ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ವಿರೋಧ

| Published : Jun 25 2025, 12:34 AM IST

ಸಾರಾಂಶ

ಗೊಂಡಬಾಳ ಪಂಚಾಯಿತಿ ಯುಕೆಇಎಂ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿ ಕೋರಿಕೆ ಮೇರೆಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಕೇಳಲು ನೋಟಿಸ್‌ ಜಾರಿಗೊಳಿಸಿ ತಕರಾರು ಅರ್ಜಿ ಇದ್ದರೆ ಕಾಲಮಿತಿಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಇದು ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೆ ಗೊಂಡಬಾಳ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಯ ಜನರ ನಿದ್ದೆಗೆಡಿಸಿದೆ.

ಕೊಪ್ಪಳ:

ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಕೂಗಳತೆ ದೂರದಲ್ಲಿಯೇ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ತೀವ್ರ ವಿರೋಧದ ನಡುವೆಯೂ ಯುಕೆಇಎಂ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿ ವಿವಿಧ ಪರವಾನಗಿ ಪಡೆದಿದ್ದು ಗ್ರಾಮ ಪಂಚಾಯಿತಿ ಅನುಮತಿಗೆ ಮುಂದಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗೊಂಡಬಾಳ ಗ್ರಾಮ ಪಂಚಾಯಿತಿ ಈ ಕುರಿತು ಆಕ್ಷೇಪಣೆ ಕೋರಿ ನೋಟಿಸ್ ಜಾರಿಗೊಳಿಸಿದ್ದರಿಂದ ಆಕ್ರೋಶಗೊಂಡಿರುವ ಮುದ್ದಾಬಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಪಂಚಾಯಿತಿ ನೋಟಿಸ್‌ಗೆ ಆಕ್ಷೇಪವೆತ್ತಿ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ವಿರೋಧಿಸಿ ವ್ಯಾಪಕ ಕೂಗು ವ್ಯಕ್ತವಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಬೃಹತ್ ಹೋರಾಟ ನಡೆಸಿದ್ದರು. ಈ ಮೂಲಕ ನಮ್ಮ ತಾಲೂಕಿಗೆ ಯಾವುದೇ ಕಾರ್ಖಾನೆ ಸ್ಥಾಪನೆ ಬೇಡ. ಈಗಿರುವ ಕಾರ್ಖಾನೆಗಳಿಂದ ಅನುಭವಿಸುತ್ತಿರುವ ಯಾತನೆ ಸಾಕಾಗಿದೆ. ಈಗಾಗಲೇ ಈ ಭಾಗದ ಜನರು ಕಾರ್ಖಾನೆಗಳಿಂದ ನೂರೆಂಟು ಆರೋಗ್ಯ ಸಮಸ್ಯೆ ಎದುರಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಹೊಸದಾಗಿ ಯಾವುದೇ ಕಾರ್ಖಾನೆ ಸ್ಥಾಪನೆ ಹಾಗೂ ಮುದ್ದಾಬಳ್ಳಿ ಮತ್ತು ಗೊಂಡಬಾಳ ಮಧ್ಯೆ ಸ್ಥಾಪಿಸಲು ಉದ್ದೇಶಿಸಿರುವ ಸಕ್ಕರೆ ಕಾರ್ಖಾನೆ ಕೈಬಿಡಬೇಕೆಂದು ಒತ್ತಾಯಿಸಿದ್ದರು.

ಆದರೆ, ಇದೀಗ ಏಕಾಏಕಿ ಗೊಂಡಬಾಳ ಪಂಚಾಯಿತಿ ಯುಕೆಇಎಂ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿ ಕೋರಿಕೆ ಮೇರೆಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಕೇಳಲು ನೋಟಿಸ್‌ ಜಾರಿಗೊಳಿಸಿ ತಕರಾರು ಅರ್ಜಿ ಇದ್ದರೆ ಕಾಲಮಿತಿಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಇದು ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೆ ಗೊಂಡಬಾಳ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಯ ಜನರ ನಿದ್ದೆಗೆಡಿಸಿದೆ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪಿಸಬಾರದೆಂಬ ಕೂಗು ಈ ಹಿಂದೆಯೂ ಪ್ರಬಲವಾಗಿ ವ್ಯಕ್ತವಾಗಿತ್ತು. ಈ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆದ ಅಹವಾಲು ಸಭೆಯಲ್ಲೂ ನೂರಾರು ರೈತರು ನಮಗೆ ಸಕ್ಕರೆ ಕಾರ್ಖಾನೆ ಬೇಡವೆಂದು ತಕರಾರು ಅರ್ಜಿ ಸಲ್ಲಿಸಿದ್ದರು. ಇವೆಲ್ಲ ಬೆಳವಣಿಗೆಗಳ ನಡುವೆಯೇ ರಾಜಕೀಯ ಪ್ರಭಾವದಿಂದ ಯುಕೆಇಎಂ ಕಂಪನಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಹವಣಿಸುತ್ತಿದೆ. ಆದರೆ, ಜನರು ಮಾತ್ರ ಕಂಪನಿಯು ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯಾಯಾಲಯ ಮೊರೆ:

ಗ್ರಾಮ ಪಂಚಾಯಿತಿಗೆ ಆಕ್ಷೇಪಣೆ ಸಲ್ಲಿಸಿರುವ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಗ್ರಾಮಸ್ಥರು ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡು ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದು ಸರಿಯಲ್ಲ. ಇದು ಕಾನೂನು ಬಾಹಿರವಾಗಿದ್ದು ಕಾನೂನು ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ.

ಪಂಚಾಯಿತಿಗೆ ಮನವಿ ಸಲ್ಲಿಸುವಾಗ ಗವಿಸಿದ್ದನಗೌಡ ಪಾಟೀಲ್, ರಾಜುರಡ್ಡಿ ಮಾದಿನೂರು, ಪ್ರಭು ಗೊಂಡಬಾಳ, ಮಲ್ಲಪ್ಪ ಕುಕನೂರು, ಗವಿಸಿದ್ದಪ್ಪ ಹುಳ್ಳಿ, ರಾಕೇಶಗೌಡ ಪಾಟೀಲ್, ಅಮರೇಶಗೌಡ ಪಾಟೀಲ್, ಮಂಜುನಾಥ ತಳವಾರ, ಮೈಲಾರಪ್ಪ ಗೊಂಡಬಾಳ, ವಿಶ್ವನಾಥ ಹಳ್ಳಿಗುಡಿ ಇದ್ದರು.