ಪತ್ರಕರ್ತರ ಕ್ರೀಡಾಕೂಟದಲ್ಲಿ ಕೆ.ವಿ.ನವೀನ್ ಕಿರಣ್ ಅಭಿಮತ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸೋಲು-ಗೆಲುವು ಮುಖ್ಯವಲ್ಲಾ ಭಾಗವಹಿಸುವಿಕೆ ಮುಖ್ಯ ಎಂದು ತಿಳಿದು ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಶ್ರೀಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದರು.

ನಗರದ ಹೊರವಲಯದ ಕೆ.ವಿ. ಕ್ಯಾಂಪಸ್‌ನಲ್ಲಿ ಕೆವಿ ಮತ್ತು ಪಂಚಗಿರಿ ದತ್ತಿಗಳ 30 ನೇ ದತ್ತಿದಿನಾಚರಣೆ ಹಾಗೂ ಸಂಸ್ಥಾಪರಾದ ಸಿ.ವಿ. ವೆಂಕಟರಾಯಪ್ಪನವರ 111ನೇ ಜಯಂತಿ ಅಂಗವಾಗಿ ಪತ್ರಕರ್ತರಿಗಾಗಿ ಮಂಗಳವಾರ ಏರ್ಪಡಿಸಿದ್ದ ಕ್ರೀಡಾಕೂಟ ಸಮಾರಂಭದಲ್ಲಿ ಮಾತನಾಡಿ, ಮಾಜಿ ಶಾಸಕ ದಿವಂಗತ ಸಿ.ವಿ. ವೆಂಕಟರಾಯಪ್ಪನವರ ದೂರದೃಷ್ಟಿಯ ಫಲವಾಗಿ ಚಿಕ್ಕಬಳ್ಳಾಪುರವು ವಿದ್ಯಾಕಾಶಿಯಾಗಿದೆ. ಕಳೆದ 29 ವರ್ಷಗಳಿಂದ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮತ್ತು ಕೆಲಸ ಮಾಡುತ್ತಿರುವ ಎಲ್ಲರಿಗೂ ಬೇದ ಭಾವ ಮರೆತು ಒಗ್ಗೂಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಪ್ರತಿನಿತ್ಯವೂ ತಮ್ಮ ವೃತ್ತಿಯ ಜಂಜಾಟದಲ್ಲಿ ಇರುವ ಪತ್ರಕರ್ತರಿಗಾಗಿಯೂ ಕಳೆದ ಎರಡು ದಶಕಗಳಿಂದಲೂ ಪತ್ರಕರ್ತರಗಾಗಿಯೇ ಆಯೋಜನೆ ಮಾಡಿಕೊಂಡು ಬರಲಾಗುತ್ತದೆ. ಇದರಲ್ಲಿ ಸಕ್ರಿಯವಾಗಿ ಪತ್ರಕರ್ತರು ಭಾಗವಹಿಸುತ್ತಿರುವುದು ನಿಜಕ್ಕೂ ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ. ಪತ್ರಿಕಾ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಿದೆ. ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರಿಗೂ ವೈಯಕ್ತಿಕ ಜೀವನ ಇರುತ್ತದೆ ತಮ್ಮ ವೃತ್ತಿ ಬದುಕಿನ ಜೊತೆಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಬೇಕು ಎಂದರು.


ಜಿಲ್ಲೆಯ ಪ್ರತಿಷ್ಠಿತ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳು ಶಿಕ್ಷಣ ಕ್ಷೇತ್ರ ಅಷ್ಟೇ ಅಲ್ಲದೆ ಸಾಮಾಜಿಕ ಕ್ಷೇತ್ರಗಳಲ್ಲಿಯೂ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ವಿಶ್ವ ದಾಖಲೆ ಗುರಿಯೊಂದಿಗೆ ಸ್ವಯಂ ಪ್ರೇರಿತ ಬೃಹತ್‌ ರಕ್ತದಾನ ಶಿಬಿರವನ್ನು ಜು. 23ರಂದು ಏರ್ಪಡಿಸಲಾಗಿದೆ. ದಾನಿಗಳು ನೀಡಿದ ರಕ್ತವನ್ನು ಭಾರತೀಯ ರೆಡ್ ಕ್ರಾಸ್‌ಗೆ ಸಂಸ್ಥೆಯಿಂದ ಇದುವರೆವಿಗೂ ನೀಡುತ್ತಾ ಬಂದಿದ್ದು, ಇದೀಗ ಮುಂದಿನ ವಾರದಲ್ಲಿ ನಡೆಯಲಿರುವ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ಆಗಮಿಸಿ, ಎಲ್ಲರೂ ರಕ್ತದಾನ ಮಾಡಿ ನಾವು ನೀವು ಸಾಮಾಜಿಕ ಕಳಕಳಿ ಮೆರೆಯೋಣ ಎಂದರು.

ಕ್ರೀಡಾಕೂಟದಲ್ಲಿ 100 ಮೀ. ಓಟ, ಲಾಂಗ್ ಜಂಪ್, ಬ್ಯಾಸ್ಕೆಟ್ ಬಾಲ್ ಎಸೆತ, ಗುಂಡು ಎಸೆತ, ಬಕೆಟ್‌ ಇನ್‌ದ ಬಾಲ್, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ ಇನ್ನಿತರೆ ಕ್ರೀಡೆಗಳಲ್ಲಿ 60 ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿ ಆಟವಾಡಿ ಸಂತೋಷಪಟ್ಟರು. ಕೇವಲ ವರದಿಗಾರಿಕೆಗೆ ಸೀಮಿತವಾಗಿದ್ದ ಪತ್ರಕರ್ತರು ದಿನವಿಡೀ ಕ್ರೀಡಾಕೂಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್. ವೆಂಕಟೇಶ್, ಪ್ರಾಧ್ಯಾಪಕರಾದ ನಾಗರಾಜ ನಾಯ್ಡು, ಡಾ.ಅಮರ್ , ಫರೀಧ್ ಬಾಬು,ಕೆ ಟೆಕ್ಸ್ ಬಾಬು, ಅರುಣ್, ಸಿದ್ದಪ್ಪ, ಪುನೀತ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಎನ್.ವೆಂಕಟೇಶ್, ಪತ್ರಕರ್ತರು, ಮತ್ತಿತರರು ಇದ್ದರು.

ಸಿಕೆಬಿ-2 ನಗರದ ಹೊರವಲಯದ ಕೆ.ವಿ.ಕ್ಯಾಂಪಸ್ ನಲ್ಲಿ ಕೆವಿ ಮತ್ತು ಪಂಚಗಿರಿ ದತ್ತಿಗಳ 30 ದತ್ತಿದಿನಾಚರಣೆ ಅಂಗವಾಗಿ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಲಾಂಗ್ ಜಂಪ್ ಕ್ರೀಡೆಯಲ್ಲಿ ನಿರತರಾಗಿರುವ ಪತ್ರಕರ್ತರು