ಕವಿತಾಳ: ಸ್ಥಳಿಯ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಯಲಾಟ ಮತ್ತು ಸಾಮಾಜಿಕ ನಾಟಕಗಳನ್ನು ವೀಕ್ಷಿಸಬೇಕು ಎಂದು ತೊಪ್ಪಲದೊಡ್ಡಿ ಗ್ರಾಮದ ಮುಖಂಡ ರಾಜಶೇಖರ ಪರಾಪುರ ಹೇಳಿದರು.

ಪಟ್ಟಣ ಸಮೀಪದ ತೊಪ್ಪಲದೊಡ್ಡಿ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ರತಿ ಕಲ್ಯಾಣ, ಕೌಡ್ಲಿಕನ ಆರ್ಭಟ ರತಿಯ ಗೋಳಾಟ ಎಂಬ ಬಯಲಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಥಳೀಯ ಕಲಾವಿದರು ನಟಿಸುವ ಬಯಲಾಟ ಮತ್ತು ಸಾಮಾಜಿಕ ನಾಟಕಗಳಲ್ಲಿ ಉತ್ತಮ ಹಾಸ್ಯ ಸನ್ನಿವೇಶಗಳ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಸಾರಾಂಶ ಹೊಂದಿರುತ್ತದೆ. ಪ್ರಸ್ತುತ ದಿನಗಳಲ್ಲಿ ಮನರಂಜನೆಗೆ ಅನೇಕ ಮಾಧ್ಯಮಗಳಿದ್ದು ಇಂತಹ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಬಯಲಾಟಗಳಲ್ಲಿ ಸ್ಥಳೀಯರೇ ಭಾಗವಹಿಸುವುದು ಮತ್ತು ಯಾವುದೆ ಅಪೇಕ್ಷೆ ಇಲ್ಲದೆ ನಟಿಸುವ ಮುಗ್ಧ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ನರಸಣ್ಣ ಆದಿಮನಿ, ನಾಗನಗೌಡ ಮಾಲೀ ಪಾಟೀಲ್, ಸೂಗಪ್ಪ ಮೇಟಿ, ಅಕ್ಷಯ ದೇಸಾಯಿ ಇದ್ದರು.