ಕನ್ನಡಪ್ರಭ ವಾರ್ತೆ ವಿಜಯಪುರ
ದೇವರು ನನಗೆ ದೃಷ್ಟಿ ಕೊಟ್ಟಿದ್ದರೆ ಬಹುಶಃ ಇಂತಹ ಸಾಧನೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ನಮ್ಮಲ್ಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಸಾಧನೆ ಮಾಡುವ ಮನಸ್ಸಿದ್ದರೆ ಸರ್ವವೂ ಸಿದ್ಧಿಯಾಗುತ್ತದೆ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಅವರು, ಗಣಿತ ಎನ್ನುವುದು ಹಲವರಿಗೆ ಕಬ್ಬಿಣದ ಕಡಲೆಯಾದರೆ ಕೆಲವರಿಗೆ ಅದು ಎಲ್ಲದಕ್ಕಿಂತಲೂ ಸಾಮಾನ್ಯವಾದ ವಿಷಯವಾಗಿ ಕಾಣುತ್ತದೆ. ಅದಕ್ಕೆ ಕಾರಣ ಆ ವಿಷಯದ ಮೇಲಿರುವ ಅಕ್ಕರೆ. ಯಾವುದನ್ನು ನಾವು ಇಷ್ಟಪಟ್ಟು ಮಾಡುತ್ತೇವೆಯೋ ಅದು ಎಂದಿಗೂ ನಮಗೆ ಬೇಸರ ಮೂಡಿಸುವುದಿಲ್ಲ. ಉದಾಹರಣೆಗೆ ನಾನೇ ಇದ್ದೇನೆ. ಕಣ್ಣಿದ್ದ ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದು ಕರೆಸಿಕೊಳ್ಳುತ್ತಾರೆ ಎಂದರೆ ನಾನೇಕೆ ಕರೆಸಿಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದಕ್ಕಾಗಿ ಇಂದು ನಿಮ್ಮೆದುರಿಗೆ ನಿಂತು ಮಾತಾಡುತ್ತಿದ್ದೇನೆ. ಅದಕ್ಕೆ ಹೇಳುತ್ತೇನೆ ಬದುಕಿನಲ್ಲಿ ಯಾವುದನ್ನು ಕೊರತೆ ಎಂದು ತಿಳಿದುಕೊಳ್ಳುತ್ತೇವೆಯೋ ಅದು ಎಂದಿಗೂ ನಮಗೆ ನೆಮ್ಮದಿ ನೀಡುವುದಿಲ್ಲ. ಅದರ ಬದಲಿಗೆ ಕೊರತೆಯನ್ನೇ ಬದುಕಿನ ಒರತೆಯನ್ನಾಗಿ ಮಾಡಿಕೊಂಡು ಹೆಜ್ಜೆ ಹಾಕಿದ್ದೇ ಆದಲ್ಲಿ ಬಾಳು ಹಸಿರಾಗುತ್ತದೆ ಎಂದರು.
ಪ್ರಾಂಶುಪಾಲ ಮಂಜುನಾಥ ಜುನಗೊಂಡ ಮಾತನಾಡಿ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಎಂದು ಡಾ.ಅಂಬೇಡ್ಕರ ಹೇಳಿದ ಮಾತು ಅಕ್ಷರಶಃ ಯುವಜನತೆ ಎದೆಯಲ್ಲಿ ಅಚ್ಚು ಹಾಕಿಸಿಕೊಳ್ಳಬೇಕು. ಕಣ್ಣಿಲ್ಲದ ವ್ಯಕ್ತಿ ಇಷ್ಟೆಲ್ಲ ಮಾಡುವಾಗ ದೇವರು ನಮಗೆ ಎಲ್ಲವನ್ನು ಸರಿಯಾಗಿ ಇಟ್ಟಿದ್ದಾನೆ. ಹೊಸ ಶತಮಾನಕ್ಕೆ ಮುನ್ನುಡಿ ಬರೆಯುವ ಅವಕಾಶ ಕೊಟ್ಟಿದ್ದಾನೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಅಪ್ಪ ಅಮ್ಮನ ಆಸೆಯನ್ನು ಈಡೇರಿಸುವುದರ ಕಡೆಗೆ ಹೆಜ್ಜೆ ಹಾಕಬೇಕೆ ಹೊರತು ನನ್ನಿಂದ ಏನಾಗುತ್ತದೆ. ನಾನೇನು ಮಾಡಬಲ್ಲೆ ಎಂದುಕೊಂಡು ಅಳುತ್ತ ಕುಳಿತುಕೊಳ್ಳಬಾರದು ಎಂದರು.ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ನಿಲಯದ ಮುಖ್ಯಸ್ಥರು, ನಿಲಯಪಾಲಕರು ಉಪಸ್ಥಿತರಿದ್ದರು. ಆಂಗ್ಲ ಉಪನ್ಯಾಸಕ ಮುಸ್ತಾಕ್ ಮಲಘಾಣ ನಿರೂಪಿಸಿದರು.