ಹಾವೇರಿ: ರಾಜ್ಯ ಸಚಿವ ಸಂಪುಟದಲ್ಲಿ ಕ್ಷತ್ರಿಯ ಸಮಾಜಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಬೇಕು. ಜಿಲ್ಲೆಯ ಶಾಸಕ ಶ್ರೀನಿವಾಸ ಮಾನೆ ಮತ್ತು ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಹಾವೇರಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಜೋರಾಪುರಿ, ಹಾವೇರಿ ಜಿಲ್ಲೆಯಲ್ಲಿ ಸುಮಾರು 1.15 ಲಕ್ಷ ಕ್ಷತ್ರಿಯ ಸಮಾಜದ ಜನಸಂಖ್ಯೆ ಇದ್ದರೂ ಸಚಿವ ಸಂಪುಟದಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಲಮಾಣಿ ಸಮುದಾಯವೂ ಕ್ಷತ್ರಿಯ ಸಮಾಜದ ಭಾಗವಾಗಿದ್ದು, ರಾಜ್ಯದಲ್ಲಿ ಕ್ಷತ್ರಿಯ ಸಮಾಜದ ಯಾವುದೇ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಬೇಸರದ ಸಂಗತಿ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವುದಾಗಿ ಈ ಹಿಂದೆ ಡಿ.ಕೆ. ಶಿವಕುಮಾರ ಉಪಮುಖ್ಯಮಂತ್ರಿಯಾಗಿದ್ದಾಗ ಸೂರಗೊಂಡನಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದರು. ಆದ್ದರಿಂದ ಅವರು ನೀಡಿದ ಮಾತಿನಂತೆ ಶ್ರೀನಿವಾಸ ಮಾನೆ ಹಾಗೂ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕ್ಷತ್ರಿಯ ಒಕ್ಕೂಟವು 39 ಸಮುದಾಯಗಳ ಒಕ್ಕೂಟವಾಗಿದ್ದು, ರಾಜ್ಯದಲ್ಲಿ ಸುಮಾರು 2 ಕೋಟಿ ಕ್ಷತ್ರಿಯ ಸಮುದಾಯದ ಜನರಿದ್ದಾರೆ. ಇಷ್ಟೊಂದು ದೊಡ್ಡ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಮತ್ತು ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಕನಿಷ್ಠ ಐವರು ಕ್ಷತ್ರಿಯ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ ಮೆಹರವಾಡೆ, ಪ್ರಮೋದ ನವಲೆ, ಮಹಾವೀರ ಗಣಾತೆ, ಉದಯ ತಾಂದಳೆ, ರಮೇಶ ಮಾಳೋದೆ, ಭಾಗ್ಯಾಶ್ರೀ ಮೋರೆ, ಅಶೋಕಸಿಂಗ್ ರಜಪೂತ, ಮೋಹನ್ಸಿಂಗ ರಜಪೂತ, ಚಂದ್ರಶೇಖರ ಜಾಧವ, ನಾಗೇಂದ್ರಪ್ಪ ಕೋಳಿಕಟ್ಟಿ, ಯಲ್ಲಪ್ಪ ಲದ್ವಾ, ಪ್ರಕಾಶ ಮಾಳದಕರ ಇತರರಿದ್ದರು.