ಸಾರಾಂಶ
400 ಲಾರಿಗಳ ನಿಲುಗಡೆಗೆ ನಿಲ್ದಾಣ, 120 ಬೆಡ್ ಡಾರ್ಮಿಟರಿಕೃಷ್ಣ ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರ ಜಿಲ್ಲೆಯ ಅಮರಾವತಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಸಂಸ್ಥೆ ವತಿಯಿಂದ ಹೊಸಪೇಟೆ ಟ್ರಕ್ ಟರ್ಮಿನಲ್ ನಿರ್ಮಾಣವಾಗಿದ್ದು, ಈಗ ಲೋಕಾರ್ಪಣೆ ಆಗುತ್ತಿದೆ. ಒಂದೂವರೆ ದಶಕದ ಕನಸು ನನಸಾಗುತ್ತಿದೆ.
ಮೇ 5ರಂದು ಅಮರಾವತಿ ಗ್ರಾಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಈ ಹೊಸಪೇಟೆ ಟ್ರಕ್ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಎಚ್.ಆರ್. ಗವಿಯಪ್ಪ, ಸಂಸದ ಈ. ತುಕಾರಾಂ, ಶಾಸಕರು ಹಾಗೂ ಜನಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ.ಟ್ರಕ್ ಟರ್ಮಿನಲ್ ಸ್ವರೂಪ:
1980ರಲ್ಲಿ ಕರ್ನಾಟಕ ಟ್ರಕ್ ಟರ್ಮಿನಲ್ಸ್ ಲಿ. ಕಂಪನಿಯನ್ನು ಸರ್ಕಾರ ಸ್ಥಾಪನೆ ಮಾಡಿದ್ದು, 1991ರಲ್ಲಿ ದೇವರಾಜ ಅರಸು ಅವರ ಸ್ಮರಣಾರ್ಥ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಎಂದು ಬದಲಾಯಿಸಿದೆ. ಹೊಸಪೇಟೆಯ ಅಮರಾವತಿಯಲ್ಲಿ 37.26 ಎಕರೆ ಜಾಗದಲ್ಲಿ ಹೊಸಪೇಟೆ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಈಗ ₹37.10 ಕೋಟಿ ವೆಚ್ಚದಲ್ಲಿ 20 ಎಕರೆ ಜಾಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ.120 ಬೆಡ್ ಡಾರ್ಮಿಟರಿ:
ಹೊಸಪೇಟೆಯ ಟ್ರಕ್ ಟರ್ಮಿನಲ್ನಲ್ಲಿ 120 ಚಾಲಕರು, ಕ್ಲೀನರ್ಗಳು ವಾಸ್ತವ್ಯ ಹೂಡಲು 120 ಬೆಡ್ಗಳ ಡಾರ್ಮಿಟರಿ ನಿರ್ಮಾಣ ಮಾಡಲಾಗಿದೆ. ಡಾರ್ಮಿಟರಿಯಲ್ಲಿ ಶೌಚಾಲಯ, ಸ್ನಾನಗೃಹ, ಕೊಠಡಿಗಳು ಕೂಡ ಇವೆ. ಈ ಕಟ್ಟಡದಲ್ಲೇ ಕ್ಯಾಂಟಿನ್ ವ್ಯವಸ್ಥೆ ಕೂಡ ಮಾಡಲಾಗಿದೆ.ಇನ್ನೂ 39 ಏಜೆಂಟ್ ಕೊಠಡಿಗಳು, 9 ಗ್ಯಾರೇಜ್ ಶಾಪ್ ನಿರ್ಮಿಸಲಾಗಿದೆ. 100 ವಾಣಿಜ್ಯ ನಿವೇಶನ, ಎರಡು ಪೆಟ್ರೋಲ್ ಬಂಕ್ಗಳು, ಎರಡು ಶೌಚಾಲಯ ಬ್ಲಾಕ್ ನಿರ್ಮಿಸಲಾಗಿದೆ. ಜತೆಗೆ 22 ಉಗ್ರಾಣ ಪ್ಲಾಟ್ ಕೂಡ ನಿರ್ಮಿಸಲಾಗಿದೆ.
