ಜನರಲ್ಲಿ ಕಾಯಕ, ದಾಸೋಹದ ಪರಿಕಲ್ಪನೆ ಮೂಡಿಸಬೇಕು

| Published : Feb 19 2024, 01:34 AM IST

ಸಾರಾಂಶ

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಜೊತೆಗೆ ಅವರ ವಚನಗಳನ್ನು ಹಾಕಬೇಕು. ಜನರಲ್ಲಿ ಕಾಯಕ,ದಾಸೋಹದ ಪರಿಕಲ್ಪನೆ ಮೂಡಿಸುವ ಅವಶ್ಯಕತೆ ಇದೆ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಜೊತೆಗೆ ಅವರ ವಚನಗಳನ್ನು ಹಾಕಬೇಕು. ಜನರಲ್ಲಿ ಕಾಯಕ,ದಾಸೋಹದ ಪರಿಕಲ್ಪನೆ ಮೂಡಿಸುವ ಅವಶ್ಯಕತೆ ಇದೆ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮಿಗಳು ಹೇಳಿದರು.

ಅವರು ಶನಿವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಭವನದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ ವಿಶ್ವಗುರು ಬಸವಣ್ಣ ಸಂಸ್ಕೃತಿಕ ನಾಯಕ ಅವರ ಭಾವಚಿತ್ರ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನುಡಿದಂತೆ ನಡೆದವರು, ನಡೆದಂತೆ ನುಡಿದು, ಎಲ್ಲರಿಗೂ ಸಮಪಾಲು, ಸಮಬಾಳು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮಜಲಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ವಿ.ಬಿ.ಚೌಗಲಾ ಮಾತನಾಡಿ, ವರ್ಗರಹಿತ, ಜಾತಿರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ವಚನಗಳನ್ನು ರಚಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಯಕ, ದಾಸೋಹ ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ ಚಿದಂಬರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಹಂಪಣ್ಣವರ, ಪುರಸಭೆ ಹಿರಿಯ ಸದಸ್ಯ ಪ್ರಭಾಕರ ಕೋರೆ, ನೌಕರರ ಸಂಘಧ ಅಧ್ಯಕ್ಷ ಬಿ.ಎ.ಕುಂಭಾರ, ಸೋಮು ಗವನಾಳೆ, ರವಿ ಮಾಳಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣೆ, ಪ್ರಮೀಳಾ ದೇಶಪಾಂಡೆ, ಸಿಡಿಪಿಒ ಭಾರತಿ ಕಾಂಬಳೆ, ರಾಜು ಗುಲಗಂಜಿ, ರಾಜು ಸೊಲ್ಲಾಪೂರೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ ಸ್ವಾಗತಿಸಿದರು. ಮಹಾಂತೇಶ ನಿಡವಣೆ ವಂದಿಸಿದರು.