ನಾಪೋಕ್ಲು: ಸಮಾಜದ ಮಕ್ಕಳಿಗೆ ಭಾಷೆ ಹಾಗೂ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕು ಎಂದು ಲೇಖಕಿ, ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಐಚoಡ ರಶ್ಮಿ ಪೂವಮ್ಮ ಹೇಳಿದರು. ಇಲ್ಲಿನ ಕೊಡವ ಸಮಾಜದ ಪೊಕ್ಕಡ ಪರಿಷತ್ ವತಿಯಿಂದ ಭಾನುವಾರ ಕೊಡವ ಸಮಾಜದ ಹರದಾಸ ಅಪ್ಪ ನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಪೊಮ್ಮಕ್ಕಡ ಪರಿಷತ್ ನಾಪೋಕ್ಲು ವತಿಯಿಂದ ಆಯೋಜಿಸಲಾಗಿದ್ದ ಕಕ್ಕಡ ತೀನಿ ನಮ್ಮೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ. ಇದರ ಜೊತೆಗೆ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಜನಾಂಗ ರೂಡಿಸಿಕೊಳ್ಳಬೇಕು. 1ನೇ ತರಗತಿಯಿಂದ ಡಿಗ್ರಿವರೆಗೆ ಕೊಡವ ಪಠ್ಯಪುಸ್ತಕ ಮುದ್ರಣ ಆಗಿದ್ದು, ಕೊಡವ ಭಾಷೆಯಲ್ಲಿ ಬೋಧಿಸುವ ಶಿಕ್ಷಕರ ಅಗತ್ಯವಿದೆ ಎಂದ ಅವರು, 10 ಕೋಟಿ ರು. ವೆಚ್ಚದಲ್ಲಿ ಕೊಡವ ಅಧ್ಯಯನ ಪೀಠ ಸ್ಥಾಪನೆಯಾಗಿದ್ದು, ಅಧ್ಯಯನ ಮಾಡುವವರಿಗೆ ಅವಕಾಶವಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.ಜಿ.ಪಂ. ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ತಿನಿಸುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಮೊದಲು ನಾವು ಆತ್ಮವಿಶ್ವಾಸ ಬೆಳೆಸಿಕೊಂಡು ಬಳಿಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಮಕ್ಕಳು ಎಷ್ಟೇ ಶಿಕ್ಷಣ ಪಡೆದರೂ ಅವರಿಗೆ ಕೊಡವ ಪದ್ಧತಿ, ಪರಂಪರೆ, ಸಂಸ್ಕೃತಿಯ ತಿಳಿವಳಿಕೆ ನೀಡಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಮುಕ್ಕಾಟಿರ ಸೌಮ್ಯ ಮಾತನಾಡಿ, ಪರಿಷತ್ ಉತ್ತಮ ಕಾರ್ಯಕ್ರಮ ರೂಪಿಸುತ್ತಿದೆ. ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪರಿಷತ್ ಕಾರ್ಯ ಶ್ಲಾಘನೀಯ ಎಂದರು.ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಪ್ರಮುಖವಾದದ್ದು. ಕೊಡವ ಸಮಾಜದ ಬೆಳವಣಿಗೆಯೊಂದಿಗೆ ಕೊಡವ ಪೊಮ್ಮಕ್ಕಳ ಪರಿಷತ್ ಕೂಡ ಅತ್ಯುತ್ತಮ ರೀತಿಯಲ್ಲಿ ಕೈಜೋಡಿಸುತ್ತಿದೆ. ಪರಿಷತ್ತಿನ ಸೇವೆ ಕೊಡವ ಪುರುಷರಿಗೂ ದೊರಕುವಂತಾಗಬೇಕು ಎಂದು ಶುಭ ಹಾರೈಸಿದರು.
ಕೊಡವಡ ಮಾಲ್ ಮಟ ಎಂಬ ವಿಷಯ ಕುರಿತು ಬಿದ್ದಾಟಂಡ ಮಮತಾ ಚಿಣ್ಣಪ್ಪ ವಿಚಾರ ಮಂಡಿಸಿದರು.ಕೊಡವ ಸಮಾಜ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ತಿನಿಸುಗಳ ಸ್ಪರ್ಧೆ ಹಾಗೂ ಪ್ರದರ್ಶನ ಮತ್ತು ಕ್ರೀಡಾಕೂಟ ಜರುಗಿತು.
ಅರೆಯಡ ಸರಸು ಪೆಮ್ಮಯ್ಯ ಪ್ರಾರ್ಥಿಸಿ, ನಾಯಕಂಡ ಜೂಬಿ ತಿಮ್ಮಯ್ಯ ಸ್ವಾಗತಿಸಿದರು. ಕಾಂಡಂಡ ಪ್ರತಿಜ ಅಚ್ಚಪ್ಪ ಮತ್ತು ಕರವಂಡ ಸೀಮ ಗಣಪತಿ ಅತಿಥಿಗಳ ಪರಿಚಯ ಮಾಡಿ, ವಂದನಾ ಚಿನ್ನಪ್ಪ ನಿರೂಪಿಸಿ, ಕಲಿಯಂಡ ಗೀತಾ ಗಿರೀಶ್ ವಂದಿಸಿದರು.