400 ಲಾರಿಗಳ ನಿಲುಗಡೆ:ಈ ಟ್ರಕ್ ಟರ್ಮಿನಲ್ 400 ಲಾರಿಗಳ ನಿಲುಗಡೆ ಸಾಮರ್ಥ್ಯ ಹೊಂದಿದೆ. ದೇಶದ ಯಾವುದೇ ಭಾಗದಿಂದ ಬರುವ ಲಾರಿಗಳನ್ನು ಇಲ್ಲಿ ಚಾಲಕರು, ಕ್ಲೀನರ್ಗಳು ನಿಲ್ಲಿಸಬಹುದು. ಇದರಿಂದ ಚಾಲಕರಿಗೂ ವಾಸ್ತವ್ಯಕ್ಕೆ ಅನುಕೂಲವೂ ಆಗಲಿದೆ. ಜತೆಗೆ ಈ ಟರ್ಮಿನಲ್ ಬಳಿ ವೈದ್ಯಕೀಯ ಸೌಲಭ್ಯ ಕೂಡ ದೊರೆಯಲಿದೆ. ಅಲ್ಲದೇ, ಈಗ ಜಿಲ್ಲಾಸ್ಪತ್ರೆ ಕಟ್ಟಡ ಕೂಡ ಟರ್ಮಿನಲ್ನಿಂದ 5 ಕಿಮೀ ಅಂತರದಲ್ಲಿ ನಿರ್ಮಾಣ ಆಗುತ್ತಿದೆ.
₹85 ಕೋಟಿ ಪ್ರಸ್ತಾವನೆ:ಹೊಸಪೇಟೆ ಟ್ರಕ್ ಟರ್ಮಿನಲ್ನಲ್ಲಿ ಇನ್ನುಳಿದ 17.26 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ₹85 ಕೋಟಿ ಮೊತ್ತದ ಪ್ರಸ್ತಾವನೆಯನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದೆ. ಈ ಹಣ ಮಂಜೂರಾದರೆ ಮತ್ತೆ 265 ಟ್ರಕ್ ಗಳ ನಿಲುಗಡೆಗೆ ನಿಲ್ದಾಣ, ಉದ್ಯಾನ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಕೂಡ ಪ್ಲಾನ್ ಮಾಡಲಾಗಿದೆ ಎಂದು ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಿರಿಗೌಡ ಎನ್.ಜಿ. ''''ಕನ್ನಡಪ್ರಭ''''ಕ್ಕೆ ತಿಳಿಸಿದರು.
ಅಮರಾವತಿ ಗ್ರಾಮದ 37.26 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಒಟ್ಟು 12.50 ಕೋಟಿಗಳಿಗೆ ಖರೀದಿಸಿ, ಈಗ 20 ಎಕರೆ ಜಾಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಟರ್ಮಿನಲ್ ಚಿತ್ರದುರ್ಗದಿಂದ ವಿಜಯಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 50ರ ಬಲಭಾಗದಲ್ಲಿದೆ. ಸಿಮೆಂಟ್ ಕಾಂಕ್ರಿಟ್ ಪಾರ್ಕಿಂಗ್, 2 ಕಿಮೀ ಸಿಸಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ, ವಿದ್ಯುತ್ ಸೌಲಭ್ಯ ಹಾಗೂ ಹೈ ಮಾಸ್ಕ್ ಲೈಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ಫುಡ್ ಪಾರ್ಕ್ ಪ್ಲಾನ್:
ಲಾರಿ ಚಾಲಕರು, ಕ್ಲೀನರ್ಗಳಿಗಾಗಿ ಫುಡ್ ಪಾರ್ಕ್ ನಿರ್ಮಾಣ ಮಾಡಲು ಕೂಡ ಯೋಜಿಸಲಾಗುತ್ತಿದೆ. ಇದಕ್ಕಾಗಿ ಜಾಗ ಕೂಡ ಒದಗಿಸಲು ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿ. ಸಂಸ್ಥೆ ಮುಂದಾಗಿದೆ.ಬೆಂಗಳೂರಿನ ಯಶವಂತಪುರ, ಮೈಸೂರು, ಧಾರವಾಡದ ಬೇಲೂರಿನಲ್ಲಿ ಟ್ರಕ್ ಟರ್ಮಿನಲ್ ಈಗಾಗಲೇ ಸ್ಥಾಪಿಸಲಾಗಿದೆ. ಬೆಂಗಳೂರಿನ ದಾಸನಪುರ, ಉತ್ತರ ಕನ್ನಡದ ದಾಂಡೇಲಿ, ಹುಬ್ಬಳ್ಳಿಯ ಅಂಚಟಗೇರಿ, ಚಾಮರಾಜನಗರ -ಗುಂಡ್ಲುಪೇಟೆ, ರಾಯಚೂರಿನ ಯರಮರಸ್ನಲ್ಲೂ ಟ್ರಕ್ ಟರ್ಮಿನಲ್ ಶೀಘ್ರವೇ ಪ್ರಾರಂಭವಾಗಲಿವೆ. ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಟ್ರಕ್ ಟರ್ಮಿನಲ್ಗಳ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.