ಸಾರಾಂಶ
ಗಣಿತ ವಿಷಯ ಕಬ್ಬಿನದ ಕಡಲೆಯಲ್ಲ. ಅದನ್ನು ಕಲಿಸುವ ವಿಧಾನವನ್ನು ಆಟ-ಪಾಠಗಳೊಡನೆ ಮಿಶ್ರಗೊಳಿಸಿದಾಗ ಅದು ವಿದ್ಯಾರ್ಥಿಗಳಿಗೆ ಮನಮುಟ್ಟುತ್ತದೆ.
ಧಾರವಾಡ:
ಗಣಿತ ವಿಷಯ ಕಬ್ಬಿನದ ಕಡಲೆಯಲ್ಲ. ಅದನ್ನು ಕಲಿಸುವ ವಿಧಾನವನ್ನು ಆಟ-ಪಾಠಗಳೊಡನೆ ಮಿಶ್ರಗೊಳಿಸಿದಾಗ ಅದು ವಿದ್ಯಾರ್ಥಿಗಳಿಗೆ ಮನಮುಟ್ಟುತ್ತದೆ. ಗಣಿತದಲ್ಲಿ ಮಕ್ಕಳಿಗೆ ಆಸಕ್ತಿ ಬೆಳೆಸುವ ವಿನೂತನ ಕಾರ್ಯಕ್ರಮ ಜೆಎಸ್ಸೆಸ್ ಸಂಸ್ಥೆ ಮಾಡುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಆರ್ಯಭಟ ಗಣಿತ ಸಂಶೋಧನಾ ಕೇಂದ್ರ ಉದ್ಘಾಟಿಸಿದ ಅವರು, ಜೆಎಸ್ಎಸ್ನ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕೇಂದ್ರದ ಪ್ರಯೋಜನ ಪಡೆಯಲಿದ್ದಾರೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳಿಗೆ ಗಣಿತ ವಿಷಯ ಸ್ವಲ್ಪ ಕಷ್ಟಕರವಾಗಿ ಗೋಚರಿಸುವದರಿಂದ ಆಟವಾಡುತ್ತಲೇ ಕಲಿಯುವಂತಹ ವಾತಾವರಣ ನಿರ್ಮಿಸುವ ಸಲುವಾಗಿ ಈ ಕೇಂದ್ರ ಸ್ಥಾಪಿಸಲಾಗಿದೆ. ಗಣಿತ ವಿಷಯಗಳಿಗೆ ಸಂಬಂಧಿಸಿದ ಮಾದರಿ ಹಾಗೂ ಇಂಟರ್ಯಾಕ್ಟಿವ್ ಬೋರ್ಡ್ ಮುಖಾಂತರ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಬೋಧನೆ ಮಾಡಲಾಗುತ್ತದೆ ಎಂದರು.
ಈ ವೇಳೆ ಎಸ್ಡಿಎಂನ ಕಾರ್ಯದರ್ಶಿ ಜೀವಂಧರಕುಮಾರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ವೀರಣ್ಣ ಬೋಳಿಶೆಟ್ಟಿ, ಡಾ. ಮೋಹನ ತಾವರಗೇರಿ, ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ, ಉಷಾ ಸಂತೋಷ, ಸಹ ಸಂಯೋಜಕರಾದ ನಿರ್ಮಲ ಪಾಟೀಲ್, ಸಾವಿತ್ರಿ ಗತಾಡೆ, ಕಮಲಾಕ್ಷಿ ಸಣ್ಣಕ್ಕಿ ಇದ್ದರು.