ಹಾಸನ: ನಗರಸಭೆ ಎದುರು ಕಳೆದ ನಾಲ್ಕು ದಿನಗಳಿಂದ ಪೌರ ಕಾರ್ಮಿಕರು ಮತ್ತು ವಿವಿಧ ವೃಂದದವರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಶುಕ್ರವಾರ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ನಂತರ ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವವಾದುದು. ನಿಮ್ಮೆಲ್ಲರ ಸೇವೆಯನ್ನು ನಮ್ಮ ಸರ್ಕಾರ ಯಾವಾಗಲೂ ಗೌರವಿಸುತ್ತದೆ. ಹಾಗೆಯೇ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದರು. ನಾನೂ ಕೂಡ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ, ನಿಮ್ಮ ಬೇಡಿಕೆಗಳ ಪೈಕಿ ಯಾವನ್ನು ಅತಿ ಶೀಘ್ರವಾಗಿ ಈಡೇರಿಸಬಹುದೋ ಅವುಗಳನ್ನು ಮೊದಲು ಬಗೆಹರಿಸಿ, ನಂತರ ಹಂತ ಹಂತವಾಗಿ ಎಲ್ಲ ಬೇಡಿಕೆ ಈಡೇರಿಸಿ ಎಂದು ಮನವಿ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಹಾಸನ ನಗರಸಭೆ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿರುವ ಹಿನ್ನೆಲೆಯಲ್ಲಿ ಕಚೇರಿಗೆ ಭೇಟಿ ನೀಡಿ ಪಾಲಿಕೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ನೂತನ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಕ್ಷರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ನಗರಪಾಲಿಕೆ ಮೇಯರ್ ಎಂ. ಚಂದ್ರೇಗೌಡ, ಆಯುಕ್ತ ರಮೇಶ್ ಇತರರು ಉಪಸ್ಥಿತರಿದ್ದರು.