ಸಾರಾಂಶ
ಸೋಮವಾರ ನಗರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಸಂಸ್ಥೆಗಳ ಆಶ್ರಯಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭಗವಾನ್ ಬುದ್ಧರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ಹಾಗೂ ತತ್ವಗಳನ್ನು ನಾವೂಅನುಸರಿಸಬೇಕು, ಅವರ ವಿಚಾರಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಪಾಲಿಸಬೇಕು ಎಂದು ಶಾಸಕ ಯಶ್ಪಾಲ್ ಎ, ಸುವರ್ಣ ಹೇಳಿದರು.ಸೋಮವಾರ ನಗರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಸಂಸ್ಥೆಗಳ ಆಶ್ರಯಲ್ಲಿ ನಡೆದ ಭಗವಾನ್ ಬುದ್ಧ ಜಯಂತಿ ಆಚರಣೆ ಉದ್ಘಾಟಿಸಿ, ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಜಗತ್ತಿಗೆ ಮಾನವತಾವಾದಿ ಸಂದೇಶವನ್ನು ಸಾರಿದ ಭಗವಾನ್ ಬುದ್ಧರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆಯವರು ಪಾಲಿಸುವಂತಾಗಬೇಕು. ಬುದ್ಧನ ಪ್ರಮುಖ ಬೋಧನೆಗಳಲ್ಲಿ ಸಕಲ ಜೀವಿಗಳಿಗೂ ಸಹಾನುಭೂತಿ ತೋರಿಸಬೇಕು, ಸ್ವಾತಂತ್ರ್ಯ ನೀಡಬೇಕು ಎನ್ನುವುದು ಒಂದಾಗಿದೆ. ಬುದ್ಧರ ತತ್ವಗಳು ಜಾತಿ, ವರ್ಣ, ವರ್ಗದ ವಿರುದ್ಧವಾಗಿದ್ದವು. ಸಾಮಾನ್ಯ ಜನರ ಜೊತೆಗೆ ಜೀವನ ನಡೆಸಿದ ಇವರು, ಮಾನವ ದೃಷ್ಟಿಕೋನದಿಂದಲೇ ಜನರ ದುಃಖವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದರು ಎಂದರು.ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭಗವಾನ್ ಬುದ್ಧರು ಆತ್ಮ, ತತ್ವಗಳ ಬಗ್ಗೆ ಜಾಗೃತಿಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಜ್ಞಾನಮಾರ್ಗ ಅನುಸರಿಸಿ ನಮ್ಮೊಳಗೆ ಜಾಗೃತಿ ಮೂಡಿಸಿಕೊಂಡು ಸಮಾಜವನ್ನು ಸುಧಾರಣೆ ಮಾಡುವಲ್ಲಿ ಶ್ರಮಿಸಬೇಕು ಎಂದರು.
ಬುದ್ಧರ ಕುರಿತಾಗಿ ವಕೀಲರಾದ ಮಂಜುನಾಥ್ ವಿ. ವಿಶೇಷ ಉಪನ್ಯಾಸ ನೀಡಿ, ಮೌಢ್ಯ ನಿರಾಕರಿಸಿ ಸತ್ಯವನ್ನು ಅನುಸರಿಸುವ ಮೂಲಕ ನೇರವಾದ ದೃಷ್ಟಿ ಕೋನ ಬೆಳೆಸಿಕೊಳ್ಳಬೇಕು ಎಂದು ಭೋದಿಸಿದ ಗೌತಮ ಬುದ್ಧರು, ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಜೀವನ ನಿರ್ವಹಣೆಯ ತತ್ವವನ್ನು ಜಗತ್ತಿಗೆ ಸಾರಿದರು ಎಂದರು.ಬುದ್ಧರ ಕುರಿತಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನಗಳನ್ನು ನೀಡಿ
ಗೌರವಿಸಲಾಯಿತು.ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಹೇಶ್ ಮಾರ್ಪಳ್ಳಿ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.