ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿಕಾರಿಪುರದ ಪಿಜಿಯಲ್ಲಿ ಬಾಲಕಿ ನಾಪತ್ತೆ ಪ್ರಕರಣಕ್ಕೆ ಬಿಗ್ ತಿರುವು ಸಿಕ್ಕಿದ್ದು, ವರ್ಷದ ಹಿಂದೆ ನಡೆದಿದ್ದ ಪ್ರಕರಣ ಈಗ ಬಯಲಾಗಿದೆ. ಪ್ರಕರಣ ಸಂಬಂಧ ಮಂಗಳವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇಟ್ಟಿಗೆಹಳ್ಳಿ ಗ್ರಾಮದ ಗಂಗಾ ನಾಯ್ಕ್ ಜೊತೆಗೆ, ಆತನ ಎರಡನೇ ಪತ್ನಿ ಸೌಭಾಗ್ಯ ಹಾಗೂ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದ ರಂಜಿತ ಮತ್ತು ಪೀರ್ಯಾನಾಯ್ಕ ಎಂಬುವರು ಬಂಧನಕ್ಕೆ ಒಳಗಾದವರು.ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಂಗಾನಾಯ್ಕನ ಪತ್ನಿ ಸೌಭಾಗ್ಯ ಶಿಕಾರಿಪುರದಲ್ಲಿ ಪಿಜಿಯೊಂದನ್ನು ನಡೆಸುತ್ತಿದ್ದಳು. ಆ ಪಿಜಿಯಲ್ಲಿ ಅಪ್ತಾಯ ಬಾಲಕಿ ಕೆಲಸ ಮಾಡುತ್ತಿದ್ದಳು. ವರ್ಷದ ಹಿಂದೆ ನಡೆದ ಬಾಲಕಿ ಕಣ್ಮರೆಯಾಗಿದ್ದ ಪ್ರಕರಣ ಈ ಹೊಸ ತಿರುವು ಪಡೆದುಕೊಂಡಿದೆ.
ಆದರೆ, ಅಸಲಿಗೆ ಪಿಜಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕಿ ತಾಯಿಯನ್ನು ಕಳೆದುಕೊಂಡಿದ್ದಳು. ಇತ್ತ ತಂದೆಯ ಕುಡಿತದಿಂದ ಬೇಸತ್ತಿದ್ದ ಬಾಲಕಿ, ಕೆಲಸ ಹುಡುಕುತ್ತಾ ಶಿಕಾರಿಪುರಕ್ಕೆ ಬಂದಿದ್ದಳಂತೆ. ಈ ಸಂದರ್ಭದಲ್ಲಿ ಆರೋಪಿ ಸೌಭಾಗ್ಯ ಮಾಲೀಕತ್ವದ ಪಿಜಿಯಲ್ಲಿ ನೆಲೆಸಿದ್ದಳು. 2025ರ ಮೇ 18 ರಂದು ಗಂಗಾ ನಾಯ್ಕ್, ಸೌಭಾಗ್ಯ ಹಾಗೂ ಆಕೆಯ ಸ್ನೇಹಿತೆ ರಂಜಿತಾ ಗಲಾಟೆ ಮಾಡಿಕೊಂಡಿದ್ದರಂತೆ. ಅದೇ ದಿನ ಬಾಲಕಿ ಪಿಜಿಯ ಬಾತ್ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಘಟನೆಯಿಂದ ಹೆದರಿದ ಆರೋಪಿಗಳು ಪೊಲೀಸರಿಗೆ ತಿಳಿಸದೆ, ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಬಳಿ ಎಸೆದು ಬಂದಿದ್ದಾರೆ. ಗಂಗಾ ನಾಯ್ಕ್, ಸೌಭಾಗ್ಯ, ರಂಜಿತಾ ಜೊತೆ ಪೀರ್ಯಾನಾಯ್ಕ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದ. ಬಾಲಕಿಯ ತಂದೆ ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣವನ್ನು ಭೇದಿಸಿದ್ದಾರೆ.
ಆರೋಪಿಗಳು ಶವ ಎಸೆದಿದ್ದ ಸ್ಥಳದಲ್ಲಿ ಸದ್ಯ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿದ್ದು, ಎಫ್ಎಸ್ಎಲ್ಗೆ ರವಾನಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?:
ಬಾಲಕಿ ಸಾವಿಗೆ ಕಾರಣವಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡು ಬಳಿಕ ಮೃತದೇಹ ನಾಶ ಮಾಡಲು ಯತ್ನಿಸಿದ್ದ ಆರೋಪಿಗಳ ನಡುವೆ ವೈಯಕ್ತಿಕ ಕಾರಣದಿಂದ ಜಗಳ ಶುರುವಾಗಿದೆ. ಈ ಜಗಳ ಸಂದರ್ಭದಲ್ಲಿ ಬಾಲಕಿಯ ಸಾವಿನ ಸಂಗತಿ ಬೆಳಕಿಗೆ ಬಂದಿದ್ದಂತೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ.ಮೃತ ಬಾಲಕಿ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಆಕೆ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿರೋದು ಪಿಜಿಗೆ ಕೆಟ್ಟ ಹೆಸರು ತರುತ್ತದೆ. ಇದರಿಂದ ಬ್ಯುಸಿನೆಸ್ ಲಾಸ್ ಆಗುತ್ತದೆ, ಪೊಲೀಸ್ ಪ್ರಕರಣ ಆಗುತ್ತದೆ ಎಂಬ ಆತಂಕದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.