ಸಚಿವರು ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧಿಕರಣವು ನೀಡಿದ ತೀರ್ಪಿನಂತೆ ಕೃಷ್ಣಾ ನದಿಯ ಹೆಚ್ಚುವರಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಆಲಮಟ್ಟಿ ಆಣೆಕಟ್ಟನ್ನು 519.6 ಮೀ.ನಿಂದ 524 ಮೀ.ಗೆ ಹೆಚ್ಚಿಸಬೇಕಿದೆ. 10ಕ್ಕೂ ಹೆಚ್ಚಿನ ವರ್ಷಗಳ ಹಿಂದೆಯೇ ನ್ಯಾಯಾಧಿಕರಣದ ಐತೀರ್ಪು ಬಂದಿದ್ದರೂ, ಈವರೆಗೆ ಅದರ ಅಧಿಸೂಚನೆ ಪ್ರಕಟಿಸಿಲ್ಲ. ಅಲ್ಲದೆ, ಕೆಲ ದಿನಗಳ ಹಿಂದೆ ಈ ಕುರಿತು ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವರು ಸಭೆಯನ್ನೂ ನಿಗದಿ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸಭೆಯನ್ನು ರದ್ದು ಮಾಡಿದ್ದರು. ಇದೀಗ ಮಹಾರಾಷ್ಟ್ರ ಸಿಎಂ ಆಲಮಟ್ಟಿ ಅಣೆಕಟ್ಟು ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ. ಹೀಗಾಗಿ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಇದು ನಿಜಕ್ಕೂ ಅಘಾತಕಾರಿ ವಿಚಾರ ಎಂದರು.

ನ್ಯಾಯಾಧಿಕರಣ ತೀರ್ಪು ಬಂದು 10ಕ್ಕೂ ಹೆಚ್ಚಿನ ವರ್ಷಗಳಾಗಿವೆ. ಈವರೆಗೆ ಆಲಮಟ್ಟಿ ಅಣೆಕಟ್ಟು ಎತ್ತರಿಸುವುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಮಹಾರಾಷ್ಟ್ರ, ಇದೀಗ ಏಕಾಏಕಿ ವಿರೋಧ ವ್ಯಕ್ತಪಡಿಸುತ್ತಿದೆ. 2010ರ ತೀರ್ಪಿನ ಬಗ್ಗೆ ಈವರೆಗೆ ಮಹಾರಾಷ್ಟ್ರ ಎಲ್ಲೂ ಪ್ರಶ್ನಿಸಿಲ್ಲ. ಈ ಯೋಜನೆ ಜಾರಿ ಮಾಡಲಿ ಎಂದೇ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದೆ. ಆದರೆ ಈಗ ಇದ್ದಕ್ಕಿದ್ದಂತೆ ಪತ್ರ ಬರೆದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಎಂಬುದು ಕೃಷ್ಣಾ ನದಿ ನೀರು ಬಳಕೆಗೆ ನ್ಯಾಯಾಧಿಕರಣ ನಮಗೆ ನೀಡಿರುವ ಹಕ್ಕು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೆರಡು ದಿನಗಳಲ್ಲಿ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದು ನಮ್ಮ ನಿಲುವನ್ನು ತಿಳಿಸುತ್ತಾರೆ ಎಂದು ಹೇಳಿದರು.

ರಾಜ್ಯದ ವಿ. ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗವಾಗಿದ್ದಾರೆ. ಆಲಮಟ್ಟಿ ಯೋಜನೆಯು ನಮ್ಮ ರಾಜ್ಯದ ಹಿತವಾಗಿದ್ದು, ಅದರ ಅನುಷ್ಠಾನಕ್ಕೆ ಸಹಕರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳ ಜತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗಿರುವುದರಿಂದ ಯೋಜನಾ ವೆಚ್ಚ ಹೆಚ್ಚಳವಾಗುತ್ತಿದ್ದು, ಭೂಸ್ವಾಧೀನಕ್ಕಾಗಿಯೇ 1 ಲಕ್ಷ ಕೋಟಿ ರು.ಗೂ ಹೆಚ್ಚಿನ ಹಣ ಬೇಕಾಗಲಿದೆ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವರು, ರಾಜ್ಯದ ಸಂಸದರು ಸಹಕಾರ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಪ್ರವಾಹ ಎದುರಾಗುತ್ತದೆ ಎಂಬುದು ಅವರ ಆಂತರಿಕ ಸಮಸ್ಯೆ. ಅದನ್ನು ಅವರೇ ಸರಿಪಡಿಸಿಕೊಳ್ಳಲಿ. ನಮಗೆ ನಮ್ಮ ರೈತರ ಹಿತ ಕಾಪಾಡುವುದು ಮುಖ್ಯ. ಅದಕ್ಕಾಗಿ ಸರ್ಕಾರ ಬದ್ಧವಾಗಿದ್ದೇವೆ. 2013ರಿಂದ ಗೆಜೆಟ್‌ ನೋಟಿಫಿಕೇಷನ್‌ ಆಗಬೇಕು ಎಂದು ಕಾಯುತ್ತಿದ್ದೇವೆ. ಇನ್ನು ಎಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ಸಿಎಂ ಪತ್ರದ ಹಿಂದೆ ರಾಜಕೀಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ರಾಜಕೀಯವೇ ಅಥವಾ ಅಲ್ಲವೇ ಎಂದು ಪ್ರತಿಕ್ರಿಯಿಸುವುದಿಲ್ಲ. ರಾಜ್ಯದ ಹಿತಾಸಕ್ತಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಮ್ಮ ಪಾಲಿನ ಹಕ್ಕಿನ ನೀರನ್ನು ಬಳಸಲು ಯೋಜನೆ ಜಾರಿಯಾಗುವುದು ನಮಗೆ ಮುಖ್ಯ. ನಾನು ಈ ವಿಚಾದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Read more Articles on