ಉಪ್ಪಿನಂಗಡಿ: ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಂಡಿರುವ ಕರಾಯದ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಬ್ರಹ್ಮರಥದ ಪುರ ಪ್ರವೇಶ ಕಾರ‍್ಯಕ್ರಮ ಸೋಮವಾರದಂದು ವಿಜೃಂಭಣೆಯಿಂದ ನಡೆಯಿತು.ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಳ ಸಮೀಪ ಬ್ರಹ್ಮರಥದ ಶೋಭಾ ಯಾತ್ರೆಗೆ ವಿಧಿ ವಿಧಾನ ನಡೆದ ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನಾಗಾರ್ಜುನ್ ರಾವ್ ಹಾಗೂ ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಚಾಲನೆ ನೀಡಿದರು.ಬ್ರಹ್ಮರಥದ ಸೇವಾ ಕರ್ತರಾದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಅತುಲ್‌ ಕುಮಾರ್ ಅವರು ತಮ್ಮ ಕುಟುಂಬದ ಹಿರಿಯರಾದ ದಿ. ವಿಜಯ ಎನ್. ಬಂಗೇರ ಮತ್ತು ದಿ. ಕೆ ನಾಣ್ಯಪ್ಪ ಬಂಗೇರ ಅವರ ಸ್ಮರಣಾರ್ಥವಾಗಿ ಕೊಡುಗೆಯಾಗಿ ನೀಡಿರುವುದಾಗಿ ಹೇಳಿದರು.

ಕಾರ‍್ಯಕ್ರಮ ಪೂರ್ಣಕುಂಭ ಸ್ವಾಗತದೊಂದಿಗೆ, ವೀರಗಾಸೆ, ಕೇರಳ ತೈಯಮ್, ಡೊಳ್ಳು ಕುಣಿತ, ವಯೋಲಿನ್, ಚೆಂಡೆಯೊಂದಿಗೆ ಒಂದು ಸಾವಿರಕ್ಕೂ ಅಧಿಕ ಭಜಕರನ್ನೊಳಗೊಂಡ ೫೦ ಭಜನಾ ತಂಡ, ಕೀಲು ಕುದುರೆ, ಸಿಡಿಮದ್ದು ಪ್ರದರ್ಶನದೊಂದಿಗೆ ಅದ್ದೂರಿ ಶೋಭಾಯಾತ್ರೆ ನಡೆಯಿತು.

ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಸದಸ್ಯರಾದ ಜಯವಿಕ್ರಮ್ ಕಲ್ಲಾಪು, ದಯಾನಂದ ಪಂಜಿಕುಡೇಲು, ಜಯಪ್ರಕಾಶ ಶೆಟ್ಟಿ ಮೈರಾ, ಕುಶಾಲಪ್ಪ ಗೌಡ ಇಜಿಮಾನ್, ಸೂರ, ನಂದಿನಿ ದೇವರಮಾರು ತೇಜಸ್ವಿನಿ ಗರಡಿ ಜೀರ್ಣೋದ್ಧಾರ ಅಧ್ಯಕ್ಷ ಸುದರ್ಶನ್ ಕೊಲ್ಲಿ, ಸುರೇಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.