ಕನ್ನಡಪ್ರಭ ವಾರ್ತೆ ತುರುವೇಕೆರೆ

ಕೃಷಿ ಇಲಾಖೆಯಿಂದ ಸಿಗುವ ಆಧುನಿಕ ಸವಲತ್ತುಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಆಧುನಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ರೈತರಿಗೆ ಕರೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಬೀಜ ವಿತರಣೆ, ಜೀಜೋಪಚಾರ ಆಂದೋಲನ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು ರೈತರು ಆಧುನಿಕ ಕೃಷಿಗೆ ಬೇಕಾದ ಸಲಕರಣೆಗಳನ್ನು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ತೆಗೆದುಕೊಂಡು ವ್ಯವಸಾಯಕ್ಕೆ ಬಳಸಿಕೊಳ್ಳಬೇಕು. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಲಾಭ ಬರುವಂತಹ ಸಮ್ಮಿಶ್ರ ಬೆಳೆಗಳನ್ನು ಬೆಳೆಯಬೇಕು ಎಂದರು. ಸಮಗ್ರ ಅಭಿವೃದ್ದಿ ಹೊಂದಿದ ಪ್ರಗತಿಪರ ರೈತರಾದ ಮಾದಿಹಳ್ಳಿಯ ರವಿಕುಮಾರ್, ದಬ್ಬೇಘಟ್ಟದ ಡಿ.ಆರ್.ರಾಜು, ಮಾರಪ್ಪನಹಳ್ಳಿಯ ಡಿ.ಆರ್.ಮೀನಾಕ್ಷಿ, ಕರಿಗೊಂಡನಹಳ್ಳಿಯ ನಾಗರಾಜು, ದೊಂಬರನಹಳ್ಳಿಯ ಡಿ.ಬಿ.ಚಂದ್ರಶೇಖರ್ ರವರನ್ನು ಗುರುತಿಸಿ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಇಲಾಖೆ ಸಹಾಯಕ ನಿದೇಶಕಿ ಬಿ.ಪೂಜಾ ಮಾತನಾಡಿದರು. ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಪದ್ಮನಾಭ್ ರೈತರಿಗೆ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ತಾಳಕೆರೆ ಶ್ರೀಕಾಂತ್, ಉಪಾಧ್ಯಕ್ಷ ದುಂಡಾಸುರೇಶ್, ಸದಸ್ಯರಾದ ಹಾವಾಳ ರಾಮೇಗೌಡ, ಎನ್.ಆರ್.ಸುರೇಶ್, ಬೇವಿನಹಳ್ಳಿ ಬಸವರಾಜು, ಶೇಷೇಗೌಡ, ಬ್ಯಾಟರಂಗಪ್ಪ, ನೀಲಕಂಠಯ್ಯ, ಕೃಷಿ ಇಲಾಖೆ ಗಿರೀಶ್ ಸೇರಿದಂತೆ ರೈತ ಮುಖಂಡರು ರೈತರು ಇದ್ದರು.