ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪೊಲೀಸ್ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಯಾರದೋ ಒತ್ತಡದ ಮೇಲೆ ಸಣ್ಣಪುಟ್ಟ ಕೇಸುಗಳನ್ನು ಮುಂದೂ ಮಾಡಿ ಅದರ ಆಧಾರದಲ್ಲಿ ನಿರಪರಾಧಿ ವ್ಯಕ್ತಿಗಳ ಮೇಲೆ, ಅದರಲ್ಲಿಯೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ, ರೌಡಿ ಶೀಟ್ ತೆರೆಯುತ್ತಿರುವುದು ಬೇಸರದ ಸಂಗತಿಯಾಗಿದ್ದು, ಕೂಡಲೇ ಇದನ್ನು ಸರಿಪಡಿಸಬೇಕೆಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಆಗ್ರಹಿಸಿದ್ದಾರೆ.ಅವರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರಿಗೆ ಮನವಿ ನೀಡಿ, ವಿನಾಃಕಾರಣ ರೌಡಿ ಶೀಟರ್ ತೆರೆಯುತ್ತಿರುವುದರಿಂದ ಈ ರೀತಿ ರೌಡಿ ಶೀಟ್ ತೆರೆದ ವ್ಯಕ್ತಿಗಳು ಕೋರ್ಟಗೆ ಹೋಗಿ ಅದರ ಮೇಲೆ ಸ್ಟೇ ಕೂಡ ತಂದಿದ್ದಾರೆ.
ಅಧಿಕಾರಿಗಳ ಈ ವರ್ತನೆಗೆ ಕೋರ್ಟ ಸಹ ಒಪ್ಪಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದಾಗ್ಯೂ ಕಾರ್ಯಕರ್ತರನ್ನು ಬೆದರಿಸುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ನಿಮ್ಮ ಇಲಾಖೆಯ ಅಧಿಕಾರಿಗಳು ನಾ ಮುಂದು ತಾ ಮುಂದು ಎಂದು ರೌಡಿಶೀಟ್ ಓಪನ್ ಮಾಡುತ್ತಿದ್ದಾರೆ. ಓಪನ್ ಮಾಡಿದಾಗ್ಯೂ ಸಹ ಕ್ರಮಬದ್ಧವಾಗಿ ಕಾನೂನು ಪರಿಪಾಲನೆಯ ಪ್ರಕ್ರಿಯೆ ಮಾಡುತ್ತಿಲ್ಲ. ವ್ಯಕ್ತಿಗಳಿಗೆ ಪ್ರತ್ಯುತ್ತರಕ್ಕೆ ಸಮಯ ಕೊಡದೆ ಉದ್ದೇಶಪೂರ್ವಕವಾಗಿ ನೋಟಿಸ್ ನ್ನು ಕೊನೆಯ ದಿನ ವ್ಯಕ್ತಿಗಳಿಗೆ ತಲುಪಿಸಿ ಅವರ ಉತ್ತರ ಕೊಡಲಿಕ್ಕೂ ಸಮಯವಿಲ್ಲದಂತೆ ಮಾಡಿ ರೌಡಿಶೀಟರ್ ಗೆ ಸೇರಿಸಿ ಆರ್ಡರ್ ಕಳುಸುತ್ತಿದ್ದಾರೆ ಇದು ಎಷ್ಟು ಸರಿ ಎಂದರು.ಈ ಪ್ರಕ್ರಿಯೆ ನೋಡಿದರೆ ಇದು ಸೇಡಿನ ಮನೋಭಾವ ಎಂದು ಕಂಡುಬರುತ್ತಿದೆ. ಇದನ್ನು ಹಿಂದೆ ನಿಂತು ಕಾಣದ ಕೈಗಳು ಈ ಪ್ರಕ್ರಿಯೆಗೆ ಒತ್ತಡ ಹಾಕುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ. ಈ ಹಿಂದೆಯೂ ಕೂಡ ಇದೇ ಅಧಿಕಾರಿಗಳೊಂದಿಗೆ ನಾವು ಒಡನಾಡಿದ್ದೇವೆ. ಆಗ ಈ ರೀತಿಯ ಯಾವುದೇ ಸಮಸ್ಯೆಗಳು ಇರಲಿಲ್ಲ.ಆದರೆ ಇತ್ತಿತ್ತಲಾಗಿ ಈ ಬದಲಾವಣಿ ಕಾಣುತ್ತಿದೆ. ಇದು ಸಾರ್ವಜನಿಕರಲ್ಲಿ ಚರ್ಚಿಸುವ ವಿಷಯವಾಗಿದೆ. ಕಾರಣ ಅನವಶ್ಯಕವಾಗಿ ಈ ರೀತಿ ತೊಂದರೆ ಕೊಡುತ್ತಿರುವುದನ್ನು ಹಿಂದೂ ಸಂಘಟನೆಗಳ ಮುಖಂಡರು ವಿರೋಧಿಸುತ್ತಿದ್ದು, ಕೂಡಲೇ ಈ ವ್ಯವಸ್ಥೆಯನ್ನು ಸರಿಪಡಿಸಿ, ಶಾಂತಿ ನೆಲೆಸುವಂತೆ ಕ್ರಮಜರುಗಿಸಬೇಕೇಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರಾದ ಸಂಪತ ರಾಠಿ, ಕಮಲಕಿಶೋರ ಮಾಲಪಾಣಿ, ಪ್ರಶಾಂತ ಜವಳಿ, ಈಶ್ವರ ಮುರಗೋಡ, ಮಹೇಶ ಪಾಟೀಲ, ಮಲ್ಲಯ್ಯ ತುಪ್ಪದ, ಮಲ್ಲಿಕಾರ್ಜುನ ಬಾದಾಮಿಮಠ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.