ಸಾರಾಂಶ
ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಾಕ್ಸಿಂಗ್ ಒಂದು ಸಾಹಸ ಕ್ರೀಡೆಯಾಗಿದ್ದು, ಭಾರತದಲ್ಲೂ ಕೂಡ ಇದು ಜನಪ್ರಿಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದ ನೆಹರೂ ಒಳಾಂಗಣದ ಕ್ರೀಡಾಂಗಣದಲ್ಲಿ ಕರ್ನಾಟಕ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯಲ್ಲೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ 18 ವರ್ಷ ಮೇಲ್ಪಟ್ಟವರ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ನೀಡುವ ನೆಲವಾಗಿದೆ. ಅದೇ ರೀತಿ ಕ್ರೀಡಾಪಟುಗಳಿಗೂ ಕೂಡ ಪ್ರೋತ್ಸಾಹ ನೀಡುತ್ತ ಬಂದಿದೆ. ಇಲ್ಲಿ ಒಂದು ಸ್ನೇಹ ಪೂರ್ವಕ ವಾತಾವರಣವಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರಾಜ್ ನಾಯಕ್ ವಹಿಸಿದ್ದರು. 100ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ 10ವಿವಿಧ ತೂಕದ ವಿಭಾಗಗಳ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಈ ವೇಳೆ ಕೆ.ಇ.ಕಾಂತೇಶ್, ಡಿವೈಎಸ್ಪಿ, ಕರ್ನಾಟಕ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಹಿ ಸತೀಶ್, ಕ್ರೀಡಾಧಿಕಾರಿ ರೇಖಾ ನಾಯಕ್, ಕ್ಯಾಪ್ಟನ್ ಚಂದ್ರಶೇಖರ್, ಮೀನಾಕ್ಷಿ, ಸಹಕಾರ್ಯದರ್ಶಿ ವಿನೋದ್ ಮತ್ತಿತರರು ಇದ್ದರು.